ದಾವಣಗೆರೆ : ಚನ್ನಗಿರಿಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ?
ದಾವಣಗೆರೆ , ಏಪ್ರಿಲ್ 12 : ದಾವಣಗೆರೆ ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರ ಚನ್ನಗಿರಿ. ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿದ ಕ್ಷೇತ್ರವಿದು. ಈ ಬಾರಿ ಹಲವು ಕಾರಣಗಳಿಗೆ ಕ್ಷೇತ್ರದ ಕದನ ಕುತೂಹಲ ಹುಟ್ಟು ಹಾಕಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಸ್ವ ಕ್ಷೇತ್ರ ಚನ್ನಗಿರಿ. ಜೆ.ಎಚ್.ಪಟೇಲ್ ಅವರ ಪುತ್ರ ಮಹಿಮಾ ಜೆ.ಪಟೇಲ್ ಈ ಬಾರಿ ಕ್ಷೇತ್ರದಿಂದ ಜೆಡಿಯು ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಜೆಡಿಯು ರಾಜ್ಯ ಘಟಕದ ಅಧ್ಯಕ್ಷರೂ ಅವರೇ.
ಕ್ಷೇತ್ರ ಪರಿಚಯ : ಚನ್ನಗಿರಿಯಲ್ಲಿ ಈ ಬಾರಿ ಯಾರಿಗೆ ಗೆಲುವು?
ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ವಡ್ನಾಳ್ ರಾಜಣ್ಣ. ಬಿಜೆಪಿಯ ಕೆ.ಮಾಡಾಳು ವಿರೂಪಾಕ್ಷಪ್ಪ ಮತ್ತು ವಡ್ನಾಳ್ ರಾಜಣ್ಣ ನಡುವೆ ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲಿ ನೇರ ಪೈಪೋಟಿ ನಡೆಯುತ್ತದೆ. ಮಹಿಮಾ ಪಟೇಲ್ ಅವರು ಒಂದು ಬಾರಿ ಮಾತ್ರ ಕ್ಷೇತ್ರದಲ್ಲಿ ಗೆಲವು ಕಂಡಿದ್ದಾರೆ.
ಜೆ.ಎಚ್.ಪಟೇಲ್ ಅವರು ಕ್ಷೇತ್ರದಿಂದ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಮುಖ್ಯಮಂತ್ರಿಯಾಗಿಯೂ ರಾಜ್ಯದ ಆಡಳಿತ ನಡೆಸಿದರು. ಮಹಿಮಾ ಪಟೇಲ್ ಅವರು ಒಂದು ಬಾರಿ ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ. ಈ ಬಾರಿ ಪುನಃ ಅದೃಷ್ಟ ಪರೀಕ್ಷೆಗೆ ಇಳಿಸಿದ್ದಾರೆ.
ಮಹಿಮಾ ಪಟೇಲ್ ಸ್ಪರ್ಧೆ
ಭ್ರಷ್ಟಾಚಾರವಿಲ್ಲದ ಪಾರದರ್ಶಕ ಚುನಾವಣೆ ನಡೆಯಬೇಕು ಎಂಬುದು ಮಹಿಮಾ ಪಟೇಲ್ ಅವರ ಸಿದ್ದಾಂತ. ಈ ಸಿದ್ದಾಂತವನ್ನು ಮುಂದಿಟ್ಟುಕೊಂಡು ಅವರು ಈ ಬಾರಿಯ ಚುನಾವಣೆಯನ್ನು ಎದುರಿಸುತ್ತಿದ್ದಾರೆ.
ಮಹಿಮಾ ಪಟೇಲ್ ಒಂದು ಬಾರಿ ಚನ್ನಗಿರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. 2008ರ ಚುನಾವಣೆಯಲ್ಲಿ ಸ್ವರ್ಣಯುವ ಪಕ್ಷದಿಂದ ಕಣಕ್ಕಿಳಿದಿದ್ದ ಅವರು ಕೇವಲ 9,519 ಮತಗಳನ್ನು ಪಡೆದು 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. 2013ರ ಚುನಾವಣೆಗೆ ಅವರು ಸ್ಪರ್ಧೆ ಮಾಡಿರಲಿಲ್ಲ.
ಹಲವು ಬಾರಿ ಪಕ್ಷಾಂತರ ಮಾಡಿದ್ದಾರೆ
ಮಹಿಮಾ ಪಟೇಲ್ ಈಗ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸೇರಿದ್ದಾರೆ. ಕರ್ನಾಟಕ ರಾಜ್ಯ ಘಟಕಕ್ಕೆ ಅವರೇ ಅಧ್ಯಕ್ಷರು. ಜೆಡಿಯು ಅಭ್ಯರ್ಥಿಯಾಗಿ ಅವರು 2018ರ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
2004ರ ಚುನಾವಣೆಯಲ್ಲಿ ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ 42,837 ಮತಗಳನ್ನು ಪಡೆದು ಜಯಗಳಿಸಿದ್ದರು. 2008ರಲ್ಲಿ ಸ್ವರ್ಣಯುಗ ಎಂಬ ಪಕ್ಷ ಸ್ಥಾಪನೆ ಮಾಡಿ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು. 2013ರ ಚುನಾವಣೆಗೆ ಅವರು ಸ್ಪರ್ಧೆ ಮಾಡಿರಲಿಲ್ಲ.
ಹಾಲಿ ಶಾಸಕರು ವಡ್ನಾಳ್ ರಾಜಣ್ಣ
ಚನ್ನಗಿರಿ ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ವಡ್ನಾಳ್ ರಾಜಣ್ಣ. 2013ರ ಚುನಾವಣೆಯಲ್ಲಿ ಅವರು 53,355 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕ್ಷೇತ್ರದ ಚುನಾವಣೆ ಎಂದರೆ ಸದ್ಯದ ಮಟ್ಟಿಗೆ ಕಾಂಗ್ರೆಸ್ನ ವಡ್ನಾಳ್ ರಾಜಣ್ಣ ಮತ್ತು ಬಿಜೆಪಿಯ ಮಾಡಾಳು ವಿರೂಪಾಕ್ಷಪ್ಪ ನಡುವಿನ ಹಣಾಹಣಿ.
2008ರ ಚುನಾವಣೆಯಲ್ಲಿ ಮಾಡಾಳು ವಿರೂಪಾಕ್ಷಪ್ಪ ಅವರು ಜಯಗಳಿಸಿದ್ದರು. ವಡ್ನಾಳ್ ರಾಜಣ್ಣ ಅವರು 2ನೇ ಸ್ಥಾನ ಪಡೆದಿದ್ದರು. 2004ರ ಚುನಾವಣೆಯಲ್ಲಿ ಮಾಡಾಳು ವಿರೂಪಾಕ್ಷಪ್ಪ ಮತ್ತು ವಡ್ನಾಳ್ ರಾಜಣ್ಣ ಇಬ್ಬರೂ ಸೋತಿದ್ದರು. ಮಹಿಮಾ ಪಟೇಲ್ ಗೆದ್ದಿದ್ದರು.
ಮಾಡಾಳು ವಿರೂಪಾಕ್ಷಪ್ಪ ಅಭ್ಯರ್ಥಿ?
ಮಾಡಾಳು ವಿರೂಪಾಕ್ಷಪ್ಪ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರು. ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದಾಗ ಅವರು ಕೆಜೆಪಿ ಸೇರಿದ್ದರು.
2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾಡಾಳು ವಿರೂಪಾಕ್ಷಪ್ಪ 51,582 ಮತಗಳನ್ನು ಪಡೆದು ಎರಡನೇ ಸ್ಥಾನಗಳಿಸಿದ್ದರು. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದ್ದು, ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.
ಜೆಡಿಎಸ್ನಿಂದ ಹೂದಿಗೆರೆ ರಮೇಶ್
ಜೆಡಿಎಸ್ ಪಕ್ಷ ಹೂದಿಗೆರೆ ರಮೇಶ್ 2018ರ ಚುನಾವಣೆಯ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. 2013ರ ಚುನಾವಣೆಯಲ್ಲಿ ಅವರು 28,900 ರೂ. ಮತಗಳನ್ನು ಪಡೆದು 3ನೇ ಸ್ಥಾನ ಪಡೆದಿದ್ದರು.
2008ರ ಚುನಾವಣೆಯಲ್ಲಿಯೂ ಹೂದಿಗೆರೆ ರಮೇಶ್ 21,499 ಮತಗಳನ್ನು ಪಡೆದಿದ್ದರು. ಈ ಬಾರಿ ಅನುಕಂಪದ ಆಧಾರದ ಮೇಲೆ ಅವರು ಗೆಲುವು ಸಾಧಿಸಲಿದ್ದಾರೆಯೇ ಕಾದು ನೋಡಬೇಕು.