ಆಪರೇಷನ್ ಕಮಲ ಮಾಡುವುದಿಲ್ಲ : ಬಿ.ಶ್ರೀರಾಮುಲು
ದಾವಣಗೆರೆ, ಜೂನ್ 09 : 'ಹೈಕಮಾಂಡ್ ಆಪರೇಷನ್ ಕಮಲದಿಂದ ದೂರವಿರಿ ಎಂದು ಸೂಚನೆ ನೀಡಿದೆ. ನಾವು ಆಪರೇಷನ್ ಕಲಮಕ್ಕೆ ಕೈ ಹಾಕುವುದಿಲ್ಲ' ಎಂದು ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ಹೇಳಿದರು.
ದಾವಣಗೆರೆಯಲ್ಲಿ ಭಾನುವಾರ ಮಾತನಾಡಿದ ಶ್ರೀರಾಮುಲು ಅವರು, 'ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಒಡೆದ ಮನೆ ಇದ್ದಂತೆ, ಒಡೆದ ಮನೆಯಲ್ಲಿ ಸಂಸಾರ ಚೆನ್ನಾಗಿ ನಡೆಯುತ್ತಿದೆಯೇ?' ಎಂದು ಪ್ರಶ್ನೆ ಮಾಡಿದರು.
'ಒಡೆದ ಮನೆಯಲ್ಲಿ ಸಂಸಾರ ಚೆನ್ನಾಗಿ ಇರುವುದಿಲ್ಲ. ಹಾಗೆಯೇ ಸಮನ್ವಯತೆ ಇಲ್ಲದ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ನಡೆಯುವುದಿಲ್ಲ' ಎಂದು ಶ್ರೀರಾಮುಲು ಅವರು ಭವಿಷ್ಯ ನುಡಿದಿರು.

'ಆಪರೇಷನ್ ಕಮಲ ಮಾಡಲು ನಾವು ಕೈ ಹಾಕವುದಿಲ್ಲ. ಹೈಕಮಾಂಡ್ ನಾಯಕರು ಆಪರೇಷನ್ ಕಮಲದಿಂದ ದೂರವಿರಿ ಎಂದು ಸೂಚಿಸಿದ್ದಾರೆ. ಅದರ ಬದಲು ರಾಜ್ಯದಲ್ಲಿನ ಬರಪರಿಸ್ಥಿತಿ ಬಗ್ಗೆ ತಲೆಕೆಡಿಸಿಕೊಂಡಿದ್ದೇವೆ' ಎಂದರು.
'ಬಿಜೆಪಿಯವರು ಬರ ಪ್ರವಾಸ ಮಾಡುತ್ತಿದ್ದು, ಜನರ ಸಮಸ್ಯೆ ಆಲಿಸುತ್ತಿದ್ದೇವೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು ಅದರ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಅರಾಜಕತೆ ಸೃಷ್ಟಿಯಾಗಿದೆ' ಎಂದು ಆರೋಪ ಮಾಡಿದರು.
ಯಾದಗಿರಿಯಲ್ಲಿ ಭಾನುವಾರ ಮಾತನಾಡಿದ್ದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ಸಂಪುಟ ವಿಸ್ತರಣೆ ಬಳಿಕ ಸರ್ಕಾರ ಉಳಿಯುತ್ತೋ?, ಅಳಿಯುತ್ತೋ? ಕಾದು ನೋಡಿ' ಎಂದು ಹೇಳಿದ್ದರು.
2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆದ್ದರೂ ಬಿಜೆಪಿಗೆ ಅಧಿಕಾರ ಸಿಕ್ಕಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಬಿಜೆಪಿಗೆ ಅಧಿಕಾರ ಕೈ ತಪ್ಪಿದೆ.












Click it and Unblock the Notifications