ವಿಡಿಯೋ; 15 ಸಚಿವರ ವಜಾಕ್ಕೆ ಎಂ. ಪಿ. ರೇಣುಕಾಚಾರ್ಯ ಆಗ್ರಹ!
ದಾವಣಗೆರೆ, ಜನವರಿ 30; ಶಾಸಕರಿಗೆ ಸುಳ್ಳು ಹೇಳಿಕೊಂಡು, ಜನರ ಕೈಗೆ ಸಿಗದ 15ಕ್ಕೂ ಹೆಚ್ಚು ದುರಹಂಕಾರಿ ಸಚಿವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಹೊನ್ನಾಳಿ ಬಿಜೆಪಿ ಶಾಸಕ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಒತ್ತಾಯಿಸಿದರು.
ಭಾನುವಾರ ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ನಾನು ತಪ್ಪು ಮಾಡಿದ್ದರೆ ಯಾವುದೇ ಶಿಕ್ಷೆ ಕೊಡಲಿ, ಅದನ್ನು ಸ್ವೀಕರಿಸುತ್ತೇನೆ. ದುರಹಂಕಾರಿ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದೇನೆ" ಎಂದರು.
"ಯಡಿಯೂರಪ್ಪ ಸಿಎಂ ಆಗಿದ್ದಾಗ ಐದು ನಿಮಿಷದಲ್ಲಿ ಸಿಗುತ್ತಿದ್ದರು. ಸಿಎಂ ಆದ ಮೇಲೆ ಬಸವರಾಜ ಬೊಮ್ಮಾಯಿ ಸ್ಪಂದಿಸುತ್ತಾರೆ. ಕೆಲವು ಸಚಿವರು ಸ್ಪಂದನೆ ಮಾಡುತ್ತಾರೆ. ಸ್ಪಂದಿಸುವ ಹಾಗೂ ಸ್ಪಂದಿಸದ ಸಚಿವರ ಪಟ್ಟಿಯನ್ನೂ ನೀಡಿದ್ದೇನೆ. ಆದರೆ ನಾನು ಲಿಖಿತ ದೂರು ಕೊಟ್ಟಿಲ್ಲ, ಕೊಡುವುದೂ ಇಲ್ಲ. ನಾನು ಕರೆ ಮಾಡಿ ಈಗಾಗಲೇ ಸಿಎಂ, ನಳೀನ್ ಕುಮಾರ್ ಕಟೀಲ್, ಅರುಣ್ ಸಿಂಗ್ ಜೊತೆ ಮಾತನಾಡಿದ್ದೇನೆ" ಎಂದು ಹೇಳಿದರು.

"ನಾನು ಬಿಜೆಪಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ. ಸಚಿವ, ಶಾಸಕ ಸ್ಥಾನ ದೊಡ್ಡದಲ್ಲ. ಪಕ್ಷದ ಕಾರ್ಯಕರ್ತ ಅನ್ನೋದೇ ದೊಡ್ಡ ಹೆಮ್ಮೆ. 15ಕ್ಕೂ ಹೆಚ್ಚು ದುರಹಂಕಾರಿ ಸಚಿವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರ ಜೊತೆ ಮಾತನಾಡಿದ್ದೇನೆ. ಅನೇಕ ಬಾರಿ ಹೇಳಿದ್ದೇನೆ. ಕಳೆದ 27ರಂದು ಕರೆ ಬಂದಿದೆ. ಅನೇಕ ಶಾಸಕರು ನನ್ನ ಮುಂದೆ ಭಾವನೆ ವ್ಯಕ್ತಪಡಿಸಿದ್ದಾರೆ. ಕೆಲ ಸಚಿವರು ಕೈಗೆ ಸಿಗುತ್ತಿಲ್ಲ, ಫೋನ್ ರಿಸೀವ್ ಮಾಡಲ್ಲ. ಮಾಡಿದರೂ ಸಚಿವರ ಆಪ್ತ ಸಹಾಯಕರು ಸ್ವೀಕರಿಸುತ್ತಾರೆ. ಏನಾದರೂ ಕೆಲಸಕ್ಕೆ ಪತ್ರ ಬರೆದರೆ ಕಾನೂನಾತ್ಮಕ ಪರಿಶೀಲನೆ ಮಾಡುತ್ತೇವೆ ಎಂಬ ಸಬೂಬು ಬರುತ್ತದೆ. ಇದು ಶಾಸಕರ ಕ್ಷೇತ್ರಕ್ಕೆ ಮಾಡಿದ ಅಪಮಾನ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಗೂ ಹೇಳಿದ್ದೇನೆ" ಎಂದು ರೇಣುಕಾಚಾರ್ಯ ವಿವರಿಸಿದರು.
"ಒಬ್ಬ ಸಚಿವರಿಗೆ ಎರಡರಿಂದ ಮೂರು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಆಪ್ತ ಸಹಾಯಕನಿಗೆ ಕರೆ ಮಾಡಿದರೆ ಕೋವಿಡ್ ಬಂದಿದೆ, ಕ್ವಾರಂಟೈನ್ನಲ್ಲಿ ಇದ್ದಾರೆ ಎನ್ನುತ್ತಾರೆ. ಕೊರೊನಾ ಬಂದವರು ಸಚಿವ ಸಂಪುಟ ಸಭೆಗೆ ಹಾಜರಾಗಿದ್ದರು. ಕ್ವಾರಂಟೈನ್ ಆದವರು ಹೇಗೆ ಬಂದರು? ಎಂದು ಆಪ್ತ ಕಾರ್ಯದರ್ಶಿ ಮೇಲೆ ರೇಗಾಡಿದೆ" ಎಂದು ರೇಣುಕಾಚಾರ್ಯ ತಿಳಿಸಿದರು.
"ನಮಗೆ ನೋವಿದೆ. ಏನಾದರೂ ಮಾತನಾಡಿದರೆ ಕೆಟ್ಟವರಾಗುತ್ತೇವೆ. 15 ಕ್ಕೂ ಹೆಚ್ಚು ಸಚಿವರು ಕರೆ ಸ್ವೀಕರಿಸಲ್ಲ. ಆದರೆ ಮತ್ತೆ ಕೆಲವು ಸಚಿವರು ಸ್ಪಂದಿಸುತ್ತಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಐದು ನಿಮಿಷದಲ್ಲಿ ಸಿಗುತ್ತಿದ್ದರು. ಬಸವರಾಜ ಬೊಮ್ಮಾಯಿ ಸಹ ಭೇಟಿಗೆ ಸಿಗುತ್ತಾರೆ. ಭೇಟಿಗೆ ಅವಕಾಶ ಕೇಳಿದರೆ ಬೊಮ್ಮಾಯಿ ತಕ್ಷಣವೇ ಬನ್ನಿ ಭೇಟಿ ಮಾಡಿ ಎನ್ನುತ್ತಾರೆ. ಯಡಿಯೂರಪ್ಪ, ಬೊಮ್ಮಾಯಿ, ಕೆಲ ಸಚಿವರು ಮಾತ್ರ ಕೈಗೆ ಸಿಗುತ್ತಾರೆ. ಕೈಗೆ ಸಿಗದ 15 ಸಚಿವರ ವಿರುದ್ಧ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದೇನೆ" ಎಂದರು.
"ಕೆಲ ದುರಹಂಕಾರಿ ಸಚಿವರ ವರ್ತನೆ ಖಂಡಿಸುತ್ತೇನೆ. ಜನರ ಕೈಗೆ ಸಿಗಲ್ಲ, ಶಾಸಕರಿಗೆ ಸುಳ್ಳು ಹೇಳುವ ಸಚಿವರಿಂದ ಸರ್ಕಾರ ಮತ್ತು ಸಂಘಟನೆಗೆ ಮುಜುಗರ ಆಗುತ್ತದೆ. ನಳಿನ್ ಕುಮಾರ್ ಕಟೀಲ್ ನಾಲ್ಕೈದು ದಿನಗಳಲ್ಲಿ ಎಲ್ಲಾ ಸಚಿವರ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ" ಎಂದು ರೇಣುಕಾಚಾರ್ಯ ಮಾಹಿತಿ ನೀಡಿದರು.












Click it and Unblock the Notifications