ಬಸ್ ಓಡಿಸುವ ಮೂಲಕ ಬಸ್ ಸೇವೆ ಉದ್ಘಾಟಿಸಿದ ಹರಿಹರ ಶಾಸಕ
ದಾವಣಗೆರೆ, ಜುಲೈ 02 : ಹರಿಹರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಅವರು ಇಂದು ಸ್ವತಃ ಬಸ್ಸನ್ನು ಓಡಿಸುವ ಮೂಲಕ ನೂತನ ಕೆಎಸ್ಆರ್ಟಿಸಿ ಬಸ್ ಸೇವೆಗೆ ಚಾಲನೆ ನೀಡಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಾಗೇನಹಳ್ಳಿಯಲ್ಲಿ ಶಾಸಕರು ಹೊಸ ಬಸ್ ಸೇವೆಗೆ ಸೋಮವಾರ ಚಾಲನೆ ನೀಡಿದರು. ದಶಕಗಳ ಬಳಿಕ ಬಸ್ ಸೇವೆ ಆರಂಭವಾಗಿದ್ದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ಹರಿಹರ ತಾಲೂಕಿನ ನಾಗೇನಹಳ್ಳಿ, ರಾಮತೀರ್ಥ, ಭಾನುವಳ್ಳಿ, ಯಲವಟ್ಟಿ, ಜಿಗಳಿ, ಮೇಲೆಬೆನ್ನೂರು ನಡುವೆ ಬಸ್ ಸಂಚಾರ ನಡೆಸಲಿದೆ. ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ ರಾಮಪ್ಪ ಅವರು ಸ್ವತಃ ಬಸ್ ಚಲಾಯಿಸುವ ಮೂಲಕ ಗಮನ ಸೆಳೆದರು.

ನಾಗೇನಹಳ್ಳಿ ಮತ್ತು ಸುತ್ತಮುತ್ತಲಿನ ಜನರು ಬಸ್ ಸಂಪರ್ಕವಿಲ್ಲದೇ ಪರದಾಡುತ್ತಿದ್ದರು. ಮಕ್ಕಳು ಶಾಲೆಗೆ ತೆರಳಲು ಸಹ ಆಟೋವನ್ನು ಅವಲಂಬಿಸಿದ್ದರು. ಹಿಂದೆ ಶಾಸಕರಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಬಸ್ ಸೌಕರ್ಯ ಸಿಕ್ಕಿರಲಿಲ್ಲ.

ಶಾಸಕ ಎಸ್.ರಾಮಪ್ಪ ಅವರು ಬಸ್ ಸೇವೆ ಆರಂಭಿಸಿದರು ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು. ಶಾಸಕರು ಬಸ್ ಓಡಿಸುವಾಗ ಜನರು ಅವರತ್ತ ಕೈ ಬೀಸಿ, ಜೈಕಾರ ಹಾಕುತ್ತಾ ಸಂತಸ ವ್ಯಕ್ತಪಡಿಸಿದರು.












Click it and Unblock the Notifications