ಜನರ ಪಾಲಿನ ದೇವರು, 2 ರೂ. ವೈದ್ಯ ಡಾ. ಬಸವಂತಪ್ಪರಿಗೆ ರಾಜ್ಯೋತ್ಸವ ಗರಿ
ದಾವಣಗೆರೆ, ಅಕ್ಟೋಬರ್ 30 : ಇದು 35 ವರ್ಷಗಳ ಸಾರ್ಥಕ ಸೇವೆಗೆ ಸಿಕ್ಕ ಗೌರವ. ಬಡವರ ಪಾಲಿನ ಆರಾಧ್ಯ ದೈವ. ಸಾವಿರಾರು ಜನರ ಪ್ರಾಣ ಉಳಿಸಿದ ವೈದ್ಯರು. ಎರಡು ರೂಪಾಯಿ ಪಡೆಯುತ್ತಿದ್ದ ಅವರು ಎಂದೂ ಹಣ ಕೇಳಿದವರಲ್ಲ. ಪ್ರೀತಿಯಿಂದ ಜನರೇ ನೀಡುತ್ತಿದ್ದ ದುಡ್ಡು ಪಡೆಯುವ ಅಪರೂಪದಲ್ಲಿ ಅಪರೂಪ ಎಂಬಂತಿರುವ ವೈದ್ಯರಿಗೆ ಈಗ ರಾಜ್ಯೋತ್ಸವ ಪ್ರಶಸ್ತಿ ಗರಿ ಸಿಕ್ಕಿದೆ.
ಇಂದಿಗೂ ನನ್ನನ್ನು ಎರಡು ರೂಪಾಯಿ ವೈದ್ಯರು ಎಂದು ಕರೆಯುತ್ತಾರೆ. ಜನರೇ ಕೊಟ್ಟ ಬಿರುದು. ಇದುವರೆಗೆ ಶಕ್ತಿಮೀರಿ ಪ್ರಾಮಾಣಿಕವಾಗಿ ರೋಗಿಗಳ ರೋಗ ಗುಣಪಡಿಸಿದ ತೃಪ್ತಿ ಇದೆ. ಕೊರೊನಾ ಸಮಯದಲ್ಲಿಯೂ ಕ್ಲಿನಿಕ್ ಮುಚ್ಚದೇ ಎಷ್ಟೋ ಜನರ ಜೀವ ಉಳಿಸಿದ ಖುಷಿ ಇದೆ ಎನ್ನುವುದು ಪ್ರಶಸ್ತಿಗೆ ಭಾಜನರಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೊನ್ನೆಮರದಹಳ್ಳಿ ಗ್ರಾಮದ ವೈದ್ಯರಾದ ಡಾ. ಬಸವಂತಪ್ಪರ ವಿನಮ್ರ ನುಡಿ. ಸಂತೇಬೆನ್ನೂರಿನಲ್ಲಿ ಕ್ಲಿನಿಕ್ ನಡೆಸುತ್ತಿರುವ ಇವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಇದು ಜಿಲ್ಲೆಗೂ ಖುಷಿ ತಂದಿದೆ.
ರಾಮನಗರ: 1,000ಕ್ಕೂ ಅಧಿಕ ಮರಗಳನ್ನು ಬೆಳೆಸಿದ ಅರೆಹಳ್ಳಿ ನಿಂಗಣ್ಣನಿಗೆ ರಾಜ್ಯೋತ್ಸವ ಪ್ರಶಸ್ತಿ
ಡಾ. ಎಂ ಬಸವಂತಪ್ಪನವರ ಸಾಧನೆಯ ಹಾದಿ ತುಂಬಾನೇ ಕಷ್ಟದ್ದು. ಹುಟ್ಟಿದ್ದು ಚನ್ನಗಿರಿ ತಾಲ್ಲೂಕಿನ ಹೊನ್ನೆಮರದಳ್ಳಿ ಗ್ರಾಮದಲ್ಲಿ. 1951 ರಲ್ಲಿ ಸಿದ್ಧಪ್ಪ ಮತ್ತು ಹಾಲಮ್ಮನವರ ದ್ವಿತೀಯ ಪುತ್ರನಾಗಿ ಜನಿಸಿದರು. ಸಿರೆಗೆರೆಯ ಎಸ್ ಟಿ ಜೆ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಪಿಯುಸಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪಡೆದರೆ, ಎಂಬಿಬಿಎಸ್ ಓದಿದ್ದು ಮೈಸೂರಿನ ಸರ್ಕಾರಿ ಮೆಡಿಕಲ್ ಕಾಲೇಜ್ ನಲ್ಲಿ. ವಿದ್ಯಾಭ್ಯಾಸ ಮುಗಿದ ಬಳಿಕ ಸಂತೇಬೆನ್ನೂರು ಗ್ರಾಮದಲ್ಲಿ ವೈದ್ಯನಾಗಿ ವೃತ್ತಿ ಆರಂಭಿಸಿದರು.
ಮಧ್ಯರಾತ್ರಿಯಲ್ಲಿಯೂ ಚಿಕಿತ್ಸೆ ನೀಡುವ ವೈದ್ಯ
'ತಾನು ಶಾಶ್ವತವಲ್ಲ, ತಾನು ಮಾಡುವ ಸೇವೆ ಶಾಶ್ವತ' ಎಂಬ ನಾಣ್ಣುಡಿಯಂತೆ ನಿಸ್ವಾರ್ಥಿಯಾಗಿ, ರೋಗಿಗಳ ಪ್ರೀತಿಯ ಕಡಲಾಗಿ, ತಾಳ್ಮೆವಹಿಸಿ, ವೈದ್ಯೋ ನಾರಾಯಣೋ ಹರಿ ಎಂಬಂತೆ 35 ವರ್ಷಗಳಿಂದಲೂ ಸೇವೆ ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ ಹಾಗೂ ಆಕಸ್ಮಿಕವಾಗಿ ತುರ್ತು ಚಿಕಿತ್ಸೆಗೆ ಬಂದವರಿಗೆ ಮಧ್ಯರಾತ್ರಿಯೇ ಸೇವೆಯನ್ನು ಸಲ್ಲಿಸುವ ಪ್ರಾಮಾಣಿಕ ವ್ಯಕ್ತಿ ಎನಿಸಿಕೊಂಡಿದ್ದಾರೆ ಡಾ. ಬಸವಂತಪ್ಪ.
ಮೈಸೂರಿನ ಪ್ರೊ.ಕೃಷ್ಣೇಗೌಡ, ಡಿ.ಮಾದೇಗೌಡಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಬಡವರ ಪಾಲಿನ ಸಂಜೀವಿನಿ ಡಾಕ್ಟರ್
ಆರಂಭದಲ್ಲಿ ಕೇವಲ 2 ರೂಪಾಯಿಯಂತೆ ಸೇವೆಯನ್ನು ಆರಂಭಿಸಿ 20 ವರ್ಷಗಳ ನಂತರ 5 ರೂಪಾಯಿ, ಆ ನಂತರ 15 ವರ್ಷ ಹಾಗೂ ಬಡ ರೋಗಿಗಳಿಗೆ ಉಚಿತ ಸೇವೆ ಸಲ್ಲಿಸಿದ್ದಾರೆ. ಕೊರೊನಾ ಸಮಯದಲ್ಲಿ ಆಸ್ಪತ್ರೆ ಬಾಗಿಲನ್ನು ಹಾಕದೇ ಸಾವಿರಾರು ರೋಗಿಗಳಿಗೆ ಉತ್ತಮ ಸೇವೆ ನೀಡಿದ್ದ ಹೆಗ್ಗಳಿಕೆ ಇವರದ್ದು. ಅತೀ ಕಡಿಮೆ ಕಡಿಮೆ ದರದಲ್ಲಿ ಸೇವೆ ಕೊಡುವ ಇವರು ಬಡ ರೋಗಿಗಳ ಪಾಲಿನ ದೇವರಾಗಿದ್ದಾರೆ.
'ಸಾಧನೆ ಇಲ್ಲದೇ ಸತ್ತರೇ ಸಾವಿಗೆ ಅವಮಾನ , ಆದರ್ಶವಿಲ್ಲದೇ ಸತ್ತರೇ ಬದುಕಿಗೆ ಅವಮಾನ' ಎಂಬಂತೆ ದೃಢ ಸಂಕಲ್ಪದಿಂದ ಯಾರಿಗೆ ಯಾವ ಸಮಯದಲ್ಲಿ ಕಷ್ಟಗಳಿಗೆ ಅಂಜದೇ ಸಮಾಜದ ಎಲ್ಲಾ ವರ್ಗದವರಿಗೂ ಚಿಕಿತ್ಸೆ ನೀಡಿದ ಬಡವರ ಪಾಲಿನ ಸಂಜೀವಿನಿ ಡಾಕ್ಟರ್ ಅಂತಾನೇ ಕರೆಯಲಾಗುತ್ತದೆ.
ದಿನಕ್ಕೆ ನೂರಾರು ರೋಗಿಗಳಿಗೆ ಚಿಕಿತ್ಸೆ
ಡಾ. ಬಸವಂತಪ್ಪ ದಿನಕ್ಕೆ 100 ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಚನ್ನಗಿರಿ ತಾಲೂಕು ಮಾತ್ರವಲ್ಲ ಬೇರೆ ಬೇರೆ ಹಳ್ಳಿಗಳಿಂದಲೂ ನೂರಾರು ಜನರು ಇವರ ಬಳಿ ಬಂದು ಕಾಯಿಲೆ ವಾಸಿ ಮಾಡಿಕೊಂಡು ಹೋಗಿದ್ದಾರೆ. ಈಗಲೂ ಇವರ ಸೇವೆಗೆ ಜೈಹೋ ಎನ್ನುತ್ತಾರೆ. ರೋಗಿಗಳನ್ನು ಉಳಿಸುವ ದೇವರು, ಬಡವರ ಕಷ್ಟಕ್ಕೆ ಮರುಗುವ, ರೋಗ ವಾಸಿ ಮಾಡುವ ಈ ವೈದ್ಯರಿಗೆ ಅವರೇ ಸಾಟಿ.
ಪ್ರಶಸ್ತಿ ಜನರಿಗೆ ಸಂದ ಗೌರವವೆಂದ ವೈದ್ಯರು
ಬಸವಂತಪ್ಪರ ಸೇವೆ ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಗೌರವಿಸಿವೆ, ಸನ್ಮಾನಿಸಿವೆ. ಡಾ ಬಸವಂತಪ್ಪ ನವರು ವೃತ್ತಿ ಆರಂಭದಿಂದ ಇಲ್ಲಿಯವರೆಗೆ ಕ್ಲಿನಿಕ್ನಲ್ಲಿ ಯಾರೊಬ್ಬರ ಸಹಾಯವಿಲ್ಲದೇ ಒನ್ ಮ್ಯಾನ್ ಆರ್ಮಿ ರೀತಿಯಲ್ಲಿ ಎಲ್ಲಾ ಕೆಲಸಗಳನ್ನು ನಿರ್ವಹಿಸಿಕೊಂಡು ಬಂದಿರುವುದು ಮತ್ತೊಂದು ಹೆಗ್ಗಳಿಕೆ.
ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ತುಂಬಾನೇ ಸಂತಸ ತಂದಿದೆ. ಸಚಿವ ಸುನೀಲ್ ಕುಮಾರ್ ಅವರು ಯಾವುದೇ ಒತ್ತಡಕ್ಕೆ ಮಣಿಯದೇ ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ಮಾತ್ರ ಪ್ರಶಸ್ತಿ ಎಂದು ಹೇಳಿದ ಕಾರಣಕ್ಕೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದೆ. ನನಗೆ ಪ್ರಶಸ್ತಿ ನೀಡಿರುವುದು ನನ್ನ ಸೇವೆಗೆ. ಜನರಿಗೆ ಸಂದ ಗೌರವ ಇದು. ಜನರು ತೋರಿಸಿದ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ. ಅವರ ಕಷ್ಟಕ್ಕೆ ಸ್ಪಂದಿಸಿದ್ದು, ರೋಗಿಗಳ ರೋಗ ವಾಸಿ ಮಾಡಿದ ಆತ್ಮತೃಪ್ತಿ ಇದೆ ಎನ್ನುತ್ತಾರೆ ಡಾ. ಬಸವಂತಪ್ಪ.