Lok Sabha Election 2024: ದಾವಣಗೆರೆ ಬಿಜೆಪಿ ಟಿಕೆಟ್ಗಾಗಿ ಸಮರ; ಭಾರೀ ಕುತೂಹಲ ಮೂಡಿಸಿದ ಜಿ.ಎಂ.ಸಿದ್ದೇಶ್ವರ ಪತ್ನಿ ಹೇಳಿಕೆ
ದಾವಣಗೆರೆ, ಮಾರ್ಚ್, 12: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಸದ್ದು ಜೋರಾಗಿಯೇ ಇದೆ. ಇನ್ನು ಟಿಕೆಟ್ ವಿಚಾರವಾಗಿ ಭಾರೀ ಪೈಪೋಟಿಗಳು ನಡೆಯುತ್ತಿವೆ. ಹಾಗೆಯೇ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಿಜೆಪಿ ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ ಎಂದು ಲೋಕಸಭಾ ಸದಸ್ಯ ಡಾ.ಜಿ.ಎಂ.ಸಿದ್ದೇಶ್ವರರ ಪತ್ನಿ ಗಾಯತ್ರಿ ಸಿದ್ದೇಶ್ವರ ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನ್ನ ಪತಿ ಸಿದ್ದೇಶ್ವರ ಅವರಿಗೆ ಲೋಕಸಭಾ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಮಾವ ಮಲ್ಲಿಕಾರ್ಜುನಪ್ಪರು ಲೋಕಸಭಾ ಸದಸ್ಯರಾಗಿದ್ದವರು. ನನ್ನ ಪತಿ ಸಿದ್ದೇಶ್ವರ ಅವರಿಗೆ ರಾಜಕೀಯದಲ್ಲಿ ಅನುಭವ ಇದೆ. ದೇಶದ ಕೆಲಸ ಮಾಡಲು ಅವಕಾಶ ಸಿಕ್ಕರೆ ಯಾಕೆ ಬೇಡ ಎನ್ನೋದು ಎಂದು ಹೇಳಿದರು.

ಲೋಕಸಭಾ ಸದಸ್ಯಳಾಗಿ ನಾನು ಕೆಲಸ ಮಾಡುವ ಅವಕಾಶ ಸಿಕ್ಕರೆ ಖಂಡಿತವಾಗಿ ಒಪ್ಪಿಕೊಳ್ಳುತ್ತೇನೆ. ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ತುಂಬಾನೇ ಪ್ರೀತಿ ಕೊಟ್ಟಿದ್ದಾರೆ. ಸಿದ್ದೇಶ್ವರ ಅವರು ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆ ಎಂದು ತಿಳಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಫೈಟ್ ವಿಚಾರ ಜೋರಾಗುತ್ತಿದ್ದಂತೆ ಗಾಯತ್ರಿ ಸಿದ್ದೇಶ್ವರ ಅವರ ಈ ಹೇಳಿಕೆ ಭಾರೀ ಮಹತ್ವ ಪಡೆದುಕೊಡಿದೆ. ಮಾತ್ರವಲ್ಲ, ನಿನ್ನೆಯಷ್ಟೇ ಸಿದ್ದೇಶ್ವರ ಅವರು ನನಗೆ ಇಲ್ಲವೇ ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್ ಅನ್ನು ಬಿಜೆಪಿ ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.
ಏನು ಹೇಳಿದ್ರು ಸಿದ್ದೇಶ್ವರ?: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನೂರಕ್ಕೆ ನೂರು ನನಗೆ ಇಲ್ಲವೇ ನನ್ನ ಕುಟುಂಬದವರಿಗೆ ಬಿಜೆಪಿ ಟಿಕೆಟ್ ಸಿಗುತ್ತದೆ ಎಂದು ಲೋಕಸಭಾ ಸದಸ್ಯ ಡಾ.ಜಿ.ಎಂ.ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಮೂಲಕ ಹೊಸ ದಾಳ ಉರುಳಿಸಿದ್ದಾರೆ. ನನಗೆ ಇಲ್ಲವೇ ನನ್ನ ಕುಟುಂಬದ ಯಾರಿಗಾದರೂ ಒಬ್ಬ ಸದಸ್ಯರಿಗೆ ಟಿಕೆಟ್ ಘೋಷಣೆಯಾಗುತ್ತದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು.
ನಗರದ ಜಯದೇವ ವೃತ್ತದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಟಿಕೆಟ್ ಘೋಷಣೆ ಆಗುವುದನ್ನು ಕಾಯುತ್ತಿದ್ದೇನೆ. ನಮ್ಮ ಕುಟುಂಬದವರಿಗೆ ಯಾರಿಗಾದರೂ ಕೊಡುತ್ತಾರೆ ಎಂದು ತಿಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನೀಡುವ ತೀರ್ಪು. ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇನೆ. ನನಗೆ ಟಿಕೆಟ್ ಕೊಟ್ಟರೂ ಗೆಲುವಿಗೆ ಶ್ರಮಿಸುತ್ತೇನೆ. ಟಿಕೆಟ್ ನೀಡದಿದ್ದರೂ ಕೆಲಸ ಮಾಡುತ್ತೇನೆಂದು ಹೇಳಿದ್ದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತು ಅವರ ತಂಡವು ದೆಹಲಿ ಮಟ್ಟದಲ್ಲಿ ಟಿಕೆಟ್ ತಪ್ಪಿಸಲು ಲಾಬಿ ನಡೆಸುತ್ತಿರುವ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚರ್ಚೆ ಆಗುತ್ತಿರುವುದನ್ನು ಎಲ್ಲರೂ ನೋಡುತ್ತಿದ್ದಾರೆ. ಅವ್ರು ಹಾಗೆ ಹೇಳಬಾರದು ಎಂದು ಹೇಳಲು ಆಗಲ್ಲ. ನಾನು ಎಲ್ಲಿಯೂ ಹೋಗುವುದಿಲ್ಲ. ಜನರ ಬೆಂಬಲ ನನಗೆ ಇದೆ. ವಿಶ್ವಾಸವೂ ಇದೆ ಎಂದರು.
ಸರ್ವೆ ಆದರೆ ನನ್ನ ಪರವಾಗಿಯೇ ವರದಿ ಬರುತ್ತದೆ. ಸಿದ್ದೇಶ್ವರ ಅವರೇ ಬೇಕು ಎಂದು ಕ್ಷೇತ್ರದ ಜನರು ಅಪೇಕ್ಷೆಪಡುತ್ತಿದ್ದಾರೆ. ಅವರು ಹೇಳುವುದು ಅವ್ರು ಹೇಳುತ್ತಾರೆ. ನಾನು ಹೇಳೋದು ಹೇಳುತ್ತೇನೆ. ಪದೇ ಪದೇ ಅದೇ ಪ್ರಶ್ನೆ ಕೇಳಬೇಡಿ ಎಂದು ತಿರುಗೇಟು ನೀಡಿದ್ದರು.
ಇನ್ನು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ್, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಶಿವಯೋಗಿ ಸ್ವಾಮಿ, ದೂಡಾ ಮಾಜಿ ಅಧ್ಯಕ್ಷ ಕೆ.ಎಂ.ಸುರೇಶ್ ಸೇರಿದಂತೆ ಹಲವರು ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಬಾರದು. ಹೊಸಬರಿಗೆ ಅವಕಾಶ ನೀಡಬೇಕು ಎಂದು ದೆಹಲಿ ಮಟ್ಟದಲ್ಲಿ ಒತ್ತಡ ತಂದಿದ್ದರು. ಈ ಬೆಳವಣಿಗೆ ನಡುವೆ ಗಾಯತ್ರಿ ಸಿದ್ದೇಶ್ವರ ಅವರು ನನಗೆ ಟಿಕೆಟ್ ನೀಡಿದರೆ ಸ್ಪರ್ಧೆಗೆ ಸಿದ್ಧ ಎನ್ನುವ ಮೂಲಕ ಸಿದ್ದೇಶ್ವರ ಅವರು ಹೊಸ ದಾಳ ಉರುಳಿಸಿದ್ದಾರೆ. ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಮಾತ್ರವಲ್ಲ, ಟಿಕೆಟ್ ಘೋಷಣೆಯು ಕಗ್ಗಂಟಾಗಿ ಪರಿಣಮಿಸಿದೆ.












Click it and Unblock the Notifications