ಕಡಿಮೆ ಬೆಲೆಯ ಬಂಗಾರದ ಆಸೆಗೆ ಮೋಸ ಹೋಗುತ್ತಿರುವುದು ದಾವಣಗೆರೆಯಲ್ಲೇ ಹೆಚ್ಚು!

ದಾವಣಗೆರೆ, ಸೆ.29: ನಕಲಿ ಬಂಗಾರದ ಆಸೆಗೆ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆಯಲ್ಲೇ ಅತಿ ಹೆಚ್ಚು ಮೋಸ ಹೋಗುತ್ತಿರುವುದು ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಮೇಲಿಂದ ಮೇಲೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಜಿಲ್ಲೆಯ ಜನರು ಮೋಸ ಹೋಗುವುದು ಕಡಿಮೆಯೇನಾಗಿಲ್ಲ. ಇದು ಪೊಲೀಸ್ ಇಲಾಖೆಗೂ ಕೂಡ ತಲೆನೋವು ತಂದಿದೆ.

ದಾವಣಗೆರೆ ಜಿಲ್ಲೆಯಲ್ಲಿ ಈಗಾಗಲೇ ಏಳರಿಂದ ಎಂಟು ಪ್ರಕರಣಗಳು ಬೆಳಕಿಗೆ ಬಂದಿವೆ. ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದು ಜೈಲಿಗಟ್ಟುತ್ತಿದ್ದಾರೆ. ಕೆಲ ವರ್ಷಗಳ ಕಾಲ ಜೈಲಿನಲ್ಲಿ ಆರೋಪಿಗಳು ಇರುತ್ತಾರೆ. ಆ ಬಳಿಕ ಜಾಮೀನು ಪಡೆದು ಮತ್ತೆ ಮೋಸದ ಬಲೆ ಬೀಸುತ್ತಾರೆ. ನಿಧಿ ಹಾಗೂ ಬಂಗಾರದ ಬಿಲ್ಲೆಗಳು ಕಡಿಮೆ ಬೆಲೆಗೆ ಸಿಗುತ್ತವೆ ಎಂಬ ಆಸೆಯಿಂದ ಖರೀದಿಸಿ ಮೋಸ ಹೋಗುತ್ತಾರೆ. ಪೊಲೀಸರಿಗೆ ದೂರು ನೀಡುತ್ತಾರೆ. ಬಳಿಕ ಆರೋಪಿಗಳು ಸಿಗುತ್ತಾರೆ. ಮತ್ತೆ ಹೊರಬರುತ್ತಾರೆ. ಈ ರೀತಿಯಲ್ಲಿ ಪುನಾರವರ್ತನೆಯಾಗುತ್ತಿದೆ. ಹಾಗಾಗಿ, ಜನರಲ್ಲಿ ಅರಿವು ಬಾರದ ಹೊರತು ಏನು ಮಾಡಲು ಆಗಲ್ಲ ಎಂಬುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಹೇಳುತ್ತಾರೆ.

ನಕಲಿ ಬಂಗಾರ ನೀಡಿದ್ದ ಕೇರಳದ ವ್ಯಕ್ತಿ ಬಂಧನ

ನಕಲಿ ಬಂಗಾರ ನೀಡಿದ್ದ ಕೇರಳದ ವ್ಯಕ್ತಿ ಬಂಧನ

ಇನ್ನು ನಕಲಿ ಬಂಗಾರ ನೀಡಿ ವಂಚಿಸಿದ್ದ ಕೇರಳ ಮೂಲದ ವೈಯನಾಡಿನ ಆರೋಪಿ ಗಿರೀಶ್ ಎಂಬಾತನನ್ನು ಡಿಸಿಐಬಿ ಘಟಕದ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಪೊಲೀಸರು 22 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಕೆಲವರು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ದಾವಣಗೆರೆ ನಗರದ ಪಿ. ಬಿ. ರಸ್ತೆಯ ಟೋಯೋಟ ಶೋ ರೂಂ ಬಳಿ ನಕಲಿ ಬಂಗಾರ ನೀಡಿ ಕೇರಳ ಮೂಲದ ವ್ಯಕ್ತಿಗೆ 30 ಲಕ್ಷ ರೂಪಾಯಿ ವಂಚಿಸಲಾಗಿತ್ತು. ಈ ಸಂಬಂಧ ಕಳೆದ ಮಾರ್ಚ್ ತಿಂಗಳಿನಲ್ಲಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗಿ ಆರೇಳು ತಿಂಗಳು ಕಳೆದರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಡಿಸಿಐಬಿ ಘಟಕಕ್ಕೆ ಪ್ರಕರಣ ವರ್ಗಾಯಿಸಲಾಗಿತ್ತು. ಬಳಿಕ ತನಿಖೆ ಕೈಗೆತ್ತಿಕೊಂಡ ಡಿಸಿಐಬಿ ಘಟಕದ ಸಿಬ್ಬಂದಿ ಬೆಂಗಳೂರು, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರು. ಖಚಿತ ಮಾಹಿತಿ ಆಧರಿಸಿ ಕೇರಳ ಮೂಲದ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಗಾರದ ಆಸೆಗೆ ಬಿದ್ದು ಹಣ ಕಳೆದುಕೊಳ್ಳುವ ಜನರು

ಬಂಗಾರದ ಆಸೆಗೆ ಬಿದ್ದು ಹಣ ಕಳೆದುಕೊಳ್ಳುವ ಜನರು

"ಕರ್ನಾಟಕದಲ್ಲಿ ಮೇಲಿಂದ ಮೇಲೆ ಮೋಸ ಮಾಡುವ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳ ಜಾಲ ತಮಿಳುನಾಡು ಹಾಗೂ ಆಂಧ್ರಪ್ರದೇಶದತ್ತ ಚಿತ್ತ ಹಾಯಿಸಿದೆ. ಈಗಾಗಲೇ ದಾವಣಗೆರೆ ಜಿಲ್ಲೆಯೊಂದರಲ್ಲಿಯೇ ಏಳೆಂಟು ಬಾರಿ ಮೋಸ ಮಾಡಿ ಸಿಕ್ಕಿಬಿದ್ದಿರುವ ಆರೋಪಿಗಳು, ಮತ್ತೆ ಇಲ್ಲಿ ಇದೇ ಕೃತ್ಯ ಎಸಗಿದರೆ ಸಿಕ್ಕಿಬೀಳುವ ಆತಂಕದಲ್ಲಿ ಆ ರಾಜ್ಯಗಳಲ್ಲಿ ಮೋಸ ಮಾಡಲು ಶುರು ಮಾಡಿದ್ದಾರೆ ಎಂಬ ಮಾಹಿತಿ ಇದೆ," ಎಂದು ಎಸ್ಪಿ ಸಿ. ಬಿ. ರಿಷ್ಯಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

'ಮೈಸೂರು ಸೇರಿದಂತೆ ಬೇರೆ ಜಿಲ್ಲೆಗಳಲ್ಲಿಯೂ ಮೋಸದ ಜಾಲ ಪತ್ತೆಯಾಗಿದೆ. ಆದ್ರೆ, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆಯಲ್ಲಿ ಹೆಚ್ಚಾಗಿ ನಡೆದಿರುವುದು ಈಗಿರುವ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ದಾವಣಗೆರೆ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳ ಜನರನ್ನು ಹರಪನಹಳ್ಳಿಗೆ ಕರೆಯಿಸಿಕೊಂಡು ನಿಧಿ ಸಿಕ್ಕಿದೆ, ಕಡಿಮೆ ಬೆಲೆಗೆ ಬಂಗಾರದ ಬಿಲ್ಲೆ ನೀಡುತ್ತೇವೆ ಎಂದು ನಂಬಿಸುತ್ತಾರೆ. ಒಂದೆರಡು ಅಸಲಿ ನೀಡಿ ಆ ಬಳಿಕ ಮೋಸ ಮಾಡಿ ಪರಾರಿಯಾಗುತ್ತಾರೆ. ನಕಲಿ ಬಿಲ್ಲೆ ನೀಡಿದ್ದು ಆ ಬಳಿಕವೇ ಗೊತ್ತಾಗುತ್ತದೆ. ಆಸೆಗೆ ಬಿದ್ದು ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರೂ, ಮನವಿ ಮಾಡಿದರೂ ಇದು ಕಡಿಮೆಯಾಗುತ್ತಿಲ್ಲ. ಇನ್ನಾದರೂ ಜನರು ಇಂಥ ಮೋಸದ ಜಾಲಕ್ಕೆ ಬೀಳಬಾರದು" ಎಂದು ಎಸ್ಪಿ ಮನವಿ ಮಾಡಿದ್ದಾರೆ.

ಇನ್ಶೂರೆನ್ಸ್ ಮಾಡಿಸಿ ಹಣ ಹೊಡೆಯುವ ಮತ್ತೊಂದು ಮೋಸದ ಜಾಲ

ಇನ್ಶೂರೆನ್ಸ್ ಮಾಡಿಸಿ ಹಣ ಹೊಡೆಯುವ ಮತ್ತೊಂದು ಮೋಸದ ಜಾಲ

"ಅನಾರೋಗ್ಯಪೀಡಿತರನ್ನು ಗುರಿಯಾಗಿಸಿಕೊಂಡು ಇನ್ಶೂರೆನ್ಸ್ ಮಾಡಿಸಿಕೊಡುವುದಾಗಿ ಹೇಳಿ ಮೋಸ ಮಾಡುವ ಪ್ರಕರಣ ದಾಖಲಾಗಿದೆ. ಜೀವ ವಿಮಾ ಕಂಪೆನಿ ಏಜೆಂಟ್, ವೈದ್ಯರು, ಆಸ್ಪತ್ರೆ ಸಿಬ್ಬಂದಿಯನ್ನು ಬಳಸಿಕೊಂಡು ಸಾಯುವ ಹಂತದಲ್ಲಿರುವ ರೋಗಿಗೆ ಇನ್ಶುರೆನ್ಸ್ ಮಾಡಿಸಲಾಗುತ್ತೆ. ರೋಗಿ ಸತ್ತ ಬಳಿಕ ಇನ್ಶುರೆನ್ಸ್ ಹಣವನ್ನು ಈ ಜಾಲವೇ ಪಡೆಯುತ್ತದೆ. ಬ್ಯಾಂಕ್ ಅಕೌಂಟ್ ಅನ್ನು ರೋಗಿ ಹೆಸರಿನಲ್ಲಿದ್ದರೂ, ಪಾಸ್ ಬುಕ್, ಎಟಿಎಂ, ಮೊಬೈಲ್ ನಂಬರ್, ಒಟಿಪಿ ತಮಗೆ ಲಭಿಸುವಂತೆ ತಂತ್ರ ಹೆಣೆಯುತ್ತಾರೆ. ರೋಗಿ ಸತ್ತ ಬಳಿಕ ಬರುವ ಹಣವನ್ನು ಪಡೆದು ಮೃತಪಟ್ಟವನ ಸಂಬಂಧಿಕರಿಗೆ ಸ್ವಲ್ಪ ನೀಡಿ ಮೋಸ ಮಾಡುತ್ತಿರುವ ಕುರಿತಂತೆ ತನಿಖೆ ನಡೆಸಲಾಗುತ್ತಿದೆ. ತನಿಖಾ ಹಂತದಲ್ಲಿರುವ ಕಾರಣ ಈಗಲೇ ಏನನ್ನೂ ಹೇಳಲಾಗದು" ಎಂದು ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ಪಿಎಫ್ಐ ಬ್ಯಾನ್; ಎರಡು ಮನೆಗಳ ಮೇಲೆ ದಾಳಿ

ಪಿಎಫ್ಐ ಬ್ಯಾನ್; ಎರಡು ಮನೆಗಳ ಮೇಲೆ ದಾಳಿ

ಸುಕೋ ಬ್ಯಾಂಕ್ ನಿಂದ ರೈತರಿಗೆ ವಂಚನೆ ಮಾಡಿರುವ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ರೈತರಿಗೆ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಮೊದಲು ಇಲ್ಲಿನ ಪೊಲೀಸರೇ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ಸಿಐಡಿಗೆ ಒಪ್ಪಿಸಲಾಗಿದ್ದು, ಅವರು ತನಿಖೆ ನಡೆಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ದೇಶಾದ್ಯಂತ ಪಿಎಫ್ಐ ಸಂಘಟನೆ ನಿಷೇಧ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿಯೂ ಎರಡು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಒಂದು ಮನೆಯಲ್ಲಿ ಯಾರೂ ಇರಲಿಲ್ಲ. ಮತ್ತೊಂದು ಮನೆಯಲ್ಲಿ ತಾಹೀರ್ ಎಂಬಾತ ಪರಾರಿಯಾಗಿದ್ದಾನೆ. ಈತ ಡಿಜೆ ಹಳ್ಳಿ ಗಲಾಟೆ, ಹರಿಹರದಲ್ಲಿ ನಡೆದ ಹಿಜಾಬ್ ಗಲಾಟೆಯಲ್ಲಿ ಭಾಗಿಯಾಗಿದ್ದ. ಈತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+