ಪಲ್ಲಕ್ಕಿಗೆ ನೋಟಿನ ಹಾರ: ಕೊಕ್ಕನೂರು ಜಾತ್ರೆಯಲ್ಲಿ ಸಂಗ್ರಹವಾದ ಒಟ್ಟು ಹಣವೆಷ್ಟು?
ದಾವಣಗೆರೆ, ಏಪ್ರಿಲ್ 03: ಜಾತ್ರೆ ಅಂದರೆ ಜನಸ್ತೋಮ, ಮೂಲೆ ಮೂಲೆಗಳಿಂದ ಬರುವ ಭಕ್ತಗಣ, ಪೂಜೆ, ಪುನಸ್ಕಾರ, ಹರಕೆ ತೀರಿಸಲು ಬರುವ ಜನರು, ಉತ್ಸವ ಜೋರಾಗಿಯೇ ಇರುತ್ತದೆ. ಆದರೆ, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದಲ್ಲಿ ಪ್ರತಿ ವರ್ಷವೂ ವಿಶಿಷ್ಟವಾಗಿ ಜಾತ್ರೆ ಆಚರಿಸಲಾಗುತ್ತದೆ. ಇದು ಎಲ್ಲೆಡೆ ನಡೆಯುವುದಕ್ಕಿಂತ ವಿಶೇಷ.
ಕೊಕ್ಕನೂರು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವದ ಬಳಿಕ ಪಲ್ಲಕ್ಕಿ ಉತ್ಸವ ವಿಜೃಂಭಣೆ, ವೈಭವದಿಂದ ನೆರವೇರುತ್ತದೆ. ಇದಕ್ಕಿಂತ ಮತ್ತೊಂದು ವಿಶೇಷ ಅಂದರೆ ಗರಿ ಗರಿ ನೋಟುಗಳ ದುಡ್ಡಿನ ಹಾರ ಹಾಕಿ ಊರ ತುಂಬೆಲ್ಲಾ ಮೆರವಣಿಗೆ ನಡೆಸಲಾಗುತ್ತದೆ. ಭಕ್ತರು ಸ್ವತಃ ನೋಟಿನ ಹಾರಗಳನ್ನು ಹಾಕಿದ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಸಾವಿರಾರು ರೂಪಾಯಿ ನೋಟಿನ ಹಾರವೇ ಈ ದೇವರಿಗೆ ಹಾಕಿ ಭಕ್ತಿಯಿಂದ ಸೇವೆ ಸಲ್ಲಿಸುವ ಭಕ್ತರು ಆಂಜನೇಯ ಸ್ವಾಮಿಗೆ ನಮಸ್ಕರಿಸುತ್ತಾರೆ.

ಮನೆ ಮನೆಗೆ ದೇವರ ಪಲ್ಲಕ್ಕಿ
ಇನ್ನು ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ. ಭಕ್ತರ ಪಾಲಿಗೆ ಎಲ್ಲವನ್ನೂ ಕರುಣಿಸುವ ದೇವರು. ಮನೆ ಮನೆಗೆ ನೋಟಿ ಹಾರದಲ್ಲಿ ಸಿಂಗಾರಗೊಂಡು ಪಲ್ಲಕ್ಕಿಯಲ್ಲಿ ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ಇಟ್ಟು ಸಾಗಲಾಗುತ್ತದೆ. ಈ ಪಲ್ಲಕ್ಕಿಯು ಮನೆ ಮನೆಗೆ ಹೋಗಿ ಪ್ರತಿಯೊಬ್ಬರಿಗೂ ದರ್ಶನದ ವ್ಯವಸ್ಥೆ ಮಾಡುವುದು ಮತ್ತೊಂದು ವಿಶೇಷ.
ರಥೋತ್ಸವ ಮುಗಿದ ಮುಗಿದ ನಂತರದ ದಿನದಂದು ಆಂಜನೇಯ ಸ್ವಾಮಿಯ ಜೊತೆ ಗ್ರಾಮ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಮತ್ತು ಜಿ. ಟಿ. ಕಟ್ಟಿ, ಕೋಮಾರನಹಳ್ಳಿ ಬೀರ ದೇವರೊಂದಿಗೆ ಮನೆಗಳಿಗೆ ಭೇಟಿ ನೀಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ವೇಳೆ ಮನೆಗಳು ಮಧುವಣಗಿತ್ತಿಯಂತೆ ಸಿಂಗಾರವಾಗಿರುತ್ತದೆ.
ಮನೆ ಮುಂದೆ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ, ಪೂಜಾ ಸಾಮಗ್ರಿಗಳು, ಕಾಯಿ, ಹೂವು, ಹಣ್ಣ ಹಾಗೂ ಅವರಿಗೆಷ್ಟು ಸಾಧ್ಯವೋ ಅಷ್ಟು ಕಾಣಿಕೆ ರೂಪದಲ್ಲಿ ದೇವರಿಗೆ ಸಮರ್ಪಿಸಲಾಗುತ್ತದೆ. ಈ ವೇಳೆ ಪೂಜೆ ಸಲ್ಲಿಸುವ ಭಕ್ತರು ನೋಟಿನ ಹಾರವನ್ನು ಹಾಕುತ್ತಾರೆ. ಬೆಳಿಗ್ಗೆ 9 ಗಂಟೆಗೆ ಆರಂಭವಾದ ದೇವರುಗಳ ಮನೆ ಮನೆ ಸಂದರ್ಶನವು ಸಂಜೆ ವೇಳೆ ಮುಕ್ತಾಯಗೊಂಡಿತು. ದೇವಸ್ಥಾನಕ್ಕೆ ವಾಪಸ್ ಬಂದ ಬಳಿಕ ಪಲ್ಲಕ್ಕಿಗೆ ಹಾಕಿದ ನೋಟುಗಳ ಹಾರಗಳನ್ನು ತೆಗೆದು ಎಣಿಕೆ ಮಾಡಲಾಯಿತು.

ಎಷ್ಟು ಹಣ ಸಂಗ್ರಹ...?
ಇನ್ನು ಈ ವರ್ಷ ಹನುಮಂತನ ಪಲ್ಲಕ್ಕಿಗೆ ಸಲ್ಲಿಕೆಯಾದ ಹಣ ಒಂದಲ್ಲ, ಎರಡಲ್ಲಾ ಬರೋಬ್ಬರಿ 12, 63,199 ರೂಪಾಯಿ ಭಕ್ತರ ಕಾಣಿಕೆ ರೂಪದಿಂದ ಬಂದಿದೆ ಎಂದು ಅಂದಾಜು ಮಾಡಲಾಗಿದೆ. ಜಾತ್ರೆ, ಉತ್ಸವ ಅಂದರೆ ಪೊಲೀಸರ ರಕ್ಷಣೆ ಬೇಕಾಗುತ್ತದೆ. ಆದರೆ, ಈ ಗ್ರಾಮದಲ್ಲಿ ಪೊಲೀಸರು ಕಾಣ ಸಿಗುವುದಿಲ್ಲ. ಗ್ರಾಮಸ್ಥರೇ ಎಲ್ಲಾ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ. ಒಂದು ಚಿಕ್ಕ ಲೋಪವೂ ಬಾರದ ರೀತಿಯಲ್ಲಿ ಜಾತ್ರೆ, ಉತ್ಸವ, ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ಹಾಗಾಗಿ, ಇಡೀ ಗ್ರಾಮವೇ ಹನುಮಂತಪ್ಪನ ಉತ್ಸವಕ್ಕೆ ಸಾಕ್ಷಿಯಾಗುತ್ತದೆ.
ಸುತ್ತಮುತ್ತಲಿನ ಗ್ರಾಮಗಳಿಂದಲೂ ಜನರು ಬರುತ್ತಾರೆ. ಭಯ ಭಕ್ತಿ ಹೆಚ್ಚಿರುವ ಕಾರಣ ಯಾರೂ ಕೂಡ ಹಣಕ್ಕಾಗಿ ಆಸೆ ಪಡುವುದಿಲ್ಲ. ಪಲ್ಲಕ್ಕಿಯಲ್ಲಿದ್ದ ಒಂದೇ ಒಂದು ನೋಟು ಸಹ ವ್ಯತ್ಯಾಸ ಆಗುವುದಿಲ್ಲ. ಪ್ರತಿಯೊಬ್ಬರೂ ಇದು ತಮ್ಮ ಮನೆಯ ಹಬ್ಬ ಎಂಬಂತೆ ಆಚರಿಸುತ್ತಾ ಹನುಮಪ್ಪನ ಸೇವೆ ಮಾಡುತ್ತಾ ಬಂದಿದ್ದಾರೆ.
ಉತ್ಸವದ ಬಳಿಕ ಸಂಜೆ ಎಲ್ಲಾ ದೇವರ ಸಮ್ಮುಖದಲ್ಲಿ ಭೂತ ಸೇವೆಯೂ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಮತ್ತೊಂದು ವಿಶೇಷ ಅಂದರೆ 9 ವರ್ಷಗಳ ಬಳಿಕ ಅಮ್ಮನ ಹಬ್ಬ ವೈಭವೋಪೇತವಾಗಿ ಆಚರಿಸುತ್ತಾರೆ. ಏಪ್ರಿಲ್ 4 ಮತ್ತು 5 ನೇ ತಾರೀಖಿನಂದು ಗ್ರಾಮದ ದೇವತೆ ಶ್ರೀ ದುರ್ಗಾಂಬಿಕಾ ತಾಯಿಯ ಹಬ್ಬ ಆಚರಣೆ ಮಾಡುತ್ತಾರೆ.
ಈ ಗ್ರಾಮದಲ್ಲಿ ಹಲವಾರು ವರ್ಷಗಳಿಂದಲೂ ಇದು ನಡೆದುಕೊಂಡು ಬಂದಿದೆ. ಹಲವು ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಇಂದಿಗೂ ಮುಂದುವರಿದಿದೆ. ಸಂಕಷ್ಟದಲ್ಲಿ ಹನುಮಂತಪ್ಪ ಕಾಪಾಡುತ್ತಾನೆ. ಈ ಕಾರಣಕ್ಕೆ ತಮ್ಮ ಕೈಯಲ್ಲಾದಷ್ಟು ಕಾಣಿಕೆ ಸಲ್ಲಿಸಿದರೆ ಮತ್ತಷ್ಟು ಅನುಗ್ರಹ ಸಿಗುತ್ತೆ ಎಂಬ ನಂಬಿಕೆಯಿಂದ ಜನರು ಈ ಪದ್ಧತಿ ನಡೆಸುತ್ತಾರೆ ಎನ್ನುವುದು ಗ್ರಾಮದ ಹಿರಿಯ ವ್ಯಕ್ತಿಗಳ ಅಭಿಪ್ರಾಯವಾಗಿದೆ.












Click it and Unblock the Notifications