ಲಂಚ ಆರೋಪ: ನನ್ನ ಹೆಸರಿಗೆ ಕಳಂಕ ತರಲು ಷಡ್ಯಂತ್ರ ಎಂದ ಬೈರತಿ ಬಸವರಾಜ್
ದಾವಣಗೆರೆ, ನವೆಂಬರ್ 9: ಜಕಾತಿ ಸಂಗ್ರಹಕ್ಕೆ ಟೆಂಡರ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಕೃಷ್ಣಪ್ಪರಿಂದ ಮೂರು ಲಕ್ಷ ರೂಪಾಯಿ ಸ್ವೀಕರಿಸುವಾಗ ದಾವಣಗೆರೆ ಮಹಾನಗರ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ ಎನ್ನುವಾತನನ್ನು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಸಚಿವ ಬೈರತಿ ಬಸವರಾಜ್ ಹೆಸರು ಕೇಳಿ ಬಂದಿದೆ.
ತಮ್ಮ ಮೇಲೆ ಬಂದಿರುವ ಆರೋಪದ ಬಗ್ಗೆ ಸಚಿವ ಬೈರತಿ ಬಸವರಾಜ್ ಪ್ರತಿಕ್ರಿಯಿಸಿದ್ದಾರೆ. ನನ್ನ ಮೇಲೆ ಬಂದಿರುವ ಆರೋಪ ಸತ್ಯಕ್ಕೆ ದೂರವಾದದ್ದು. ನನ್ನ ಹೆಸರಿಗೆ ಮಸಿ ಬಳಿಯಲು ಯಾರೋ ಷಡ್ಯಂತ್ರ ರೂಪಿಸಿದ್ದಾರೆ. ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸತ್ಯ ಹೊರಬರಲಿ ಎಂದು ಆಗ್ರಹಿಸಿದ್ದಾರೆ.
ಜಿಎಂಐಟಿಯ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ನನ್ನ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಸಲಹೆಗಾರರ ಬಳಿ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ತಿಳಿಸಿದ್ದಾರೆ.

ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಬೈರತಿ ಬಸವರಾಜ್
15 ಲಕ್ಷ ರೂಪಾಯಿ ನೀಡಲಾಗಿದೆ ಎಂಬ ವಿಚಾರಕ್ಕೂ ನನಗೂ ಸಂಬಂಧ ಇಲ್ಲ. ಕಳೆದ ಎರಡೂವರೆ ವರ್ಷದಿಂದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ಎಲ್ಲರೂ ನನ್ನನ್ನೂ ಹತ್ತಿರದಿಂದ ನೋಡಿದ್ದಾರೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಲಾಗುತ್ತಿದೆ. ಜನರ ವಿಶ್ವಾಸ ಗಳಿಸಿದ್ದೇನೆ. ನನ್ನ ಏಳಿಗೆ ಸಹಿಸದೆ ಈ ರೀತಿಯ ಆರೋಪ ಮಾಡಲಾಗಿದೆ. ತಪ್ಪು ಯಾರೇ ಮಾಡಿದ್ದರೂ ಖಂಡಿತ ಶಿಕ್ಷೆಯಾಗುತ್ತದೆ. ತನಿಖೆ ವೇಳೆ ತಪ್ಪು ಮಾಡಿದವರು ಒಪ್ಪಿಕೊಳ್ಳುತ್ತಾರೆ ಎಂದು ತಮ್ಮ ಮೇಲಿನ ಆರೋಪವನ್ನು ಬೈರತಿ ಬಸವರಾಜ್ ಅಲ್ಲೆಗಳೆದರು.

ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ
ನಾಳೆ ನಾವು ಒಂದು ಆಡಿಯೋ ಬಿಡುಗಡೆ ಮಾಡಬಹುದು. ಅವರು ಅಷ್ಟು ತೆಗೆದುಕೊಂಡಿದ್ದಾರೆ, ಇಷ್ಟು ತೆಗೆದುಕೊಂಡಿದ್ದಾರೆ ಎಂಬ ಆರೋಪ ಮಾಡಬಹುದು. ಹಾಗಾಗಿ ಷಡ್ಯಂತ್ರ ರೂಪಿಸಿ ಆಮೀಷವೊಡ್ಡಿ ನನ್ನ ಹೆಸರು ಹೇಳಿಸಲಾಗಿದೆ. ಚುನಾವಣೆ ಹತ್ತಿರ ಬರುತ್ತಿದೆ. ರಾಜಕಾರಣ ಮಾಡಲಾಗುತ್ತಿದೆ. ಹಿಂದುಳಿದ ವರ್ಗದ ಸಚಿವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಾವು ಮಾಡುತ್ತಿರುವ ಅಭಿವೃದ್ಧಿ ಸಹಿಸದೆ ಷಡ್ಯಂತ್ರ ರೂಪಿಸಲಾಗುತ್ತಿದೆ. ಮಾಜಿ ಸಚಿವ ಕೆ. ಎಸ್. ಈಶ್ವರಪ್ಪರ ಮೇಲೆ ಸುಳ್ಳು ಆಪಾದನೆ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಮಾಡಿದರು. ಈಗ ಆರೋಪ ಮುಕ್ತರಾಗಿ ಈಶ್ವರಪ್ಪ ಶುದ್ಧ ಹಸ್ತರು ಎಂಬುದು ಸಾಬೀತಾಗಿದೆ ಎಂದರು.

ಸತೀಶ್ ಜಾರಕಿಹೊಳಿ ಕ್ಷಮೆ ಕೇಳಲ್ಲ ಎಂಬ ಧೋರಣೆ ಸರಿಯಲ್ಲ
ಇನ್ನು ಕಲಬುರ್ಗಿಯಲ್ಲಿ ಹಿಂದುಳಿದ ವರ್ಗದ ಸಮಾವೇಶ ಮಾಡಿದ್ದೇವೆ. ಲಕ್ಷಾಂತರ ಜನರು ಬಂದಿದ್ದರು. ಇದರ ಯಶಸ್ಸು ಸಹಿಸದೆ ಪಿತೂರಿ ನಡೆಸಲಾಗುತ್ತಿದೆ. ಕಿಕ್ ಬ್ಯಾಕ್ ಪಡೆದು ಟೆಂಡರ್ ನೀಡಲಾಗಿದೆ ಎಂಬ ಆರೋಪದ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ಕಿಕ್ ಬ್ಯಾಕ್ ಪಡೆದು ಯಾರಿಗೂ ಟೆಂಡರ್ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹಿಂದೂ ಪದದ ಬಗ್ಗೆ ನೀಡಿರುವ ಹೇಳಿಕೆ ವಿವಾದ ಸೃಷ್ಟಿ ಮಾಡಿದೆ. ಈ ಬಗ್ಗೆ ಮಾತನಾಡಿದ ಸಚಿವ ಬೈರತಿ ಬಸವರಾಜ್ ಹಿಂದೂ ಪದ ಅಶ್ಲೀಲ ಎಂದಿರುವುದು ಅವರಿಗೆ ಶೋಭೆ ತರುವಂಥದ್ದಲ್ಲ. ಭಾರತ ಹಿಂದುತ್ವ, ಹಿಂದುಸ್ತಾನ ಎಂಬುದು ಎಲ್ಲರಿಗೂ ಗೊತ್ತಿದೆ. ಕ್ಷಮೆ ಕೇಳಲ್ಲ ಎಂಬ ಹಠಮಾರಿ ಧೋರಣೆ ಸರಿಯಲ್ಲ ಎಂದು ಹೇಳಿದರು.

ಸಚಿವ ಬೈರತಿ ಬಸವರಾಜ್ ಹೆಸರು ಕೇಳಿಬಂದಿದ್ದೇಕೆ..?
2021ರಲ್ಲಿ ಕೃಷ್ಣಪ್ಪ ಎನ್ನುವವರು ಜಕಾತಿ ಸಂಗ್ರಹದ ಟೆಂಡರ್ ಪಡೆದಿದ್ದರು. ಕೊರೊನಾ ಸೇರಿದಂತೆ ಇತರೆ ಸಮಸ್ಯೆಗಳಿಂದ ನಷ್ಟ ಅನುಭವಿಸಿದ್ದರು. ಇದನ್ನು ಸರಿದೂಗಿಸಲು ಟೆಂಡರ್ ಅವಧಿ ವಿಸ್ತರಣೆ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಕೃಷ್ಣಪ್ಪ ಮನವಿ ಮಾಡಿದ್ದರು. ಆದರೆ ಇದರಿಂದ ಯಾವುದೇ ಪ್ರಯೋಜನ ಆಗಿರಲಿಲ್ಲ. ಬಳಿಕ ವೆಂಕಟೇಶ್ ಅವರ ಬಳಿ ಮಾತನಾಡಿದ್ದು, ಅವರು ಏಳು ಲಕ್ಷ ರೂಪಾಯಿ ನೀಡುವಂತೆ ಕೃಷ್ಣಪ್ಪಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹಾಗಾಗಿ ಫೋನ್ನಲ್ಲಿ ವೆಂಕಟೇಶ್ ಜೊತೆ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡು ಲೋಕಾಯುಕ್ತರಿಗೆ ದೂರಿ ನೀಡಲಾಗಿದೆ. ರಾಮ್ ಅಂಡ್ ಕೋ ಸರ್ಕಲ್ನ ತನ್ನ ಕೊಠಡಿಯಲ್ಲಿ ವೆಂಕಟೇಶ್ , ಮೂರು ಲಕ್ಷ ರೂಪಾಯಿ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದರು. ಈ ಪ್ರಕರಣದ ಪ್ರಮುಖ ಸಾಕ್ಷಿ ಆಡಿಯೋದಲ್ಲಿ ಸಚಿವ ಬೈರತಿ ಬಸವರಾಜ್ ವಿರುದ್ಧ 15 ಲಕ್ಷ ರೂಪಾಯಿ ಪಡೆದ ಆರೋಪ ಮಾಡಲಾಗಿತ್ತು.












Click it and Unblock the Notifications