ಸಿದ್ದರಾಮಯ್ಯ ಅಮೃತಮಹೋತ್ಸವ: ಕಾರ್ಯಕ್ರಮದ ಡೀಟೇಲ್ಸ್
ದಾವಣಗೆರೆ, ಆಗಸ್ಟ್ 2: ಮಾಜಿ ಸಿಎಂ ಸಿದ್ದರಾಮಯ್ಯರ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿರುವ ಅಮೃತ ಮಹೋತ್ಸವಕ್ಕೆ ಬುಧವಾರ ಮಧ್ಯಾಹ್ನ 1ಗಂಟೆಗೆ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಆಗಮಿಸಲಿದ್ದಾರೆ ಎಂದು ಮಾಜಿ ಸಚಿವ ಹೆಚ್. ಎಂ. ರೇವಣ್ಣ ತಿಳಿಸಿದ್ದಾರೆ.
Recommended Video
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ - ಹರಿಹರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುವ ಈ ಮಹೋತ್ಸವದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, ರಣದೀಪ್ ಸರ್ಜಿವಾಲಾ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಬಿ. ಕೆ. ಹರಿಪ್ರಸಾದ್, ಡಾ. ಜಿ. ಪರಮೇಶ್ವರ್ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ನಾಯಕರು ಆಗಮಿಸಲಿದ್ದಾರೆ ಎಂದರು.
Breaking; ಸಿದ್ದರಾಮೋತ್ಸವ, ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯ
ಬೆಳಗ್ಗೆ 10 ಗಂಟೆಗೆ ನಾದಬ್ರಹ್ಮ ಹಂಸಲೇಖ, ಸಾಧುಕೋಕಿಲಾ ಹಾಗೂ ಸಂಗೀತಾ ಕಟ್ಟಿ ಅವರ ತಂಡದಿಂದ ಹಾಡುಗಾರಿಕೆ ನಡೆಯಲಿದೆ. 11.30ರಿಂದ ಕಾಂಗ್ರೆಸ್ ಹಿರಿಯ ನಾಯಕರ ಭಾಷಣ ಆರಂಭವಾಗಲಿದೆ. ಮಧ್ಯಾಹ್ನ 1ಗಂಟೆಗೆ ರಾಹುಲ್ ಗಾಂಧಿ ಆಗಮಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ವೇದಿಕೆಯ ಮುಂಭಾಗದಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅವರು ಸೇರಿದಂತೆ ಕೇಂದ್ರ ಮುಖಂಡರಿಗೆ ಆಸೀನ ವ್ಯವಸ್ಥೆ ಮಾಡಲಾಗಿದೆ. ಎಡಭಾಗದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ರಾಜ್ಯ ನಾಯಕರಿಗೆ ಡಯಾಸ್ ಮಾಡಲಾಗಿದೆ. ಬಲಭಾಗದಲ್ಲಿ ಕಾಂಗ್ರೆಸ್ ಹಿರಿಯ ನಾಯಕರು, ಸ್ವಾಗತ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳಿಗೆ ಡಯಾಸ್ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು.
ರಾಜ್ಯದ ಮೂಲೆ ಮೂಲೆಗಳಿಂದ ಜನರ ಆಗಮನ
ಸಿದ್ದರಾಮಯ್ಯ ಎಂದಿಗೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಸ್ನೇಹಿತರು, ಅಭಿಮಾನಿಗಳೆಲ್ಲರೂ ಸೇರಿ ಆಚರಿಸುತ್ತಿದ್ದೇವೆ. ಬಲವಂತವಾಗಿ ಸಿದ್ದರಾಮಯ್ಯ ಅವರನ್ನು ಈ ಕಾರ್ಯಕ್ರಮಕ್ಕೆ ಒಪ್ಪಿಸಿದ್ದೇವೆ. ನಾಡಿನ ಮೂಲೆಮೂಲೆಯಿಂದ ಜನಸಾಗರವೇ ಹರಿದು ಬರಲಿದೆ. ಏಳು ಲಕ್ಷಕ್ಕೂ ಮೀರಿ ಜನರು ಬರುತ್ತಾರೆ ಎಂಬ ನಿರೀಕ್ಷೆ ಇದೆ. ಬೀದರ್ ನಿಂದ ಹಿಡಿದು ಚಾಮರಾಜನಗರದವರೆಗೂ ಜನರು ಬಸ್, ಕಾರು, ಟಾಟಾಸುಮೋ, ಟ್ರ್ಯಾಕ್ಟರ್ ಸೇರಿದಂತೆ ತಮ್ಮ ವಾಹನಗಳಲ್ಲಿ ಬರಲಿದ್ದಾರೆ ಎಂದು ರೇವಣ್ಣ ಹೇಳಿದರು.
1500 ಬಸ್ ಬುಕ್ಕಿಂಗ್, ನಾಲ್ಕು ಲಕ್ಷ ಖುರ್ಚಿ ವ್ಯವಸ್ಥೆ
300 ಎಕರೆ ಜಾಗದಲ್ಲಿ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದೇವೆ. ಒಂದೂವರೆ ಸಾವಿರ ಬಸ್ ಗಳನ್ನು ನಾವು ವ್ಯವಸ್ಥೆ ಮಾಡಿದ್ದೇವೆ. ಇನ್ನೂ ಹೆಚ್ಚಾಗಿ ಬರುವ ಸಾಧ್ಯತೆ ಇದೆ. ಈಗಾಗಲೇ ನಾಲ್ಕು ಲಕ್ಷ ಖುರ್ಚಿಗಳನ್ನು ಹಾಕಲಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮ ಹತ್ತಿರದಿಂದ ವೀಕ್ಷಿಸಲು ಎಲ್ಇಡಿ ವ್ಯವಸ್ಥೆಯನ್ನು ಮಾಡಲಾಗಿದೆ.
1200 ಬಾಣಸಿಗರು
ಕಾಯರ್ಕ್ರಮಕ್ಕೆ ಬರುವ ಜನರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. 1200 ಬಾಣಸಿಗರು ಅಡುಗೆ ಮಾಡಲಿದ್ದು, ಬಫೆ ವ್ಯವಸ್ಥೆ ಮಾಡಲಾಗಿದ್ದು, ಪಲಾವ್, ಮೊಸರನ್ನ, ಮೊಸರು ಬಜ್ಜಿ, ಅರ್ಧ ಲೀಟರ್ ನೀರು ನೀಡಲಾಗುತ್ತದೆ. ಊಟದ ಜೊತೆಗೆ ಮೈಸೂರು ಪಾಕ್ ಇರಲಿದ್ದು, ಈಗಾಗಲೇ 6 ಲಕ್ಷ ಮೈಸೂರು ಪಾಕ್ಗಳನ್ನು ತಯಾರಿಸಲಾಗಿದೆ. ಕಳೆದ ಮೂರು ದಿನಗಳಿಂದ ದಿನಕ್ಕೆ ಒಂದರಿಂದ ಎರಡು ಲಕ್ಷ ಮೈಸೂರ್ ಪಾಕ್ ಸಿದ್ದಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಊಟದ ವ್ಯವಸ್ಥೆಗಾಗಿ ಒಂದೊಂದು ಕಡೆ 170 ಕೌಂಟರ್ ಗಳು ಇರುತ್ತವೆ. ಮಹಿಳೆಯರಿಗೆ ಪ್ರತ್ಯೇಕವಾಗಿ ಊಟದ ಕೌಂಟರ್ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮದ ದಿನ ಬೆಳಗ್ಗೆ 9 ಗಂಟೆಯಿಂದಲೇ ಊಟದ ವ್ಯವಸ್ಥೆ ಪ್ರಾರಂಭವಾಗಲಿದೆ.
ಸಿದ್ದರಾಮಯ್ಯ ಶಕ್ತಿ ಪ್ರದರ್ಶನವಲ್ಲ
ಸಿಎಂ ಸ್ಥಾನದಕ್ಕಾಗಿ ಪಕ್ಷದಲ್ಲಿ ಒಳಜಗಳ ನಡೆಯುತ್ತಿದಿಯಾ ಎಂಬ ಪ್ರಶ್ನೆಗೆ ಉತ್ತರಿಸಿ, "ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ರಾಜ್ಯದ ಮುಖ್ಯಮಂತ್ರಿಯಾಗುವ ಆಗುವ ಯೋಗ್ಯತೆ ಹೊಂದಿದ್ದಾರೆ. ಇದು ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲು ಹೊರಟಿರುವ ಕಾರ್ಯಕ್ರಮ ಅಲ್ಲ. ಶಕ್ತಿ ಪ್ರದರ್ಶನವೂ ಅಲ್ಲ. ಆದರೆ ಈ ಕಾರ್ಯಕ್ರಮ ಪಕ್ಷದ ಸಂಘಟನೆಗೆ ಅನುಕೂಲ ಆಗಲಿದೆ," ಎಂದು ತಿಳಿಸಿದರು.