ದಾವಣಗೆರೆ; ಕೀಲುನೋವಿಗೆ ಬಾಗಳಿ ಗ್ರಾಮದಲ್ಲಿ ನಾಟಿ ವೈದ್ಯನ ಚಿಕಿತ್ಸೆ
ದಾವಣಗೆರೆ, ಅಕ್ಟೋಬರ್, 09: ವೈದ್ಯಕೀಯ ಲೋಕ ಎಷ್ಟೇ ಮುಂದುವರೆದಿದ್ದರೂ ನಾಟಿ ವೈದ್ಯ ಪದ್ಧತಿಗೆ ಈಗಲೂ ಬೇಡಿಕೆ ಹೆಚ್ಚಾಗಿದೆ. ಎಷ್ಟೋ ಜನ ವೈದ್ಯರ ಬಳಿ ಹೋದರೂ ಕಾಯಿಲೆ ವಾಸಿ ಆಗಿರುವುದಿಲ್ಲ. ಇದರಿಂದ ಬೇಸತ್ತ ಜನರು ಕೊನೆಗೆ ನಾಟಿ ವೈದ್ಯ ಪದ್ಧತಿಯತ್ತ ಮುಖ ಮಾಡುವುದು ಹೆಚ್ಚಾಗಿಬಿಟ್ಟಿದೆ. ಅದೇ ರೀತಿಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದಲ್ಲಿ ನಾಟಿ ವೈದ್ಯ ಹೊಸೂರಪ್ಪ ತುಂಬಾನೇ ಪ್ರಸಿದ್ಧಿ ಆಗಿದ್ದಾರೆ.
ಕೀಲುನೋವು, ಮೊಣಕೈ ನೋವು ಸೇರಿದಂತೆ ಹಲವು ರೀತಿಯ ನೋವು ಅನುಭವಿಸುವ ಜನರು ಚಿಕಿತ್ಸೆಗೆ ಇಲ್ಲಿಗೆ ಬರುತ್ತಾರೆ. ಕೇವಲ ಹರಪನಹಳ್ಳಿ ತಾಲೂಕು, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಮಾತ್ರವಲ್ಲ, ರಾಜ್ಯದ ನಾನಾ ಮೂಲೆಗಳಿಂದ ರೋಗಿಗಳು ಬರುತ್ತಾರೆ. ಇಲ್ಲಿಗೆ ಬಂದ ಬಹುತೇಕ ಜನರು ಗುಣಮುಖರಾಗಿ ಹೋಗಿದ್ದಾರೆ. ಈಗಲೂ ಇಲ್ಲಿಗೆ ಜನಜಾತ್ರೆಯೇ ನೆರೆದಿರುತ್ತದೆ.
ದಾವಣಗೆರೆಗೆ ನೀರು ಪೂರೈಕೆ ಮಾಡುವ ತೂಗು ತೊಟ್ಟಿಲು ಕುಸಿತ: ಜಿಲ್ಲಾಧಿಕಾರಿ ಭರವಸೆ ಏನು?
ಬೆಳಗ್ಗೆ ಶುರುವಾಗುವ ಜನರ ಸಾಲು ಸಂಜೆಯವರೆಗೂ ಹಾಗೆಯೇ ಇನ್ನು ಹೆಚ್ಚುತ್ತಲೇ ಇರುತ್ತದೆ. ನಾಡಿ ನೋಡಿ, ಕೈ, ಕಾಲು ಸೇರಿದಂತೆ ಮೂಳೆ ಮುರಿದಿದ್ದರೆ ಸರಿ ಆಗುತ್ತದೆಯೋ, ಇಲ್ಲವೋ ಎಂಬುದನ್ನು ಸ್ಥಳದಲ್ಲಿಯೇ ಹೇಳುತ್ತಾರೆ. ಒಂದು ವೇಳೆ ಗುಣಮುಖ ಆಗುವುದಿದ್ದರೆ ಚಿಕಿತ್ಸೆ ನೀಡುತ್ತಾರೆ. ಇಲ್ಲದಿದ್ದರೆ ಆಗುವುದಿಲ್ಲ ಎಂದು ಹೇಳುತ್ತಾರೆ.
ಬಾಗಳಿ ನಾಟಿ ವೈದ್ಯ ಹೊಸೂರಪ್ಪಗೆ ಮೆಚ್ಚುಗೆ
ವೈದ್ಯರ ಬಳಿ ಹೋದರೂ ಕಾಯಿಲೆ ವಾಸಿ ಆಗಿರಲಿಲ್ಲ. ಆದರೆ ಇವರ ಬಳಿ ಹೋದಾಗ ವಾಸಿ ಆಗುತ್ತದೆ ಎಂದು ಇಲ್ಲಿ ಚಿಕಿತ್ಸೆ ಪಡೆದ ಜನರು ಹೇಳುತ್ತಾರೆ. ಎಂಬಿಬಿಎಸ್ ಓದದಿದ್ದರೂ ರೋಗಿಗಳ ಪಾಲಿನ ವೈದ್ಯರು ಇವರೇ ಆಗಿದ್ದಾರೆ. ಈ ರೀತಿ ಪ್ರಸಿದ್ಧಿ ಪಡೆದಿರುವ ನಾಟಿ ವೈದ್ಯ ಹೊಸೂರಪ್ಪ ಅವರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದವರಾಗಿದ್ದಾರೆ.
ದಾವಣಗೆರೆ, ಚಿತ್ರದುರ್ಗದ ಜನರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ತಂದೆ ಹಾದಿಯನ್ನು ಅನುಸರಿಸಿದ ಮಗ
ಇಲ್ಲಿಗೆ ಹೋದರೆ ಯಾವುದೇ ರೀತಿಯ ಎಕ್ಸ್ ರೇ ತೆಗೆಯುವುದಿಲ್ಲ. ಮುರಿದ ಜಾಗವನ್ನು ಕೈಯಿಂದ ಪರೀಕ್ಷೆ ನಡೆಸುವ ಹೊಸೂರಪ್ಪ ಚಿಕಿತ್ಸೆ ಕೊಡುತ್ತಾರೆ. ನಾಟಿ ವೈದ್ಯರಾಗಿ ಹೆಸರು ಮಾಡಿದ್ದ ಹೂಸೂರಪ್ಪ ತಂದೆ ಕೆಂಚಪ್ಪ ಕೂಡ ಈ ಭಾಗದಲ್ಲಿ ತುಂಬಾನೇ ಖ್ಯಾತಿ ಪಡೆದವರಾಗಿದ್ದಾರೆ. ಕುಟುಂಬದ ಬಳುವಳಿಯಾಗಿ ಬಂದ ನಾಟಿ ವೈದ್ಯ ಪದ್ಧತಿಯು ಕೆಂಚಪ್ಪ ಅವರಿಂದ ಮತ್ತಷ್ಟು ಪ್ರಖ್ಯಾತಿ ಆಗಿದೆ. ಕೆಂಚಪ್ಪ ತೀರಿಕೊಂಡ ಬಳಿಕ ಪದವೀಧರರಾಗಿದ್ದ ಹೊಸೂರಪ್ಪ ಇಲ್ಲಿಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿದರು. ವಿಕಲಚೇತನರಾದರೂ ಎಲ್ಲವನ್ನು ಮೆಟ್ಟಿ ನಿಂತ ಸಾಧಕರು ಇವರಾಗಿದ್ದಾರೆ.
ರಾಜ್ಯದೆಲ್ಲೆಡೆ ಪ್ರಖ್ಯಾತಿಯಾದ ಹೊಸೂರಪ್ಪ
ಇಲ್ಲಿ ದುಬಾರಿ ಹಣ ತೆಗೆದುಕೊಳ್ಳುವುದಿಲ್ಲ. ಒಬ್ಬರನ್ನು ನೋಡಿ ಚಿಕಿತ್ಸೆ ನೀಡಿದರೆ ಕೇವಲ ನೂರು ರೂಪಾಯಿ ಪಡೆಯಲಾಗುತ್ತದೆ. ಬಳಿಕ ನೀಡುವ ಸಸ್ಯ ಔಷಧಕ್ಕೆ ತಕ್ಕಂತೆ ಕಡಿಮೆ ಶುಲ್ಕವನ್ನು ಪಡೆಯಲಾಗುತ್ತದೆ. ರಾಜ್ಯದ ವಿವಿಧ ಮೂಲೆಗಳಿಂದ ಬಂದ ರೋಗಿಗಳು ಗುಣಮುಖರಾಗಿ ಹೋಗಿದ್ದಾರೆ. ಕೆಲವರು ಆಪರೇಷನ್ ಮಾಡಿಸಿದರೂ ವಾಸಿ ಆಗಿಲ್ಲ. ಇಲ್ಲಿಗೆ ಬಂದ ಬಳಿಕ ಗುಣಮುಖ ಆಗಿದೆ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.
ರೋಗಿಗಳು ಅನುಸರಿಸಬೇಕಾದ ನಿಯಮಗಳು?
ಕೆಂಚಪ್ಪ ಬಾಗಳಿ ಸಮೀಪದ ಕಾಡಿನಿಂದ ಔಷಧದ ಸೊಪ್ಪು ತಂದು, ಅದನ್ನು ಚೆನ್ನಾಗಿ ಅರೆದು ಅದರಿಂದ ತಾವೇ ಖುದ್ದು ನಾಟಿ ಔಷಧಿ ತಯಾರು ಮಾಡುತ್ತಿದ್ದರು. ಕೈ, ಕಾಲು, ಮೂಳೆ ಮುರಿದಿರುವಂತಹ ರೋಗಿಗಳು ಇಲ್ಲಿಗೆ ಬರುವಾಗ ಮೇಕೆ ಹಾಲು ತರಬೇಕು. ಈ ಹಾಲಿನಲ್ಲಿ ಹೊಸೂರಪ್ಪ ತಯಾರು ಮಾಡಿದ ಔಷಧಿಯನ್ನು ತೇಯ್ದು, ನಂತರ ಮುರಿದ ಜಾಗಕ್ಕೆ ಹಚ್ಚಿ ಪಟ್ಟು ಕಟ್ಟುತ್ತಾರೆ. ಒಂದು ತಿಂಗಳ ಒಳಗಾಗಿ ಎಂತಹ ಮೂಳೆ ಮುರಿದಿದ್ದರೂ ಸರಿ ಹೋಗುತ್ತದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಪಟ್ಟು ಕಟ್ಟುವ ಔಷಧಕ್ಕೆ ಬಳಸುವ ಸೊಪ್ಪು ಯಾವುದು ಎಂಬುದು ಯಾರಿಗೂ ಗೊತ್ತಿಲ್ಲ. ಗೊತ್ತಾಗುವುದೂ ಇಲ್ಲ. ಯಾಕೆಂದರೆ ಅದು ಕೆಂಚಪ್ಪನ ಕುಟುಂಬದವರಿಗೆ ಮಾತ್ರ ಗೊತ್ತಿದೆ. ಅದನ್ನು ಎಲ್ಲಿಯೂ ಹೇಳುವುದಿಲ್ಲ, ಗೊತ್ತೂ ಮಾಡುವುದಿಲ್ಲ. ತಂದೆಯ ಮರಣದ ನಂತರ ಕಾಲಕ್ರಮೇಣ ಹೊಸೂರಪ್ಪ ಇದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ನಾಟಿ ವೈದ್ಯನ ಸಮಾಜ ಸೇವೆಗೆ ಭಾರಿ ಮೆಚ್ಚುಗೆ
ಇಲ್ಲಿಗೆ ಬರುವ ರೋಗಿಗಳಿಗೆ ಹಣ ನೀಡಿ ಎಂದು ಕೇಳುವುದಿಲ್ಲ. ಅವರು ನೀಡುವ ಹಣವನ್ನಷ್ಟೇ ಪಡೆಯುತ್ತಾರೆ. ನಿಸ್ವಾರ್ಥ ಸೇವೆಯಿಂದ ಚಿಕಿತ್ಸೆ ನೀಡುತ್ತಿರುವ ಹೊಸೂರಪ್ಪ ಜನರು ಎಷ್ಟು ಪ್ರೀತಿಯಿಂದ ಹಣ ಕೊಡುತ್ತಾರೆಯೋ ಅಷ್ಟನ್ನು ಮಾತ್ರ ಪಡೆಯುತ್ತಾರೆ. ಇದರಿಂದ ಬಂದಂತಹ ಹಣದಿಂದ ಬಡ ಜನರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಿಸುವ ಮೂಲಕ ಎಲ್ಲರ ಮೆಚ್ಚುಗೆಗೂ ಸಹ ಪಾತ್ರರಾಗಿದ್ದಾರೆ. ಹಾಸಿಗೆ ಹಿಡಿದು ಇನ್ಮೇಲೆ ನಡೆದಾಡಲು ಆಗುವುದಿಲ್ಲ ಎಂದುಕೊಂಡ ಎಷ್ಟೋ ಜನರು ಹೊಸೂರಪ್ಪನ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಕೇವಲ ಬಳ್ಳಾರಿ, ದಾವಣಗೆರೆ ಜಿಲ್ಲೆಯಿಂದ ಮಾತ್ರವಲ್ಲ, ಬೇರೆ ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಚಿಕಿತ್ಸೆ ಪಡೆಯಲು ಬರುತ್ತಲೇ ಇದ್ದಾರೆ, ಗುಣಮುಖರಾಗಿ ಹೋಗುತ್ತಲೇ ಇದ್ದಾರೆ. ರೋಗಿಗಳಿಂದ ಬಂದ ಹಣದಲ್ಲಿ ಇವರು ಯಾವ ಆಸ್ತಿಯನ್ನು ಮಾಡಿಲ್ಲ. ಈಗಲೂ ತನ್ನ ತಂದೆ ವಾಸವಿದ್ದ ಹಳೇ ಹಂಚಿನ ಮನೆಯಲ್ಲಿ ವಾಸವಿದ್ದಾರೆ. ಈ ಮೂಲಕ ನಿಸ್ವಾರ್ಥ ಸೇವೆಯಿಂದ ಎಲ್ಲರ ಮೆಚ್ಚುಗೆ ಹಾಗೂ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇನ್ನು ಈ ವಿದ್ಯೆ ಇಲ್ಲಿಗೆ ಮುಗಿಯಬಾರದು ಎನ್ನುವ ಕಾರಣಕ್ಕೆ ತಮ್ಮ ಮಕ್ಕಳು, ಸಹೋದರರಿಗೂ ಧಾರೆ ಎರೆಯುತ್ತಿದ್ದಾರೆ. ನಾಟಿ ವೈದ್ಯ ಪದ್ಧತಿ ಉಳಿಯಬೇಕು ಎಂಬ ಸದುದ್ದೇಶದಿಂದ ತಮ್ಮ ಕುಟುಂಬದವರಿಗೆ ಕಲಿಸುತ್ತಾರೆ. ಈ ಮೂಲಕ ತಲಾ ತಲಾಂತರದಿಂದ ಬಂದ ಈ ವಿಶೇಷ ಚಿಕಿತ್ಸೆ ಉಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಜೊತೆಗೆ ನಾಟಿ ವೈದ್ಯ ಸಂಸ್ಕೃತಿ ನಾಡಿನೆಲ್ಲೆಡೆ ಪಸರಿಸುವಂತೆ ಮಾಡಿದ್ದಾರೆ. ನನಗೆ ಜನರು ಗುಣಮುಖರಾಗಿ ಹೋಗಬೇಕು ಎನ್ನುವುದಷ್ಟೇ ಆಸೆ. ಹಣಕ್ಕಾಗಿ ನಾಟಿ ವೈದ್ಯ ಪದ್ಧತಿ ಮಾಡುತ್ತಿಲ್ಲ. "ಎಷ್ಟೋ ಜನ ಇಲ್ಲಿಗೆ ಬಂದು ಗುಣಮುಖರಾಗಿ ಹೋಗಿದ್ದಾರೆ. ಇನ್ನು ತುಂಬಾ ವಯಸ್ಸಾದವರಿಗೆ, ಬಿಪಿ, ಶುಗರ್, ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾದವರು ಗುಣಮುಖರಾಗುವುದು ಕಷ್ಟ. ಉಳಿದಂತೆ ಎಲ್ಲಾ ರೋಗಿಗಳು ವಾಸಿಯಾಗಿ ಹೋಗಿದ್ದಾರೆ. ನನ್ನ ಕೈಲಾದಷ್ಟು ಸೇವೆ ಮಾಡುತ್ತಿದ್ದೇನೆ ಎಂಬ ತೃಪ್ತಿ ಇದೆ" ಎಂದು ಹೊಸೂರಪ್ಪ ಹೇಳಿದ್ದಾರೆ.
ಗ್ರಾಮಕ್ಕೆ ತಲುಪುವ ಪ್ರಮುಖ ಮಾರ್ಗಗಳು
ದಾವಣಗೆರೆಯಿಂದ ಹರಪನಹಳ್ಳಿಗೆ ಹೋಗಬೇಕು. ಹರಪನಹಳ್ಳಿಯಿಂದ ಕೇವಲ 6 ಕಿಲೋ ಮೀಟರ್ ಸಾಗಿದರೆ ಸಾಕು, ಅಲ್ಲಿ ಬಾಗಳಿ ಎಂಬ ಗ್ರಾಮ ಬರುತ್ತದೆ. ಆ ಗ್ರಾಮದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇನ್ನು ಬಳ್ಳಾರಿ, ಹೊಸಪೇಟೆಯಿಂದ ಹರಪನಹಳ್ಳಿಗೆ ಬಂದು ಸಹ ಹೋಗಬಹುದು. ಯಾರಿಗೆ ಕೇಳಿದರೂ ಈ ಗ್ರಾಮದ ವಿಳಾಸವನ್ನು ಹೇಳುತ್ತಾರೆ, ಅಷ್ಟು ಪ್ರಸಿದ್ಧಿ ಆಗಿದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.