ಸೂಳೆಕೆರೆ ಸುತ್ತಮುತ್ತ ಭೂಮಿ ಬಿರುಕು; ಜನರಲ್ಲಿ ಆತಂಕ
ದಾವಣಗೆರೆ, ಜುಲೈ 27; ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆಯ ಸುತ್ತ-ಮುತ್ತ ಭೂಮಿ ಬಿರುಕು ಬಿಡುತ್ತಿರುವುದು ಬೆಳಕಿಗೆ ಬಂದಿದೆ. ಸ್ಥಳೀಯರಲ್ಲಿ ಇದು ಆತಂಕವನ್ನು ಮೂಡಿಸಿದೆ.
ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆ ಎಂದೇ ಕರೆಯಲ್ಪಡುವ ಸೂಳೆಕೆರೆ ಲಕ್ಷಾಂತರ ಎಕರೆಗೆ ನೀರುಣಿಸುವ ಜೀವಸೆಲೆ. ಈ ಕೆರೆಯ ಎದುರು ಇರುವ ಗುಡ್ಡದಲ್ಲಿ ಅಲ್ಲಲ್ಲಿ ಭೂಮಿ ಕುಸಿದಿದ್ದರೆ, ಮತ್ತೆ ಕೆಲವೆಡೆ ದೊಡ್ಡ ದೊಡ್ಡ ಗುಂಡಿಗಳು ಕಾಣಿಸಿದ್ದು, ಮಣ್ಣು ಜರಿಯುತ್ತಿದೆ.
ಸೂಳೆಕೆರೆ ಸುತ್ತಮುತ್ತ ಭೂಮಿ ಬಿರುಕು ಬಿಡುವಷ್ಟು ಭಾರೀ ಮಳೆ ಸುರಿದಿಲ್ಲ. ಆದರೂ ಭೂಮಿ ಬಿರುಕು ಬಿಟ್ಟಿರುವುದನ್ನು ಖಡ್ಗ ಸಂಘಟನೆಯ ಪ್ರಮುಖರು ಪತ್ತೆ ಹಚ್ಚಿದ್ದಾರೆ. ಆದರೆ ಇದಕ್ಕೆ ನಿಖರ ಕಾರಣ ಗೊತ್ತಾಗಿಲ್ಲ.

ಸ್ಫೋಟದಿಂದಲೇ ಭೂಮಿ ಬಿರುಕು?; ಕಳೆದ ತಿಂಗಳು ಸೂಳೆಕೆರೆಯ ಮಂಟಪದ ಎದುರು ರಸ್ತೆ ಅಗಲೀಕರಣಕ್ಕಾಗಿ ಸ್ಫೋಟಕಗಳನ್ನು ಬಳಕೆ ಮಾಡಲಾಗಿತ್ತು. ನೂರು ಅಡಿ ಎತ್ತರದವರೆಗೆ ಮಣ್ಣು, ಕಲ್ಲು ಚಿಮ್ಮಿದ್ದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಇದರ ಮೇಲ್ಬಾಗದಲ್ಲಿಯೇ ಅಂದರೆ ಸಿದ್ದೇಶ್ವರ ದೇಗುಲದ ಅಕ್ಕಪಕ್ಕ ಭೂಮಿ ಬಿರುಕು ಬಿಟ್ಟಿರುವುದರಿಂದ ಸ್ಫೋಟ ಮಾಡಿದ್ದರಿಂದಲೇ ಆಗಿರಬಹುದು ಎಂಬ ಬಲವಾದ ಅನುಮಾನ ಖಡ್ಗ ಸಂಘಟನೆಯವರದ್ದು.
ಆರೋಪ ಏನು?; ಸೂಳೆಕೆರೆಯಲ್ಲಿ ಬ್ಲಾಸ್ಟ್ ಮಾಡಿದಾಗ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಖಡ್ಗ ಸಂಘಟನೆ ಹಾಗೂ ಸ್ಥಳೀಯರು ಕಾನೂನುಬಾಹಿರವಾಗಿ ಸ್ಫೋಟಕಗಳನ್ನು ಬಳಸಿ ಸ್ಪೋಟ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದರು. ಕೆರೆಗೆ ಅಪಾಯ ಆಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು.
ಆದರೆ ಈಗ ಮಣ್ಣು ಜರಿಯುತ್ತಿರುವುದು ಹಾಗೂ ಅಲ್ಲಲ್ಲಿ ಬಿರುಕು ಬಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಮಾತ್ರವಲ್ಲ ಸೂಳೆಕೆರೆಯಿಂದ ಸಿದ್ದನಾಲಕ್ಕೆ ಹೋಗುವ ಪೈಪ್ ಲೈನ್ ಹೋಗಿರುವ ಜಾಗದಲ್ಲಿಯೂ ಬಿರುಕು ಕಂಡುಬಂದಿರುವುದು ಆತಂಕ ಮತ್ತಷ್ಟು ಹೆಚ್ಚಿಸಿದೆ.
ಭೂಕುಸಿತವಾಗುತ್ತಿರುವುದು ಏಕೆ?, ಅಧಿಕಾರಿಗಳು ಯಾಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸತೊಡಗಿರುವ ಖಡ್ಗ ಸಂಘಟನೆಯವರು, ಸ್ಪೋಟ ಮಾಡಿದ್ದು ಈ ಅನಾಹುತಕ್ಕೆ ಪ್ರಮುಖ ಕಾರಣ ಎಂಬ ಆರೋಪ ಮಾಡಿದ್ದಾರೆ.
ಅಪಾಯಕ್ಕೆ ಆಹ್ವಾನ ನೀಡುವಂತೆ ಭೂಮಿ ಬಿರುಕು ಬಿಡುತ್ತಿದ್ದು, ಸೂಳೆಕೆರೆಯಲ್ಲಿ ಪರಮಾತ್ಮನ ಆಶೀರ್ವಾದದಿಂದ ಏನು ಆಗಿಲ್ಲ. ಅಪಾಯ ಆಗದ ರೀತಿಯಲ್ಲಿ ಕಾಪಾಡಿಕೊಳ್ಳಬೇಕಿದೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಈ ಕುಸಿತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಸೂಳೆಕೆರೆ ಉಳಿಸಿ ಹೋರಾಟ ಒಕ್ಕೂಟ ಹಾಗೂ ಖಡ್ಗ ಸಂಘಟನೆಯ ಪ್ರಮುಖರು ಆಗ್ರಹಿಸಿದ್ದಾರೆ.












Click it and Unblock the Notifications