ಮುಂದಿನ ಮುಖ್ಯಮಂತ್ರಿ ನಾನೇ; ಯತ್ನಾಳ್ ಘೋಷಣೆ
ದಾವಣಗೆರೆ, ಜನವರಿ 29: "ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರ್ಚಿ ಅಲುಗಾಡುತ್ತಿದ್ದು, ಮುಂದಿನ ಮುಖ್ಯಮಂತ್ರಿ ನಾನೇ" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದರು.
ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ನಡೆಯುತ್ತಿರುವ ಪಾದಯಾತ್ರೆ ಸಮಾವೇಶದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದರು.
"ವೀರಶೈವ ಲಿಂಗಾಯತರು ಈಗ ನೆನಪಾಯ್ತಾ?. ಕೇಂದ್ರವರು ಸಿಎಂ ಸ್ಥಾನದಿಂದ ವಜಾಗೊಳಿಸುವುದನ್ನು ಮನಗಂಡು ನೀವು ಲಿಂಗಾಯತರ ಅಭಿವೃದ್ಧಿ ನಿಗಮ ಮಾಡಿದ್ದೀರಾ?" ಎಂದು ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು.

"ಆಯಾ ಮಠಗಳಿಗೆ ಕೋಟಿಗಟ್ಟಲೆ ಹಣ ನೀಡಿದ್ದರು. ಹತ್ತು ಕೋಟಿಗೆ ಮಠನೇ ಮಾರಾಟ ಮಾಡೋದಾ?" ಎಂದು ಹರಿಹರ ಪಂಚಮಸಾಲಿ ಮಠಕ್ಕೆ ನೀಡಿದ ಹಣದ ಬಗ್ಗೆ ವ್ಯಂಗ್ಯ ವಾಡಿದರು.
"ನಮ್ಮ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ನಾನೇ ನಿಮಗೆ ಕೋಟಿಗಟ್ಟಲೆ ಹಣ ಕೊಡುತ್ತೀನಿ. ಸುಮ್ಮನೆ ಯಾಕೆ ಮೀಸಲಾತಿ ಕೊಡುವುದಾಗಿ ನಾಟಕ ಮಾಡುತ್ತೀರಾ?" ಎಂದು ಪ್ರಶ್ನಿಸಿದರು.
"ನಾನು ಮಂತ್ರಿಯಾಗಬೇಕೆಂದು ಯಾರ ಕೈಕಾಲು ಹಿಡಿಯುವವನಲ್ಲ. ನಮಗೆ ಬರೋದಿದೆ ಸಿಎಂ ಕುರ್ಚಿ" ಎಂದು ಹೇಳುವ ಮೂಲಕ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು.
"ಪಾದಯಾತ್ರೆ ಬೆಂಗಳೂರು ಸೇರುವ ಮುನ್ನ 2ಎ ಮೀಸಲಾತಿ ಘೋಷಸದಿದ್ದರೇ ನಿಮ್ಮ ಕುರ್ಚಿ ಖಾಲಿಯಾಗುತ್ತದೆ, ಮೊನ್ನೆ ನಮ್ಮಸಮಾಜದ ಕೆಲವರಿಗೆ ಸಣ್ಣಪುಟ್ಟ ಖಾತೆಗಳನ್ನು ನೀಡಿ, ತಮ್ಮಲ್ಲಿ ಇಂಧನ, ಹಣಕಾಸು, ಬೆಂಗಳೂರು ನಗರಾಭಿವೃದ್ಧಿ ಖಾತೆಗಳನ್ನು ಇಟ್ಕೊಂಡಿದ್ದೀರಾ?" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಮುಖ್ಯಮಂತ್ರಿ ಆಗಿದ್ದವರು ಕೈಗಾರಿಕಾ ಮಂತ್ರಿಯಾಗಿದ್ದಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬದಲು ಅವರನ್ನು ಇಳಿಸಿ ನಾವೇ ಮುಖ್ಯಮಂತ್ರಿ ಆಗಲಿದ್ದೇವೆ" ಎಂದು ವಾಗ್ದಾಳಿಯನ್ನು ನಡೆಸಿದರು.
ಸಿಎಂ ವಿರುದ್ಧ ಮಾತು; "ನಾನು ಸಿಎಂ ವಿರುದ್ಧ ಮಾತನಾಡುವುದರಿಂದ ನನಗೆ ನೀಡಿದ್ದ ಪೋಲಿಸ್ ಸೆಕ್ಯುರಿಟಿ ವಾಪಾಸ್ ಪಡೀತಿನಿ ಅಂದರು. ಅದಕ್ಕೆ ನಾನು ತೆಗಿಯುವಂತೆ ಹೇಳಿದ್ದೆ. ಯತ್ನಾಳ್ ವಿರುದ್ಧ ಎಷ್ಟು ಪ್ರಕರಣಗಳಿವೆ, ವಿಜಯಪುರದಲ್ಲಿರುವ ಅಧಿಕಾರಿಗಳನ್ನು ಬದಲಾವಣೆ ಮಾಡ್ತೀನಿ ಅಂದರು. ಮಾಡುವಂತೆ ಹೇಳಿರುವೆ. ನಾನು ಯಾರದ್ದು ಹಣ ತಿಂದಿಲ್ಲ ಯಾರೇ ಅಧಿಕಾರಿಗಳು ಬಂದರೂ ನನ್ನದೆ ಮಾತು ಕೇಳಬೇಕು" ಎಂದರು.












Click it and Unblock the Notifications