3 ವರ್ಷಗಳಾದರೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಬೇಕೆಂಬ ನಿಯಮವಿಲ್ಲ : ಸಿ. ಟಿ. ರವಿ
ದಾವಣಗೆರೆ, ಸೆಪ್ಟೆಂಬರ್ 3: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ. ಹತ್ತಾರು ರಾಜ್ಯಗಳಲ್ಲಿ ಕೆಲಸ ಮಾಡಲು ಪಕ್ಷ ಅವಕಾಶ ಮಾಡಿಕೊಟ್ಟಿದೆ. ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರ ಸಂಬಂಧ ಯಾವ ಹಂತದಲ್ಲಿಯೂ ಆಗಿಲ್ಲ. ಸುದ್ದಿಗಳು ಆಗಾಗ್ಗೆ ಬರುತ್ತಿರುತ್ತವೆ. ವೈಯಕ್ತಿಕ ಆಕಾಂಕ್ಷೆ ಇಟ್ಟುಕೊಂಡು ಎಂದಿಗೂ ಕೆಲಸ ಮಾಡಿಲ್ಲ. ಪಕ್ಷ ವಹಿಸಿದ ಜವಾಬ್ದಾರಿಯನ್ನು ಕಾರ್ಯಕರ್ತನಾಗಿ ನಿಭಾಯಿಸಿಕೊಂಡು ಬರುತ್ತಿದ್ದೇನೆ. ಮೂರು ವರ್ಷ ಆಗಿದೆ ಎಂಬ ಮಾತ್ರಕ್ಕೆ ಬದಲಾವಣೆ ಮಾಡಬೇಕೆಂಬ ನಿಯಮ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೇಳಿದರು.
ನಗರದ ಪೂಜಾ ಇಂಟರ್ ನ್ಯಾಷನಲ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಳೀನ್ ಕುಮಾರ್ ಕಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೂರು ವರ್ಷವಾಗಿದೆ. ಬದಲಾಯಿಸುವ ಕುರಿತಂತೆ ಎಲ್ಲಿಯೂ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಧ್ರುವೀಕರಣ ಎನ್ನೋದು ಎಲ್ಲಾ ಕಾಲದಿಂದಲೂ ನಡೆದುಕೊಂಡು ಬಂದಿದೆ. ರಾಜಕಾರಣ ನಿಂತ ನೀರಲ್ಲ. ಬಿಜೆಪಿಗೆ ಬಂದವರು ಅವರ ಭವಿಷ್ಯ ಭದ್ರಪಡಿಸಿಕೊಂಡಿದ್ದಾರೆ. ಪಕ್ಷ ಬಿಟ್ಟವರು ಭವಿಷ್ಯ ಇಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದಾರೆ. ದೇಶಕ್ಕೆ ಹಾಗೂ ಬಿಜೆಪಿಗೆ ಬಂದವರಿಗೆ ಉಜ್ವಲ ಭವಿಷ್ಯ ಇದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.

ಭಾರತ್ ಜೋಡೋ ಬಗ್ಗೆ ವ್ಯಂಗ್ಯ
ಕಾಂಗ್ರೆಸ್ ನವರು ನಾಯಕರನ್ನೇ ಜೋಡಿಸುವುದರಲ್ಲಿ ಯಶಸ್ವಿ ಆಗಿಲ್ಲ. ಐದು ದಶಕಗಳ ಕಾಲ ಇದ್ದಂಥ ಕಾಂಗ್ರೆಸ್ ಹಿರಿಯ ನಾಯಕರು ಕಾಂಗ್ರೆಸ್ ಬಿಟ್ಟು ಹೋಗುತ್ತಿದ್ದಾರೆ. ಕಾಂಗ್ರೆಸ್ ಚೊಡೋ ಆಗಿದೆ. ಭಾರತ ಜೊಡೋ ಹಮ್ಮಿಕೊಳ್ಳುವ ನೈತಿಕತೆ ಆ ಪಕ್ಷಕ್ಕಿಲ್ಲ. ದೇಶ ವಿಭಜನೆಗೆ ಸಹಿ ಹಾಕಿದ್ದು ಕಾಂಗ್ರೆಸ್. ಜಾತಿ, ಪ್ರಾದೇಶಿಕ ಆಧಾರದಲ್ಲಿ ಮತ ಬ್ಯಾಂಕ್ ಗಾಗಿ ಒಡೆಯುವ ಕೆಲಸ ಮಾಡಿದೆ. ಜೊಡೋ ಎಂದು ಹೇಳುವ ಯಾವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಸಾಲು ಸಾಲಾಗಿ ಕಾಂಗ್ರೆಸ್ ಬಿಟ್ಟು ನಾಯಕರು ಯಾಕೆ ಹೋಗುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಈ ಬಾರಿಯೂ ನಮಗೆ ಅಧಿಕಾರ
ರಾಜ್ಯದಲ್ಲಿ ನಡೆಯುವ 2023ರ ವಿಧಾನಸಭಾ ಚುನಾವಣೆ ಸಂಬಂಧ ನಮ್ಮ ಬಳಿಯೂ ಸಮೀಕ್ಷೆ ವರದಿ ಇದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ನಾವು ಹೇಳುವುದು ಸತ್ಯಕ್ಕೆ ಹತ್ತಿರವಾಗಿದೆ. ಕಾಂಗ್ರೆಸ್ ಹೇಳುವುದು ಸತ್ಯಕ್ಕೆ ದೂರವಾಗಿದೆ. 2014ರ ಲೋಕಸಭಾ ಚುನಾವಣೆ ವೇಳೆ ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಅವರಪ್ಪನಾಣೆ ನರೇಂದ್ರ ಮೋದಿ ಪ್ರಧಾನಿ ಆಗಲ್ಲ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದಿದ್ದರು. ಅವರಪ್ಪನಾಣೆ ಎರಡು ಬಾರಿ ಪ್ರಧಾನಿಯಾಗಲಿಲ್ವಾ. 2018ರಲ್ಲಿ ನಾನೇ ಮುಖ್ಯಮಂತ್ರಿ, ನಮ್ಮದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದಿದ್ದರು, ಕಾಂಗ್ರೆಸ್ ಅಧಿಕಾರಕ್ಕೆ ಬಂತಾ?
2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ನಾವು ಒಟ್ಟಾಗಿದ್ದೇವೆ. ಬಿಜೆಪಿ ರಾಜ್ಯದಲ್ಲಿ ಒಂದು ಸೀಟು ಪಡೆಯಲ್ಲ ಅಂದಿದ್ದರು. ಶೇಕಡಾ 65ರಷ್ಟು ಮತ ನಮಗೆ ಬರುತ್ತೆ ಎಂದಿದ್ದರು. ನಾವು ಹೇಳಿದ್ವಿ. ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ್, ಗೋವಾದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೆ, ಬಂದಿದ್ದೇವೆ. ಕರ್ನಾಟಕದಲ್ಲಿಯೂ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಪಡೆದು ನಮ್ಮ ಪಕ್ಷವೇ ಆಡಳಿತ ನಡೆಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆಗಾಗಿ ಮಂಗಳೂರಿಗೆ ಮೋದಿ ಬಂದಿಲ್ಲ
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಬಂದಿದ್ದರು. ಕೇವಲ ಕರ್ನಾಟಕಕ್ಕ ಮಾತ್ರ ಬಂದಿಲ್ಲ. ಬೇರೆ ಬೇರೆ ರಾಜ್ಯಗಳಿಗೂ ಹೋಗುತ್ತಿದ್ದಾರೆ. ಕಾಯಕಯೋಗಿ ಅವರು. ನಿಸ್ವಾರ್ಥಿ, ಪರಿಶ್ರಮವಾಗಿರುವ ನಾಯಕ. ನಮಗೆ ಮೋದಿ ಸಿಕ್ಕಿರುವುದೇ ದೊಡ್ಡ ಶಕ್ತಿ. ದೇಶಕ್ಕೆ ಶಕ್ತಿ ಕೊಡುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಬರುತ್ತೆ ಹೋಗುತ್ತೆ. ಇದಕ್ಕಾಗಿ ಕೆಲಸ ಮಾಡುವ ಪಕ್ಷ ಬಿಜೆಪಿ ಅಲ್ಲ. ಕೇರಳ, ತಮಿಳುನಾಡಿನಲ್ಲಿ ಚುನಾವಣೆ ಇಲ್ಲ. ಹಾಗಿದ್ದರೂ ಅಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಚುನಾವಣೆ ಇರಲಿ, ಬಿಡಲಿ ಮೋದಿ ಹೋಗುತ್ತಾರೆ. ಶಕ್ತಿ ಇರುವ ಕಡೆ ಹಾಗೂ ಇಲ್ಲದ ಕಡೆಗಳಲ್ಲಿಯೂ ಹೋಗುತ್ತಾರೆ. ದೇಶಕ್ಕೆ ಶಕ್ತಿ ಬರಬೇಕು ಎಂಬುದು ಪಕ್ಷದ ಅಪೇಕ್ಷೆ ಎಂದರು.

ಮೋದಿ ಕಾರ್ಯಕ್ರಮಕ್ಕೆ ಯೋಜನೆಗಿಂತ ಮೂರು ಪಟ್ಟು ಜನ
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದವರು ಪೇಮೆಂಟ್ ಗಿರಾಕಿಗಳಲ್ಲ, ಹಣ, ಹೆಂಡಕ್ಕೆ ಬಂದವರಲ್ಲ. ಉತ್ಸಾಹದಿಂದ ಎಲ್ಲೆಡೆಯಿಂದ ಬಂದವರು. ನಾವು ಹಾಕಿಕೊಂಡಿದ್ದ ಯೋಜನೆಗಿಂತ ಮೂರು ಪಟ್ಟು ಜನಬಂದಿದ್ದರು. ಜನಸಾಗರವೇ ಹರಿದು ಬಂದಿತ್ತು. ಪ್ರಧಾನಿ ಮೇಲೆ ಇರುವ ನಂಬಿಕೆ, ವಿಶ್ವಾಸ, ನಾಯಕತ್ವ, ಪಕ್ಷದ ಮೇಲಿರುವ ವಿಶ್ವಾಸವೇ ಕಾರಣ ಎಂದು ವಿಶ್ಲೇಷಿಸಿದರು.












Click it and Unblock the Notifications