ನಮ್ಮ ಸರ್ಕಾರ ಇರುವಾಗಲೇ ಮಹಾದಾಯಿ ಯೋಜನೆ ಜಾರಿ; ರಮೇಶ್ ಜಾರಕಿಹೊಳಿ
ದಾವಣಗೆರೆ, ಫೆಬ್ರವರಿ 24: "ಮಹಾದಾಯಿ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕೆಲವು ತಾಂತ್ರಿಕ ತೊಂದರೆಗಳಿವೆ. ನಮ್ಮಸರ್ಕಾರ ಇರುವಾಗಲೇ ಯೋಜನೆಯನ್ನು ಜಾರಿಗೆ ತರುತ್ತೇವೆ" ಎಂದು ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ದಾವಣಗೆರೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠಕ್ಕೆ ನಿನ್ನೆ ಆಗಮಿಸಿದ್ದ ಸಚಿವ ರಮೇಶ್ ಜಾರಕಿಹೊಳಿ, ಲಿಂಗೈಕ್ಯ ಪುಣ್ಯಾನಂದಾಪುರಿ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ವಾಲ್ಮೀಕಿ ಶ್ರೀ ಪ್ರಸನ್ನನಾನಂದ ಪುರಿ ಶ್ರೀಗಳ ಆಶೀರ್ವಾದ ಪಡೆದು ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. "ಮಹದಾಯಿ ವಿಷಯವಾಗಿ ಮಾತನಾಡುವುದಕ್ಕೆ ನಾವು ಶಿವಮೊಗ್ಗಕ್ಕೆ ಹೊರಟಿದ್ದೇವೆ. ನಾಳೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದೇವೆ. 26ರಂದು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇವೆ. ಅವರ ಜೊತೆ ಮಹಾದಾಯಿ ಬಗ್ಗೆ ಮಾತುಕತೆ ನಡೆಸಿ ಆದಷ್ಟು ಬೇಗ ಗೆಜೆಟ್ ಮಾಡಿ ಕಾರ್ಯರೂಪಕ್ಕೆ ತರುತ್ತೇವೆ" ಎಂದು ತಿಳಿಸಿದರು.
"ಈಗ ಮಹಾದಾಯಿ ಯೊಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಕೆಲ ತಾಂತ್ರಿಕ ಕಾರಣ ಇದೆ. ನಮ್ಮ ಸರ್ಕಾರ ಇರುವಾಗಲೇ ಆದಷ್ಟು ಬೇಗ ಜಾರಿಗೆ ತರುತ್ತೇವೆ, ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದೇವೆ" ಎಂದರು.

ರಾಜೀನಾಮೆ ನೀಡುವ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, "ನಾನು ರಾಜಿನಾಮೆ ನೀಡುತ್ತೇನೆ ಎನ್ನುವ ಹೇಳಿಕೆ ನೀಡಿಲ್ಲ. ಗೊಂದಲ ಮಾಡಬೇಡಿ, ನಾನು ಹೇಳಿಕೆ ನೀಡಿದ ವಿಡಿಯೋ ಇದ್ದರೆ ನನಗೆ ತೋರಿಸಿ. ನನ್ನ ಹೇಳಿಕೆಯನ್ನು ಟ್ವಿಸ್ಟ್ ಮಾಡಿದ್ದಾರೆ. ಇದರ ಬಗ್ಗೆ ನಾನು ಯಾರಿಗೆ ಸ್ಪಷ್ಟೀಕರಣ ನೀಡಬೇಕೋ ಅವರಿಗೆ ನೀಡುತ್ತೇನೆ" ಎಂದರು. "ನೀರಾವರಿ ವಿಚಾರದಲ್ಲಿ ನಾನು ಎಲ್ಲರ ಸಲಹೆ ಪಡೆಯುತ್ತೇನೆ. ಎಚ್ ಕೆ ಪಾಟೀಲ್ ಅವರ ಮಾರ್ಗದರ್ಶನವನ್ನು ಪಡೆಯುತ್ತೇನೆ" ಎಂದರು.
ಶಾಸಕ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಮಾತನಾಡಿದ ಅವರು "ಮಹೇಶ್ ಕುಮಟಳ್ಳಿಗೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುತ್ತದೆ. ಈಗ ನಿಗಮ ಕೊಟ್ಟರೆ ಸಂತೋಷವಾಗುತ್ತದೆ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications