ಆಹಾರ ಧಾನ್ಯಗಳಿ ಮೇಲೆ ಜಿಎಸ್ಟಿಗೆ ವಿರೋಧ: ದಾವಣಗೆರೆಯಲ್ಲಿಅಕ್ಕಿಗಿರಣಿಗಳು ಬಂದ್
ದಾವಣಗೆರೆ, ಜುಲೈ 15 : ಆಹಾರ ಧಾನ್ಯಗಳ ಮೇಲೆ ಶೇಕಡಾ 5ರಷ್ಟು ಜಿಎಸ್ ಟಿ ವಿರೋಧಿಸಿ ಜಿಲ್ಲೆಯಾದ್ಯಂತ ಅಕ್ಕಿ ಗಿರಣಿಗಳ ಮಾಲೀಕರು ಬಂದ್ ಘೋಷಿಸಿದ್ದು, ಶುಕ್ರವಾರ ಮತ್ತು ಶನಿವಾರ ರೈಲ್ ಮಿಲ್ಗಳಲ್ಲಿ ಯಾವುದೇ ಚಟುವಟಿಕೆ ಇರುವುದಿಲ್ಲ ಎಂದು ಅಕ್ಕಿ ಗಿರಣಿಗಳ ಮಾಲೀಕರ ತಿಳಿಸಿದೆ.
ಜಿಎಸ್ಟಿ ಮಂಡಳಿ ಆಹಾರ ಧಾನ್ಯಗಳ ಮೇಲೆ ಶೇ. 5ರಷ್ಟು ಜಿಎಸ್ಟಿ ವಿಧಿಸಲು ನಿರ್ಧರಿಸಿರುವುದು ಜಿಲ್ಲೆಯ ಎಲ್ಲಾ ಅಕ್ಕಿ ಗಿರಣಿಗಳ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದ್ದು, ಜಿಲ್ಲೆಯಾದ್ಯಂತ ಬಂದ್ ಮಾಡುವ ಜೊತೆ ಆಹಾರ ಧಾನ್ಯಗಳ ಮಾರಾಟ ವಹಿವಾಟನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಗಿದೆ.
ದಾವಣಗೆರೆ ಜಿಲ್ಲಾ ಅಕ್ಕಿ ಗಿರಣಿದಾರರ ಸಂಘದ ಪ್ರಮುಖರು ಹಾಗೂ ಪದಾಧಿಕಾರಿಗಳು ಆಹಾರ ಧಾನ್ಯಗಳ ವರ್ತಕ ಸಂಘ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಅವರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ರಾಜ್ಯ ಅಕ್ಕಿ ಗಿರಣಿದಾರರ ಸಂಘ ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಿದ್ದು ಅತ್ಯಗತ್ಯ ಆಹಾರ ಧಾನ್ಯಗಳನ್ನು ಜಿಎಸ್ಟಿ ತೆರಿಗೆಯಿಂದ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿದೆ. ಸಂಘದ ಪ್ರತಿಭಟನೆಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಕೃಷಿ, ಕೈಗಾರಿಕೆ ಯಂತ್ರೋಪಕರಣಕ್ಕೆ ಶೇ.18ರಷ್ಟು ತೆರಿಗೆ ಅವೈಜ್ಞಾನಿಕ
ಈಗ ಆಹಾರ ಪದಾರ್ಥವಾದ ಅಕ್ಕಿಗೆ ಶೇ. 5ರಷ್ಟು ಜಿಎಸ್ಟಿ ವಿಧಿಸಿದ್ದಲ್ಲಿ ಕ್ವಿಂಟಾಲ್ ಗೆ ಸುಮಾರು 400 ರೂಪಾಯಿ ಜಾಸ್ತಿ ಆಗಲಿದೆ. ಅಕ್ಕಿ ಗಿರಣಿ ಮಾಲೀಕರು ಈಗಾಗಲೇ ಭತ್ತ ಬೆಳೆಯ ಕೊರತೆ, ದುಬಾರಿ ವಿದ್ಯುತ್ ದರ ಏರಿಕೆ, ಕಾರ್ಮಿಕರ ಸಮಸ್ಯೆ ಸೇರಿದಂತೆ ಕಾನೂನಾತ್ಮಕ ವಿಚಾರಗಳಿಂದ ಮಿಲ್ ಗಳನ್ನು ನಡೆಸುವುದಕ್ಕೆ ದುಸ್ತರ ಪಡುತ್ತಿದ್ದಾರೆ. ಬೆಳೆದ ಆಹಾರ ಧಾನ್ಯದ ಸಂಸ್ಕರಣ ಪ್ರಕ್ರಿಯೆಗೆ ಶೇಕಡಾ 5ರಷ್ಟು ಜಿಎಸ್ಟಿಯನ್ನು ಸೇವಾಶುಲ್ಕದ ರೀತಿಯಲ್ಲಿ ನೀಡುತ್ತಿದ್ದೇವೆ. ಈಗ ಮತ್ತೆ ಉತ್ಪಾದಿಸಿದ ಅಕ್ಕಿಗೆ ಶೇಕಡಾ 5ರಷ್ಟು ಜಿಎಸ್ಟಿ ವಿಧಿಸಿರುವುದು ಅವೈಜ್ಞಾನಿಕ. ಕೃಷಿ, ಕೈಗಾರಿಕೆ ಯಂತ್ರೋಪಕರಣಗಳಿಗೆ ಇದ್ದ ಶೇ. 5ರಷ್ಟನ್ನು ಶೇಕಡಾ 18ಕ್ಕೆ ಏರಿಕೆ ಮಾಡಿರುವುದು ಕೃಷಿ, ಕೈಗಾರಿಕೆಗಳ ಅಸ್ತಿತ್ವಕ್ಕೆ ಧಕ್ಕೆ ಆಗಲಿದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಹೊಸ ತೆರಿಗೆ ಜನಸಾಮಾನ್ಯರಿಗೆ ಹೊರೆ
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಂಘದ ಕಾರ್ಯದರ್ಶಿ ಕೋಗುಂಡಿ ಬಕ್ಕೇಶಪ್ಪ, "ಇತ್ತೀಚೆಗೆ ಕೇಂದ್ರ ಸರ್ಕಾರ ಜೂನ್ 28 ಮತ್ತು 29 ರಂದು ಜಿ.ಎಸ್.ಟಿ ಮಂಡಳಿಯು ಆಹಾರ ಧಾನ್ಯಗಳ ಮೇಲೆ ಶೇ. 5ರಷ್ಟು ತೆರಿಗೆ ವಿಧಿಸಿರುವುದರಿಂದ ದೇಶದ್ಯಂತ ಜುಲೈ 18ರಿಂದ ಜಾರಿಗೆ ಬರಲಿದೆ. ಆಹಾರ ಧಾನ್ಯಗಳಾದ ಅಕ್ಕಿ, ಜೋಳ, ರಾಗಿ ಇತರೆ ಅಗತ್ಯ ವಸ್ತುಗಳನ್ನು ಕಾರ್ಮಿಕರು, ಬಡವರು, ಮಧ್ಯಮ ವರ್ಗದವರಿಗೆ ದಿನನಿತ್ಯ ಬಳಸುವ ಅವಶ್ಯಕ ಪದಾರ್ಥಗಳ ಮೇಲೆ ತೆರಿಗೆ ಹೆಚ್ಚಾಗಲಿದೆ. ಇದರ ಪರಿಣಾಮ ಜನಸಾಮಾನ್ಯರ ಮೇಲೆ ಬೀಳಲಿದೆ" ಎಂದು ಹೇಳಿದರು.

ಪ್ರತಿಭಟನೆ ಮೂಲಕ ವಿರೋಧ
ಜನಸಾಮಾನ್ಯರಿಗೆ , ಗಿರಣಿ ಮಾಲಿಕರಿಗೆ ಹೊರಯಾಗುವ ಆಹಾರ ಧಾನ್ಯಗಳ ಮೇಲೆ ವಿಧಿಸಿರುವ ಜಿಎಸ್ಟಿಯನ್ನು ಹಿಂಪಡೆಯಬೇಕು. ಈಗಾಗಲೇ ರಾಜ್ಯ, ಕೇಂದ್ರ ಸರಕಾರಗಳಿಗೆ ಹಲವಾರು ಸಂಘ ಸಂಸ್ಥೆಗಳ ಮೂಲಕ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಅಲ್ಲದೆ ಕೇಂದ್ರ ಸರಕಾರದ ತೆರಿಗೆ ಇಲಾಖೆಯು ಈ ಬಗ್ಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಇದನ್ನು ಖಂಡಿಸಿ ಪ್ರತಿಭಟನೆ ಮೂಲಕ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದರು.

ಆಹಾರ ಧಾನ್ಯಗಳ ಮೇಲಿನ GST ಯಿಂದ ರೈತರಿಗೂ ಹೊರೆ
ದಾವಣಗೆರೆ ಜಿಲ್ಲೆಯಲ್ಲಿ 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದುಯ, ವರ್ಷಕ್ಕೆ ಸುಮಾರು 3.25 ಲಕ್ಷ ಟನ್ ಭತ್ತವನ್ನು ಉತ್ಪಾದನೆ ಮಾಡಲಾಗುತ್ತದೆ. ಸರಕಾರದ ಈ ಹೊಸ ತೆರಿಗೆ ನಿಯಮದಿಂಧ ರೈತರಿಗೆ ಮತ್ತು ವ್ಯಾಪಾರಿಗಳಿಗೆ ನಷ್ಟವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ವರ್ತಕರು ಎರಡೂ ದಿನ ಎಲ್ಲಾ ವ್ಯಾಪಾರ, ಉದ್ಯಮದ ವಹಿವಾಟನ್ನು ನಿಲ್ಲಿಸಿವುದಾಗಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿನ 90ಕ್ಕೂ ಹೆಚ್ಚು ಅಕ್ಕಿ ಗಿರಣಿಗಳು, ದಾವಣಗೆರೆ ನಗರದಲ್ಲಿನ ಸಗಟು ವ್ಯಾಪಾರ ಬಂದ್ ಮಾಡಿವೆ ಎಂದು ತಿಳಿಸಿದ್ದಾರೆ.












Click it and Unblock the Notifications