ಸವದಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಮತ್ತೆ ಅಸಮಾಧಾನ
ದಾವಣಗೆರೆ, ಆಗಸ್ಟ್ 23: ಲಕ್ಷ್ಮಣ್ ಸವದಿ ಅವರಿಗೆ ಸಚಿವ ಸ್ಥಾನವನ್ನು ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಹೊನ್ನಾಳಿಯಲ್ಲಿ ಶಾಸಕ ರೇಣುಕಾಚಾರ್ಯ ಮತ್ತೊಮ್ಮೆ ಅಸಮಾಧಾನ ಹೊರ ಹಾಕಿದ್ದಾರೆ. "ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಕೊಡೋದು ಅಷ್ಟು ಅವಸರವಿತ್ತಾ? ಪಕ್ಷದಲ್ಲಿ ಹಿರಿಯರು ಹತ್ತಾರು ಸಲ ಗೆದ್ದವರು ಬಹಳ ಜನ ಇದ್ದರು. ಅವರಿಗೆ ಸೂಕ್ತ ಸ್ಥಾನಮಾನ ನೀಡಬಹುದಿತ್ತು" ಎಂದಿದ್ದಾರೆ.
ನನಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಯಾವುದೇ ಬೇಸರವಿಲ್ಲ. ಮಾಧ್ಯಮಗಳಲ್ಲಿ ತಪ್ಪಾಗಿ ಸುದ್ದಿ ಮಾಡಲಾಗುತ್ತಿದೆ. ನನಗೆ ಸ್ಥಾನಮಾನ ಬೇಕಿದ್ದರೆ ಯಡಿಯೂರಪ್ಪ ಜೊತೆ ಅವರ ಮನೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. "ಉಮೇಶ್ ಕತ್ತಿ ಅವರು ಬೇರೆ ಎಲ್ಲೂ ಹೋಗಲ್ಲ. ನನ್ನ ಜೊತೆ ಅವರು ನಿನ್ನೆ ಮಾತನಾಡಿದ್ದಾರೆ. ಅವರು ಬಿಜೆಪಿಯಲ್ಲೇ ಇರುತ್ತಾರೆ" ಎಂದು ಕೂಡ ಸೇರಿಸಿದ್ದಾರೆ.
ದೇವೇಗೌಡರು ಹಾಗೂ ಸಿದ್ದರಾಮಯ್ಯ ಪರಸ್ಪರರು ಆರೋಪ- ಪ್ರತ್ಯಾರೋಪ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬೆಂಕಿ ಪೊಟ್ಟಣ ಮತ್ತು ಪೆಟ್ರೋಲ್ ಇದ್ದಂತೆ. ಅವರು ಯಾವತ್ತೂ ಒಂದಾಗುವುದಿಲ್ಲ. ಹೀಗೆ ಆಗುತ್ತೆ ಅನ್ನೋದು ನನಗೆ ಮೊದಲೇ ಗೊತ್ತಿತ್ತು. ಸಿದ್ದರಾಮಯ್ಯ ಅವರಿಗೆ, ನಿಮಗೆ ಸ್ವಾಭಿಮಾನವಿಲ್ಲವೇ ಅಂತ ಕೇಳಿದ್ದೆ ಎಂದಿದ್ದಾರೆ.

ಲಕ್ಷ್ಮಣ್ ಸವದಿ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ ಅವರು, ಹಿಂದೆ ಯಾರು, ಏನು ಮಾತನಾಡಿದರು ಎನ್ನುವುದು ಗೊತ್ತಿದೆ. ಅಧಿಕಾರ ಬಂದ ಮೇಲೆ ಬರುವವರು ಬಹಳಷ್ಟು ಜನ. ಗೆದ್ದಲು ಹುತ್ತ ಕಟ್ಟುತ್ತದೆ, ಹಾವು ಬಂದು ಹೊಕ್ಕಿಕೊಳ್ಳುತ್ತದೆ. ಈಗ ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ಬಂದಿದ್ದಾರೆ. ಮುಖ್ಯಮಂತ್ರಿಗಳನ್ನು ಹೊಗಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಹೊಗಳು ಭಟನಲ್ಲ, ನೇರವಾಗಿ ಮಾತನಾಡುವ ವ್ಯಕ್ತಿ. ಇದ್ದುದನ್ನು ನೇರವಾಗಿ ಹೇಳುವ, ಖಂಡಿಸುವ ವ್ಯಕ್ತಿ. ಜನರು ನನ್ನನ್ನು ಕಲ್ಲು ಬಂಡೆ ಥರ ಮಾಡಿದ್ದಾರೆ. ಪಕ್ಷದ ವಿರುದ್ದ, ಯಡಿಯೂರಪ್ಪ ವಿರುದ್ದ ಯಾವತ್ತೂ ಹೋಗಲ್ಲ. ಸೋತವರಿಗೆ ಸಚಿವ ಸ್ಥಾನ ಕೊಡುವುದು ಏನು ಇತ್ತು ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications