ದಾವಣಗೆರೆ; ಕಾನನಕಟ್ಟೆಯಲ್ಲಿ ನಿಗೂಢ ಜ್ವರ, ಜನರಲ್ಲಿ ಆತಂಕ
ದಾವಣಗೆರೆ, ಜೂನ್ 24: ಮೈ ಕೈ ನೋವು, ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ದಿನಕಳೆದಂತೆ ಜಗಳೂರು ತಾಲೂಕಿನ ಕಾನನಕಟ್ಟೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ 20ಕ್ಕೂ ಹೆಚ್ಚು ಮಂದಿಗೆ ಜ್ವರ ಕಾಣಿಸಿಕೊಂಡಿದೆ. ಈ ಸಂಖ್ಯೆ ಜಾಸ್ತಿಯಾಗುತ್ತಲೇ ಇದ್ದು, ಮನೆಗೊಬ್ಬರಂತೆ ಈ ರೋಗಲಕ್ಷಣದಿಂದ ಬಳಲುತ್ತಿದ್ದಾರೆ.
ವೈರಲ್ ಫೀವರ್ ಹರಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಯಾವ ಸೋಂಕು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ರಸ್ತೆಯ ಪಕ್ಕದಲ್ಲಿ ತಿಪ್ಪೆ, ನೀರಿನಿಂದ ಕಟ್ಟಿಕೊಂಡಿರುವ ಚರಂಡಿಗಳು, ನಿಂತ ನೀರಿನಲ್ಲಿ ಲಾವಾ ಬ್ಯಾಕ್ಟೀರಿಯಾಗಳು, ಬಾಕ್ಸ್ ಚರಡಿಗಳಲ್ಲಿ ಇಲಿ, ಹೆಗ್ಗಣಗಳು ಹೆಚ್ಚಾದ ಕಾರಣ ಈ ರೀತಿಯಲ್ಲಿ ಜನರು ಬಳಲುತ್ತಿದ್ದಾರೆ ಎಂಬ ಮಾಹಿತಿ ಇದೆ.
ಪ್ರೀತಿಯಿಂದ ಸಾಕಿದ ಜೋಡೆತ್ತುಗಳನ್ನು ಸಿಂಗರಿಸಿ ಮದುವೆ ಮನೆಗೆ ಕರೆತಂದ ಯುವರೈತ
ರಾಷ್ಟ್ರೀಯ ಹೆದ್ದಾರಿ 56ಕ್ಕೆ ಹೊಂದಿಕೊಂಡಿರುವ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದಲ್ಲಿ ಈಗಾಗಲೇ ಹಲವರು ಚಿಕಿತ್ಸೆ ಪಡೆದಿದ್ದು, ಕೆಲವರು ಗುಣಮುಖರಾದರೆ ಮತ್ತೆ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಗಳಿಗೆ ತೆರಳಿ ಜಾಗೃತಿ
ಸುಮಾರು 1300 ಜನಸಂಖ್ಯೆ ಇರುವ ಇಡೀ ಗ್ರಾಮದಲ್ಲಿ 20 ರಿಂದ 25 ಮಂದಿ ರೋಗ ಲಕ್ಷಣದಿಂದ ಬಳಲುತ್ತಿರುವುದನ್ನು ಜಿಲ್ಲಾ ಮಲೇರಿಯಾ ಅಧಿಕಾರಿ ಕೆ.ನಟರಾಜ್ ದೃಢಪಡಿಸಿದ್ದಾರೆ. ಪ್ರತಿ ಮನೆ ಮನೆಗೂ ತಾಲೂಕು ಆರೋಗ್ಯಾಧಿಕಾರಿ ಟಿ. ನಾಗರಾಜ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದಾಗ ರೋಗಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಕಂಡು ಬಂದಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಸಭೆ ನಡೆಸಿ ನಂತರ ನಾಲ್ಕು ತಂಡಗಳನ್ನಾಗಿ ರಚಿಸಿ ಪ್ರತಿ ಮನೆಗೆ ತೆರಳಿ ಜಾಗೃತಿ ಮೂಡಿಸಿದರು.
ಉಕ್ರೇನ್ನಲ್ಲಿ ಮೃತಪಟ್ಟ ನವೀನ್ ಹೆತ್ತವರಿಂದ ಮೋದಿ ಭೇಟಿ: ಪಿಎಂ ಬಳಿ ಅವರ ಬೇಡಿಕೆ ಏನು?
ಪರಿಸರವನ್ನು ಸ್ವಚ್ಛಗೊಳಿಸಲು ಸೂಚನೆ
ಹಳೆ ಕಾನನಕಟ್ಟೆ ಮತ್ತು ಹೊಸ ಕಾನನಕಟ್ಟೆಗಳ ಗ್ರಾಮಗಳಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಮನೆಯ ಸುತ್ತಲಿನ ಪರಿಸರದ ಬಗ್ಗೆ ಅರಿವು ಮೂಡಿಸಿದರು. ಕುಡಿಯುವ ನೀರಿನ ತೊಟ್ಟಿಗಳನ್ನು ಪರಿಶೀಲಿಸಿ ನೀರಿನ ಸಂಗ್ರಹಣೆ ಮಿತವಾಗಿ ಮಾಡಿ. ಬಹುದಿನಗಳವರೆಗೆ ನೀರನ್ನು ಸಂಗ್ರಹಿಸಬೇಡಿ. ಹೂವಿನ ಕುಂಡ, ಟೈರ್ ಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ನಿಮ್ಮ ಗ್ರಾಮದ ಟ್ಯಾಂಕರ್ ನೀರು ಕುಡಿಯಬೇಡಿ. ಶುದ್ದ ಕುಡಿಯುವ ನೀರಿನ ಘಟಕದ ನೀರನ್ನು ಕುಡಿಯಿರಿ. ಜ್ವರ ಅಧಿಕವಾದರೆ ಆಸ್ಪತ್ರೆಯ ಸಿಬ್ಬಂದಿಗೆ ಮಾಹಿತಿ ನೀಡಿ ಎಂದರು.
ಗಡಿಗ್ರಾಮ ಕಾನನಕಟ್ಟೆಗೆಯಲ್ಲಿ ಶುಚಿತ್ವ ಮರೀಚಿಕೆ
ಅಣಬೂರು ಗ್ರಾಮ ಪಂಚಾಯಿತಿಗೆ ಸೇರುವ ಈ ಗಡಿಗ್ರಾಮ ಕಾನನಕಟ್ಟೆಯಲ್ಲಿ ಶುಚಿತ್ವ ಮರೀಚಿಕೆಯಾಗಿದೆ. ಕೊಳಚೆ ನೀರು ಕಟ್ಟಿರುವ ಬಾಕ್ಸ್ ಚರಡಿಗಳ ನೀರಿನಿಂದಲೇ ಈ ರೀತಿಯ ಸಮಸ್ಯೆ ಎದುರಾಗಿದೆ. ಅಲ್ಲದೇ ಜಲಜೀವನ್ ಮಿಷನ್ ಅಡಿ ಮನೆ ಮನೆಗೆ ನಲ್ಲಿ ಅಳವಡಿಸಲು ಗುಂಡಿ ತೆಗೆದಿದ್ದು ಗುಂಡಿಗಳಲ್ಲಿ ನಿಂತ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಚರಂಡಿ ಶುಚಿಗೊಳಿಸಬೇಕಾದ ಸ್ಥಳೀಯ ಆಡಳಿತ ಮೈ ಮರೆತು ಮಲಗಿದೆ. ಅಣಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲಿ, ಪಿಡಿಒ ಆಗಲಿ ಇತ್ತ ಕಡೆ ತಲೆ ಹಾಕಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಪಿಡಿಒ ಅವರಿಗೆ ಕರೆ ಮಾಡಿದರೆ ಅವರ ಫೋನ್ ಸ್ವಿಚ್ಆಫ್ ಆಗಿತ್ತು.
ತಾತ್ಕಾಲಿಕವಾಗಿ ಹೆಲ್ತ್ ಕ್ಯಾಂಪ್: ಕೆ. ನಟರಾಜ್
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಟಿ. ನಾಗರಾಜ್ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಎಂ. ವಿ. ವರಕೇರಿ, ತಾಲೂಕು ಹಿರಿಯ ಆರೋಗ್ಯ ಮೇಲ್ವಿಚಾರಣಾಧಿಕಾರಿ ಮಂಜಪ್ಪ, ಹೆಲ್ತ್ ಇನ್ಸ್ಪೆಕ್ಟರ್, ಜಗದೀಶ್, ಆರ್. ಲೋಕೇಶ್, ಮಹಿಳಾ ಆರೋಗ್ಯಾಧಿಕಾರಿ ಶುಕ್ಲಾ, ಆಶಾ ಕಾರ್ಯಕರ್ತೆಯರಾದ ಶಶಿಕಲಾ, ಇಂದಿರಾ, ಗೌರಮ್ಮ, ಶಾರದಮ್ಮ ಮನೆ ಮನೆ ಸರ್ವೇ ನಡೆಸಿ ಮಾಹಿತಿ ಪಡೆದರು. ಗ್ರಾಮದಲ್ಲಿ ದೊಡ್ಡ ಮಟ್ಟದ ರೋಗ ಲಕ್ಷಣಗಳು ಕಂಡು ಬಂದಿಲ್ಲ. ತಾತ್ಕಾಲಿಕವಾಗಿ ಹೆಲ್ತ್ ಕ್ಯಾಂಪ್ ಮಾಡುತ್ತೇವೆ. ರಕ್ತ ಮಾದರಿಗಳನ್ನು ಲ್ಯಾಬ್ಗೆ ಕಳುಹಿಸಿದ್ದೇವೆ. ರೋಗಿಗಳಿಗೆ ಅಗತ್ಯವಾಗಿ ಬೇಕಾಗುವ ಔಷಧಗಳನ್ನು ಇಲ್ಲಿಯೇ ಸಿಗುವಂತೆ ಮಾಡುತ್ತೇವೆ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಕೆ. ನಟರಾಜ್ ತಿಳಿಸಿದ್ದಾರೆ.