ಕ್ಷತ್ರಿಯ ಮರಾಠರೇ, ಬೆಂಗಳೂರು ಚಲೋಗೆ ಸಿದ್ಧರಾಗಿ; ಸಿಂಧ್ಯಾ
ಮರಾಠ ಸಮಾಜದವರನ್ನು 3 ಎ ಯಿಂದ 2ಎಗೆ ಸೇರಿಸಬೇಕೆಂದು ಒತ್ತಾಯಿಸಿ, ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಮರಾಠ ಸಮಾಜದವರು ಸಿದ್ದರಾಗಬೇಕೆಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಸೇರಿದಂತೆ ಅನೇಕ ಮುಖಂಡರು ಒಕ್ಕೊರಲಿನ ಕರೆ ನೀಡಿದರು.
ಚನ್ನಗಿರಿ, ಜನವರಿ 25: ಮರಾಠ ಸಮಾಜದವರನ್ನು 3 ಎ ಯಿಂದ 2ಎಗೆ ಸೇರಿಸಬೇಕೆಂದು ಒತ್ತಾಯಿಸಿ, 'ಬೆಂಗಳೂರು ಚಲೋ' ಕಾರ್ಯಕ್ರಮಕ್ಕೆ ಮರಾಠ ಸಮಾಜದವರು ಸಿದ್ದರಾಗಬೇಕೆಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಸೇರಿದಂತೆ ಅನೇಕ ಮುಖಂಡರು ಒಕ್ಕೊರಲಿನ ಕರೆ ನೀಡಿದರು.
ಚನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿ ನಡೆದ ಶಿವಾಜಿ ಮಹಾರಾಜರ ತಂದೆ ಷಹಾಜಿ ಮಹಾರಾಜರ 353 ನೇ ಪುಣ್ಯತಿಥಿ ಸಮಾರಂಭದಲ್ಲಿ ಸಿಂಧ್ಯಾ ಈ ರೀತಿ ಹೇಳಿದರು.
ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ,ರಾಜಕೀಯವಾಗಿ ಹಿಂದುಳಿದಿರುವ ಮರಾಠ ಸಮಾಜಕ್ಕೆ ರಾಜಕೀಯದಲ್ಲಿ ಸ್ಥಾನ-ಮಾನ ಸಿಕ್ಕಾಗ ಮಾತ್ರ ವಿಧಾನಸಭೆಯಲ್ಲಿ ನಮ್ಮ ಸಮಾಜಕ್ಕೆ ಆಗುತ್ತಿರುವ ಅನ್ಯಾಯ, ವಂಚನೆಯನ್ನು ಸರ್ಕಾರದ ಗಮನಕ್ಕೆ ತರಲು ಸಾಧ್ಯ ಎಂದರು.

ಶಿವಾಜಿಯಾಗಲೀ, ಷಹಾಜಿಯಾಗಲೀ ಯಾವುದೇ ಒಂದು ಜಾತಿಗೆ ಸೀಮಿತವಾಗಿರಲಿಲ್ಲ. ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದರು. ರಾಜ್ಯದಲ್ಲಿರುವ 40 ಲಕ್ಷ ಜನ ಮರಾಠಿಗರು ಕನ್ನಡಿಗರೊಂದಿಗೆ ನೆಮ್ಮದಿಯಿಂದ ಜೀವಿಸುತ್ತಿದ್ದಾರೆ ಎಂದರು.
ಮರಾಠರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವಂತೆ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂದು ಮುಖಂಡ ರಣಧೀರ ರಾವ್ ಪಾಠೆ ಅವರು ಸರ್ಕಾರಕ್ಕೆ ಆಗ್ರಹಪಡಿಸಿದರು.
353 ವರ್ಷಗಳ ಹಿಂದೆ ಷಹಾಜಿ ಮಹಾರಾಜರು ಪ್ರಾಣ ತ್ಯಾಗ ಮಾಡಿದ್ದರು. ಇನ್ನೂ ಅವರನ್ನು ನಾವು ಸ್ಮರಿಸುತ್ತಿರುವುದಕ್ಕೆ ಅವರ ಶೂರತನ, ಧೀರ ನಡೆ, ದೂರದೃಷ್ಟಿ ಕಾರಣವಾಗಿದೆ. ಯಾವುದೇ ಸರ್ಕಾರ ಬಂದರೂ, ಷಹಾಜಿ ಮಹಾರಾಜರ ಸಮಾಧಿ ಸ್ಥಳವನ್ನು
ನಿರೀಕ್ಷಿಸಿದಷ್ಟು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಐತಿಹಾಸಿಕ ಸ್ಥಳವಾದ ಹೊದಿಗೆರೆಯನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಹೊದಿಗೆರೆಯಲ್ಲಿ ಸೈನಿಕ ಶಾಲೆ, ಮೂಸಿಯಂ ಸ್ಥಾಪಿಸಲು ಸರ್ಕಾರ ಮುಂದಾಗಬೇಕೆಂದು ಮುಖಂಡರಾದ ಶಾಂತಕುಮಾರ್ ಅವರು ಹೇಳಿದರು.












Click it and Unblock the Notifications