ನ್ಯಾಮತಿ ಸಮೀಪ ದೇವರ ಕೋಣದ ಉಪಟಳಕ್ಕೆ ಗ್ರಾಮಸ್ಠರು ಥಂಡಾ
ದಾವಣಗೆರೆ, ಆಗಸ್ಟ್ 19: ಒಡೆಯರ ಹತ್ತೂರು ಗ್ರಾಮದಲ್ಲಿ ದೇವರ ಹೆಸರಿನಲ್ಲಿ ಬಿಟ್ಟಿರುವ ಕೋಣದಿಂದ ಜನರಿಗೆ, ಜಾನುವಾರಿಗೆ ವಿಪರೀತ ತೊಂದರೆ ಆಗುತ್ತಿದೆ. ಅಲ್ಲಿನ ಮಾರಿಕಾಂಬ ದೇವತೆಯ ಹೆಸರಿನಲ್ಲಿ ಕೋಣ ಬಿಟ್ಟಿದ್ದು, ಪಕ್ಕದ ಕುಂಕುವ ಗ್ರಾಮದಲ್ಲಿ ಕೋಣ ನೀಡುತ್ತಿರುವ ಉಪಟಳ ವಿಪರೀತವಾಗಿದೆ ಎಂದು ಆ ಗ್ರಾಮದ ಯುವಕ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ.[ಮಧ್ಯಪ್ರದೇಶದ ಈ ಕೋಣದ ಬೆಲೆ ಕೇಳಿ, ಹೌಹಾರಬೇಡಿ]
ದೇವರ ಕೋಣ ಅಕ್ಕಪಕ್ಕದ ಗ್ರಾಮದಲ್ಲಿ ಓಡಾಡಿಕೊಂಡು, ಸಕತ್ತಾಗಿ ಬೆಳೆದಿದೆ. ನಾಲ್ಕು ವರ್ಷದಿಂದ ಒಡೆಯರಹತ್ತೂರು ಗ್ರಾಮದಿಂದ ಕುಂಕುವ ಗ್ರಾಮಕ್ಕೆ ಬಂದಿರುವ ಕೋಣ, ಗ್ರಾಮಸ್ಥರ ಮೇಲೆ, ಇಲ್ಲಿನ ಎಮ್ಮೆ-ಕರುಗಳ ಮೇಲೆ ದಾಳಿ ಮಾಡುತ್ತಿದೆ. ಇತ್ತೀಚೆಗೆ ಗ್ರಾಮದವರಾದ ವೀರಪ್ಪ ಅವರಿಗೆ ಸೇರಿದ ಎಮ್ಮೆ ಮೇಲೆ ಎರಗಿ, ಎರಡೂ ಕಾಲುಗಳನ್ನು ಮುರಿದುಹಾಕಿದೆ ಎಂದು ಹೇಳಿದರು.

ಇನ್ನು ಈಚೆಗೆ ಮೇಯಲು ಹೋಗಿದ್ದ ಎಮ್ಮೆ ಮೇಲೆ ದೇವರ ಕೋಣ ದಾಳಿ ಮಾಡಿ, ಆ ಎಮ್ಮೆ ಸ್ಥಳದಲ್ಲೇ ಸತ್ತುಹೋಯಿತು. ಆಗ ಆ ಸತ್ತ ಎಮ್ಮೆಯನ್ನು ಹೊತ್ತುಕೊಂಡುಹೋಗಿ ಒಡೆಯರ ಹತ್ತೂರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದೆವು. ಅಲ್ಲಿನ ಮುಖಂಡರು ಕೋಣವನ್ನು ಹಿಡಿದು ತರಿಸಿ, ಕಟ್ಟಿಹಾಕಿಸಿದ್ದರು. ಆದರೆ ಮತ್ತೆ ಇತ್ತೀಚೆಗೆ ಕೋಣವನ್ನು ಬಿಟ್ಟಿದ್ದಾರೆ. ಅದು ಕುಂಕುವ ಗ್ರಾಮಕ್ಕೆ ಬಂದು ಪುಂಡಾಟಿಕೆ ಮುಂದುವರಿಸಿದೆ ಎಂದು ಯುವಕ ಅಲವತ್ತುಕೊಂಡರು.
ಗ್ರಾಮದಲ್ಲಿ ಓಡಾಡುವುದಕ್ಕೆ ಹೆದರುವ ಹಾಗೆ ಆಗಿದೆ. ನ್ಯಾಮತಿ ಪೊಲೀಸರಿಗೆ ದೂರು ನೀಡಿದರೂ ಏನೂ ಪ್ರಯೋಜನ ಆಗಿಲ್ಲ. ಗ್ರಾಮ ಪಂಚಾಯಿತಿ ಆಡಳಿತವೋ, ಜಿಲ್ಲಾ-ತಾಲೂಕು ಪಂಚಾಯಿತಿ ಸದಸ್ಯರೋ ನಮ್ಮ ಸಮಸ್ಯೆ ಬಗೆಹರಿಸಬೇಕು. ಕೋಣವು ನಮ್ಮ ಗ್ರಾಮದೊಳಗೆ ಕಾಲಿಡಬಾರದು ಎಂದು ಒತ್ತಾಯಿಸಿದರು.












Click it and Unblock the Notifications