ತಂದೆ ಕಾಲದಲ್ಲಿ ದಾವಣಗೆರೆಗೆ, ಮಗನ ಆಡಳಿತದಲ್ಲಿ ಬಳ್ಳಾರಿ ಜಿಲ್ಲೆಗೆ!
ದಾವಣಗೆರೆ, ಮಾರ್ಚ್ 04 : ಹೈದರಾಬಾದ್-ಕರ್ನಾಟಕದ ಆರ್ಟಿಕಲ್ 371 (ಜೆ) ವ್ಯಾಪ್ತಿಗೆ ಹರಪನಹಳ್ಳಿ ತಾಲೂಕನ್ನು ಸೇರಿಸಲು, ತಾಲೂಕನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ನಿರ್ಣಯವನ್ನು ಸ್ಥಳೀಯ ಕಾಂಗ್ರೆಸ್ ಶಾಸಕ ಎಂ.ಪಿ. ರವೀಂದ್ರ ಸ್ವಾಗತಿಸಿದ್ದಾರೆ.
ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿ ಆಗಿದ್ದಾಗ ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಯಿಂದ ಬೇರ್ಪಡಿಸಿ, ದಾವಣಗೆರೆ ಜಿಲ್ಲೆಗೆ ಸೇರ್ಪಡೆ ಮಾಡಲಾಗಿತ್ತು. ಆಗ, ಎಂ.ಪಿ. ಪ್ರಕಾಶ್ ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.
ಈಗ, ಸಂವಿಧಾನದ ಪರಿಚ್ಛೇದ 371(ಜೆ) ವಿಶೇಷ ಸ್ಥಾನಮಾನ ಹೈದರಾಬಾದ್ - ಕರ್ನಾಟಕ ಪ್ರದೇಶಕ್ಕೆ ಸಿಕ್ಕ ನಂತರ ಹರಪನಹಳ್ಳಿಯನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸಲು ಜನಪರ ಹೋರಾಟ ನಡೆದಿತ್ತು. ಈಗ, ಹರಪನಹಳ್ಳಿ ಬಳ್ಳಾರಿ ಜಿಲ್ಲೆಗೆ ಸೇರಿಸಲು ಸರ್ಕಾರದ ಒಪ್ಪಿಗೆ ಸಿಕ್ಕಿದೆ.

ಎಂ.ಪಿ. ಪ್ರಕಾಶ್ ಅವರ ಪುತ್ರ ಎಂ.ಪಿ. ರವೀಂದ್ರ ಅವರು ಈ ಕ್ಷೇತ್ರದ ಕಾಂಗ್ರೆಸ್ ಶಾಸಕರು ಆಗಿರುವುದು ವಿಶೇಷ. ಈ ಸಂದರ್ಭದಲ್ಲಿ ಮಾತನಾಡಿದ ಎಂ.ಪಿ. ರವೀಂದ್ರ, 'ಬಳ್ಳಾರಿ ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದ ಹರಪನಹಳ್ಳಿ ಪುನಃ ಜಿಲ್ಲೆಯನ್ನು ಸೇರುತ್ತಿರುವುದು ಈ ಭಾಗದ ಯುವಶಕ್ತಿಗೆ ಪ್ರೋತ್ಸಾಹ ತಂದಿದೆ' ಎಂದರು.
'ಆಡಳಿತಾತ್ಮಕವಾಗಿ 1996 ರಲ್ಲಿ ದಾವಣಗೆರೆ ಜಿಲ್ಲೆ ಸೇರಿದ್ದ ಈ ತಾಲೂಕು, 20 ವರ್ಷಗಳ ನಂತರ ಮೂಲ ಜಿಲ್ಲೆಯನ್ನು ಸೇರುತ್ತಿದೆ. 371 (ಜೆ)ನ ಸೌಲಭ್ಯವನ್ನು ಪಡೆದು ಉದ್ಯೋಗ, ಉನ್ನತ ಶಿಕ್ಷಣ ಮತ್ತು ಸರ್ಕಾರಿ ಸೌಲಭ್ಯಗಳನ್ನು ಈ ಭಾಗದ ಯುವಕರು ಹೆಚ್ಚಾಗಿ ಪಡೆದು, ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಲಿದ್ದಾರೆ' ಎಂದು ಎಂ.ಪಿ.ರವೀಂದ್ರ ಹೇಳಿದರು.
'ಹರಪನಹಳ್ಳಿ ತಾಲೂಕನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸುವಲ್ಲಿ ಶ್ರಮಿಸಿದ ಕ್ಯಾಬಿನೆಟ್ನ ಎಲ್ಲಾ ಸಚಿವರು, ಉಪ ಸಮಿತಿ ಸದಸ್ಯರು, ಕಾನೂನು ಮತ್ತು ಕಂದಾಯ ಸಚಿವರುಗಳಿಗೆ ವೈಯಕ್ತಿಕವಾಗಿ ಕೃತಜ್ಞತೆಗಳನ್ನು ಸಲ್ಲಿಸುವೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಪ್ರಕಟವಾಗಲಿ' ಎಂದು ಅವರು ಆಶಯ ವ್ಯಕ್ತಪಡಿಸಿದರು.
ಪಟಾಕಿ ಸಿಡಿಸಿ ಸಂಭ್ರಮ : ಕ್ಯಾಬಿನೆಟ್ನ ನಿರ್ಣಯ ಪ್ರಕಟ ಆಗುತ್ತಿದ್ದಂತೆಯೇ ಹರಪನಹಳ್ಳಿಯ ಯುವಕರು ಐಬಿ ಸರ್ಕಲ್ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಪಟ್ಟು ಹರ್ಷೋದ್ಘಾರದ ಘೋಷಣೆಗಳನ್ನು ಕೂಗಿದರು.












Click it and Unblock the Notifications