ರಸ್ತೆ ಅಪಘಾತ; ಗಾಯಾಳುವಿಗೆ ನೆರವಾದ ಸಚಿವ ಬೈರತಿ ಬಸವರಾಜು
ದಾವಣಗೆರೆ,ಜುಲೈ 13: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಬಗ್ಗೆ ಸಭೆ ನಡೆಸಿ ಕಾರ್ಯ ನಿಮಿತ್ತ ಶಿವಮೊಗ್ಗ ಕಡೆಗೆ ಹೋಗುವಾಗ ಬೈಕ್ನಿಂದ ವ್ಯಕ್ತಿಯೊಬ್ಬ ಬಿದ್ದಿದ್ದು, ಇದನ್ನು ಗಮನಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದರು.
ಬೈಕ್ನಲ್ಲಿ ಬರುತ್ತಿದ್ದಾಗ ಎರಡು ನಾಯಿಗಳು ಅಡ್ಡ ಬಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ನೆಲಕ್ಕೆ ಬಿದ್ದಿದ್ದ. ಇದನ್ನು ನೋಡಿದ ಸಚಿವರು ಕಾರನ್ನು ನಿಲ್ಲಿಸಿ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲು ವಾಹನದ ವ್ಯವಸ್ಥೆ ಮಾಡಿದರು.
ಮಾರುತಿ ಓಮ್ನಿಯಲ್ಲಿ ಅದೇ ಮಾರ್ಗದಲ್ಲಿ ಗಂಡ, ಹೆಂಡತಿ ಮತ್ತು ಮಗು ಹೋಗುತ್ತಿದ್ದರು. ಈ ವೇಳೆ ತಾಯಿ ಮತ್ತು ಮಗುವಿಗೆ ಬೇರೆ ವಾಹನದಲ್ಲಿ ಹೋಗಲು ಅನುಕೂಲ ಮಾಡಿಕೊಟ್ಟ ಸಚಿವರು, ವ್ಯಕ್ತಿಯನ್ನು ಓಮ್ನಿಯಲ್ಲಿಆಸ್ಪತ್ರೆಯಲ್ಲಿ ಕಳುಹಿಸಿಕೊಟ್ಟರು. ಸಚಿವರ ಈ ಸಹಾಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ಪ್ರವಾಹ ಪೀಡಿತ ಹಾಗೂ ನಷ್ಟಕ್ಕೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜು ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲಿಸಿದರು. ನಂತರ ತಾಲೂಕು ಆಡಳಿತ ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ಸಚಿವರು ಸಭೆ ನಡೆಸಿದರು.
ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರನ್ನು ರಕ್ಷಣೆ ಮಾಡುವ ಮೂಲಕ ಅವರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಬೈರತಿ ಬಸವರಾಜು ಅಧಿಕಾರಿಗಳಿಗೆ ತಾಕೀತು ಮಾಡಿದರು.
ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಕೀಟನಾಶಕಗಳು, ಸರಿಯಾದ ಸಾಮಾಗ್ರಿ ಸಿಗುವಂತೆ ಮಾಡಬೇಕು. ಯಾವುದಕ್ಕೂ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಇದು ನಿಮ್ಮ ಕೆಲಸ ಎಂದು ಹೇಳಿದರು.

ಕಾಳ ಸಂತೆಕೋರರ ಬಗ್ಗೆ ಎಚ್ಚರ ವಹಿಸಬೇಕು. ತಪ್ಪು ಕಂಡುಬಂದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.












Click it and Unblock the Notifications