ಕೆಜಿಎಫ್ನಿಂದ ಮೂರು ವರ್ಷ ಬಾಬುರನ್ನು ಗಡಿಪಾರು ಮಾಡಿದ್ಯಾಕೆ?: ಭೈರತಿ ಬಸವರಾಜ್
ದಾವಣಗೆರೆ, ಡಿಸೆಂಬರ್ 3: "ಬೆಂಗಳೂರಿನ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಬಾಬುರನ್ನು ಕೆಜಿಎಫ್ನಿಂದ ಏಕೆ ಗಡಿ ಪಾರು ಮಾಡಿದ್ದರು, ಈ ಬಗ್ಗೆ ನೀವೇ ಅವರನ್ನು ಕೇಳಿ. ಮಗಳೇ ಯೂಸುಫ್ ಶರೀಫ್ (ಕೆಜಿಎಫ್ ಬಾಬು) ಮೇಲೆ ಕೇಸ್ ಹಾಕಿದ್ದರು,'' ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಆರೋಪಿಸಿದರು.
ನಾವು ವೈಯಕ್ತಿಕವಾಗಿ ಟೀಕಿಸುತ್ತಿಲ್ಲ, ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದು ಸರಿಯಾಗಿಯೇ ಇದೆ ಎಂದು ಹೇಳುವ ಮೂಲಕ ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ರವರು ಕಾಂಗ್ರೆಸ್ನ ಕೆಜಿಎಫ್ ಬಾಬು ವಿರುದ್ಧ ವೈಯಕ್ತಿಕ ಟೀಕೆಯನ್ನು ಸಮರ್ಥಿಸಿಕೊಂಡರು.
ದಾವಣಗೆರೆ ಜಿಎಂಐಟಿ ಗೆಸ್ಟ್ಹೌಸ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭೈರತಿ ಬಸವರಾಜ್, ಕೆಜಿಎಫ್ ಬಾಬು ಪುತ್ರಿ ನೀಡಿರುವ ದೂರಿನ ಪ್ರತಿ ಓದಿದರೆ ನೀವ್ಯಾರು ಮಾತನಾಡಲ್ಲ, ಜೊತೆಗೆ ಒಂದೂ ಓಟು ಬರಲ್ಲ ಎಂದು ಹೇಳಿದರು.

ಒಂದು ಮತಕ್ಕೆ 5 ಲಕ್ಷ ರೂಪಾಯಿ
ಕೆಜಿಎಫ್ ಬಾಬು ಒಂದು ಮತಕ್ಕೆ 5 ಲಕ್ಷ ರೂಪಾಯಿ ನೀಡುತ್ತಿದ್ದಾರಂತೆ. ಅಷ್ಟೊಂದು ಹಣ ಅವರಿಗೆ ಎಲ್ಲಿ ಬರುತ್ತಿದೆ ಎಂದು ಸಚಿವ ಬೈರತಿ ಬಸವರಾಜ್ ಪ್ರಶ್ನಿಸಿದರಲ್ಲದೇ, ದೂರನ್ನು ನಾನಾಗಲೀ, ಸಿದ್ದೇಶ್ವರ್ ಅವರಾಗಲೀ, ಸೋಮಶೇಖರ್ ಆಗಲೀ ನೀಡಿಲ್ಲ. ದಾಖಲೆಗಳ ಆಧಾರದ ಮೇಲೆ ಆರೋಪ ಮಾಡಲಾಗಿದೆ. ಇಂಥವರಿಗೆ ಚುನಾವಣೆಯಲ್ಲಿ ಮತ ಹಾಕಬೇಕಾ? ಎಂದು ಪ್ರಶ್ನಿಸಿದರು.
ಬೆಂಗಳೂರು ನಗರ ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ಕುರಿತ ಆರೋಪಕ್ಕೆ ಪ್ರತಿಕ್ರಿಯೆ ನೀಡುತ್ತಾ, "ಕೆಜಿಎಫ್ ಬಾಬುರನ್ನು ಸುಮ್ಮನೇ ಟೀಕೆ ಮಾಡುತ್ತಿಲ್ಲ. ನನ್ನ ಸ್ನೇಹಿತ, ಸಚಿವ ಎಸ್.ಟಿ. ಸೋಮಶೇಖರ್ ಆಧಾರ ಸಮೇತ ಆರೋಪ ಮಾಡಿದ್ದಾರೆ. ಕೆಜಿಎಫ್ ಬಾಬು ಮಗಳೇ ಅವರ ವಿರುದ್ಧ ದೂರು ನೀಡಿದ್ದಾರೆ. ಇದೇ ಆಧಾರದಲ್ಲಿ ಸೋಮಶೇಖರ್ ಆರೋಪ ಮಾಡಿದ್ದಾರೆ," ಎಂದರು.

ಸ್ಥಳೀಯವಾಗಿ ಗಂಡಸರು ಇರಲಿಲ್ವಾ?
"ಕೆಜಿಎಫ್ ಬಾಬು ಚರಿತ್ರೆ ಏನು ಎಂಬುದನ್ನು ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ. ಅವರ ಮಗಳು ನೀಡಿದ ದೂರನ್ನು ಯಾರಾದರೂ ಓದಿದರೆ ಬಾಬುಗೆ ಒಂದು ಮತವನ್ನೂ ನೀಡುವುದಿಲ್ಲ. ಕೆಜಿಎಫ್ನಿಂದ ಅವರನ್ನು 3 ವರ್ಷಗಳ ಕಾಲ ಗಡಿಪಾರು ಮಾಡಿದ್ದು ಏಕೆ? ಅಂತವರಿಗೆ ಮತ ಹಾಕಬೇಕಾ? ಇಂಥ ಅನೇಕ ಸಂಗತಿಗಳಿವೆ, ಈ ಬಗ್ಗೆ ಇಲ್ಲಿ ಚರ್ಚೆ ಬೇಡ," ಎಂದರು.
ಚಿತ್ರದುರ್ಗ- ದಾವಣಗೆರೆ ಪರಿಷತ್ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಭೈರತಿ ಬಸವರಾಜ್, ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ನಲ್ಲಿ ಸ್ಥಳೀಯವಾಗಿ ದಾವಣಗೆರೆ- ಚಿತ್ರದುರ್ಗದಲ್ಲಿ ಯಾವುದೇ ಗಂಡಸರು ಇರಲಿಲ್ವಾ? ಎಂದು ಕಾಂಗ್ರೆಸ್ ಪಕ್ಷ ಬೆಂಗಳೂರಿನ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಕ್ಕೆ ಸಚಿವ ಭೈರತಿ ಬಸವರಾಜ್ ವ್ಯಂಗ್ಯವಾಡಿದರು.

ಸಿಎಂ ಕುರ್ಚಿ ಖಾಲಿ ಇಲ್ಲ
"ಚಿತ್ರದುರ್ಗ ವಿಧಾನ ಪರಿಷತ್ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಇರಲಿಲ್ಲ. ಅದಕ್ಕಾಗಿ ಬಿ. ಸೋಮಶೇಖರ್ರನ್ನು ಬೆಂಗಳೂರಿನಿಂದ ಕರೆ ತಂದಿದ್ದಾರೆ. ಕಾಂಗ್ರೆಸ್ನವರು ಮತದಾರರಿಗೆ ಆಮಿಷ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು. ನಿಮ್ಮ ಪಕ್ಷದ ನಿಲುವು ಏನು ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರೋ ಹಣ ಹಂಚುತ್ತಾರೆ ಎಂದು ಸ್ವಾಭಿಮಾನ ಕಳೆದುಕೊಳ್ಳುವುದು ಬೇಡ," ಎಂದು ಕಾಂಗ್ರೆಸ್ಗೆ ಸವಾಲು ಎಸೆದರು.
"ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಪುನರುಚ್ಚರಿಸಿದ ಭೈರತಿ ಬಸವರಾಜ್, ಸಿಎಂ ಬದಲಾವಣೆ ಸದ್ಯಕ್ಕಿಲ್ಲ. ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿಎಂ ಖುರ್ಚಿ ಖಾಲಿ ಇಲ್ಲ ಎಂದು ನಿನ್ನೆಯೇ ಹೇಳಿಕೆ ನೀಡಿದ್ದೇನೆ. ಪದೇ ಪದೆ ಅದೇ ಚರ್ಚೆ ಬೇಡವೆಂದರು".

ದುಡ್ಡು ಕೊಟ್ಟರಷ್ಟೇ ಮತ ಎಂಬುದು ಸುಳ್ಳು
"ದುಡ್ಡು ಕೊಟ್ಟರಷ್ಟೇ ಮತ ಹಾಕುತ್ತಾರೆ ಎಂಬುದು ಸುಳ್ಳು ಎಂದು ಚಿತ್ರದುರ್ಗ- ದಾವಣಗೆರೆ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಕೆ.ಎಸ್. ನವೀನ್ ಹೇಳಿದ್ದಾರೆ. ಕಳೆದ ಬಾರಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದೆ. ಆ ವೇಳೆ 2429 ಮತಗಳು ಬಂದಿದ್ದವು. ಈ ಬಾರಿ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಮತದಾರರನ್ನು ಮನೆ ಬಾಗಿಲಿಗೆ ಮತ್ತು ಹೊಲಗಳಿಗೆ ಹೋಗಿ ಭೇಟಿ ಮಾಡಿ ಮತಯಾಚಿಸಿದ್ದೇನೆ," ಎಂದು ತಿಳಿಸಿದರು.
"ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೇಗೆ ಕೆಲಸ ಮಾಡಬೇಕು, ಯಾವ ಪ್ರಶ್ನೆ ಕೇಳಬೇಕು, ಹೇಗೆಲ್ಲಾ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಮನದಟ್ಟು ಮಾಡಿಕೊಡುವ ಸಲುವಾಗಿ ಜನ ಸೇವಕ, ಗ್ರಾಮ ಸ್ವರಾಜ್ ಎಂಬ ವಿನೂತನ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಈ ಬಾರಿ ಹಲವು ಯುವಕರು ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಅನುದಾನವನ್ನು ಪಿಡಿಒ ಹಾಗೂ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ತರಬೇತಿ ನೀಡಿದ್ದೇವೆ. ಈ ಹಿನ್ನೆಲೆಯಲ್ಲಿ ಮತದಾರರು ನನ್ನನ್ನು ಈ ಬಾರಿ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ಇದೆ," ಎಂದು ಹೇಳಿದರು.

ಮೇಲ್ನೋಟಕ್ಕೆ ಹಣದ ಮೇಲೆ ಚುನಾವಣೆ ನಡೆಯುತ್ತದೆ
"ವಿಧಾನ ಪರಿಷತ್ ಚುನಾವಣೆಯಲ್ಲಿ ಹಣ ಕೊಟ್ಟರಷ್ಟೇ ಬೆಂಬಲಿಸುತ್ತಾರೆ ಎಂಬ ಮಾತು ಸರಿಯಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ವಿಶ್ವಾಸಕ್ಕೆ ಬೆಲೆ ಕೊಡುತ್ತಾರೆ. ಮೇಲ್ನೋಟಕ್ಕೆ ಹಣದ ಮೇಲೆ ಚುನಾವಣೆ ನಡೆಯುತ್ತದೆ ಎಂಬ ಮಾತಿದ್ದರೂ ಪ್ರೀತಿ, ವಿಶ್ವಾಸ, ಯಾವ ರೀತಿಯಲ್ಲಿ ಕೆಲಸ ಮಾಡುತ್ತಾರೆ ಎಂಬ ಆಧಾರದಲ್ಲಿ ಮತ ಹಾಕುತ್ತಾರೆ. ಈ ಬಾರಿ ಒಳ್ಳೆಯ ವಾತಾವರಣ ಇದೆ. ಚಿತ್ರದುರ್ಗ- ದಾವಣಗೆರೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಕೈಗೆ ಸಿಗುವುದಿಲ್ಲ ಎಂದು ಗ್ರಾಮ ಪಂಚಾಯತಿ ಸದಸ್ಯರೇ ಹೇಳುತ್ತಿದ್ದಾರೆ. ಈ ಬಾರಿಯೂ ಬೆಂಗಳೂರಿನಿಂದ ಕರೆ ತಂದು ಇಲ್ಲಿ ಕಾಂಗ್ರೆಸ್ನವರು ಸ್ಪರ್ಧೆಗಿಳಿಸಿದ್ದಾರೆ. ಈ ಬಾರಿ ಗೆಲುವು ಖಚಿತ," ಎಂಬ ವಿಶ್ವಾಸ ವ್ಯಕ್ತಪಡಿಸಿದರು.
"ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ನನ್ನ ನಡುವೆ ಯಾವುದೇ ರೀತಿಯ ಮನಸ್ತಾಪ ಇರಲಿಲ್ಲ, ಈಗಲೂ ಇಲ್ಲ. ಕಳೆದ ಬಾರಿ ನಾನು ಸ್ಪರ್ಧೆ ಮಾಡಿದಾಗ ಎರಡೂ ಜಿಲ್ಲೆಗಳಿಂದ 11 ಶಾಸಕರ ಪೈಕಿ ಏಕೈಕ ಬಿಜೆಪಿ ಶಾಸಕರಿದ್ದರು. ಆದರೆ ಈ ಬಾರಿ 8 ಶಾಸಕರು, ಇಬ್ಬರು ಸಂಸದರು, ಸಚಿವರು ಇದ್ದು, ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಾವು ತಾಲ್ಲೂಕಿನಲ್ಲಿ ಸಮಾವೇಶ ಮಾಡುತ್ತಿಲ್ಲ. 50 ಸದಸ್ಯರಿದ್ದರೂ ಅವರನ್ನು ಭೇಟಿಯಾಗಿ ಮತಯಾಚನೆ ಮಾಡುತ್ತಿದ್ದೇವೆ," ಎಂದು ಬಿಜೆಪಿ ಅಭ್ಯರ್ಥಿ ಕೆ.ಎಸ್. ನವೀನ್ ಹೇಳಿದರು.












Click it and Unblock the Notifications