ಬಿಜೆಪಿಯಿಂದ ಉಚ್ಚಾಟಿಸಿದರೆ ನನಗೇನೂ ನಷ್ಟವಿಲ್ಲ: ರೇಣುಕಾಚಾರ್ಯ ಹೇಳಿಕೆ ಹಿಂದಿನ ಮರ್ಮವೇನು?
ದಾವಣಗೆರೆ, ಜುಲೈ 06: ನನಗೆ ಪಕ್ಷದಿಂದ ನೋಟಿಸ್ ಕೊಟ್ಟರೆ ಹೆದರುವ ವ್ಯಕ್ತಿಯಲ್ಲ. ಬಿಜೆಪಿಯಿಂದ ಉಚ್ಚಾಟನೆ ಮಾಡುವುದಾದರೆ ಮಾಡಲಿ. ನನಗೇನೂ ನಷ್ಟ ಆಗದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಗುಡುಗಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನ್ನ ಬಾಯಿ ಮುಚ್ಚಿಸುತ್ತೇವೆಂದುಕೊಂಡರೆ ಆಗದು. ಇದು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಶಿಸ್ತು ಸಮಿತಿ ಕೊಟ್ಟಿರುವ ನೋಟಿಸ್ ಯಾವುದೇ ರೀತಿಯ ಉತ್ತರ ಕೊಡಲು ಹೋಗಲ್ಲ ಎಂದು ಹೇಳುವ ಮೂಲಕ ರಾಜ್ಯ ವರಿಷ್ಠರಿಗೆ ಎಂ.ಪಿ. ರೇಣುಕಾಚಾರ್ಯ ಮತ್ತೊಮ್ಮೆ ಬಿಸಿ ಮುಟ್ಟಿಸುವ ಕೆಲಸ ಮಾಡಿದರು.

ನಾನು ಎಂದಿಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಿಲ್ಲ. 11 ಜನರಿಗೆ ನೋಟಿಸ್ ಕೊಟ್ಟಿದ್ದೇವೆಂದು ಹೇಳುತ್ತಾರೆ. ಬಿಜೆಪಿ ಕಚೇರಿಯೊಳಗೆ ಈ ಮಾತು ಹೇಳಿದರೆ ಹೊರಗೆ ಬಂದು ನನ್ನೊಬ್ಬನಿಗೆ ನೋಟಿಸ್ ನೀಡಿದ್ದೇವೆ ಎನ್ನುತ್ತಾರೆ. ಬಿಜೆಪಿಯಲ್ಲಿ ಶಿಸ್ತು ಸಮಿತಿ ಇದೆ ಎನ್ನುವುದೇ ಗೊತ್ತಿರಲಿಲ್ಲ. ನನಗೆ ಮಾತ್ರ ನೋಟಿಸ್ ನೀಡಿ ಬೇರೆಯವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ ಎಂದು ಪ್ರಶ್ನಿಸಿದ ಅವರು, ನನ್ನ ಬಾಯಿಯನ್ನು ಯಾರಿಂದಲೂ ಮುಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತೇನೆ ಎನ್ನುವುದು ಶುದ್ಧ ಸುಳ್ಳು. ಕಾಂಗ್ರೆಸ್ ಮುಖಂಡರ ಜೊತೆ ರಾಜಕೀಯ ಹೊರತಾದ ಬಾಂಧವ್ಯ ಹಾಗೂ ಅನೋನ್ಯತೆ ಇದೆ. ಮೈಸೂರಿಗೆ ಹೆಲಿಕಾಪ್ಟರ್ನಲ್ಲಿ ಒಮ್ಮೆ ಶಾಮನೂರು ಶಿವಶಂಕರಪ್ಪರ ಜೊತೆ ಹೋಗಿದ್ದೇನೆ. ಶಾಮನೂರು ಪ್ರೀತಿಯಿಂದ ಬರುವಂತೆ ಆಹ್ವಾನ ನೀಡಿದ್ದರು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಫೋನ್ ಮಾಡಿ ಸಮಯ ತೆಗೆದುಕೊಂಡಿದ್ದೆ. ನಾನು ಹೋಗಿ ಮಾತಾಡಿದ್ದೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದ ಅವರು ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ನಿಭಾಯಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು.

ಈ ಹಿಂದೆ ಕೂಡ ಸ್ವಪಕ್ಷೀಯ ವಿರುದ್ಧ ಗುಡುಗಿದ್ದ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ, ಕರ್ನಾಟಕದಲ್ಲಿ ಬಿಜೆಪಿಗೆ ಸೋಲಾಗಿಲ್ಲ. ಕೆಲವು ವ್ಯಕ್ತಿಗಳ ನಿರ್ಧಾರದಿಂದ ಹೀನಾಯವಾಗಿ ಸೋಲು ಕಂಡೆವು. ಪಕ್ಷದೊಳಗಿನ ಒಳ ಹೊಡೆತದಿಂದ ಕಾಂಗ್ರೆಸ್ಗೆ ಲಾಭ ಆಯಿತು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಾರದಿತ್ತು. ನಾವು ಹಲವು ಬಾರಿ ಹೇಳಿದೆವು. ಆದರೂ ನಮ್ಮ ಮಾತು ಗಣನೆಗೆ ತೆಗೆದುಕೊಳ್ಳಲಿಲ್ಲ. ಜಗದೀಶ್ ಶೆಟ್ಟರ್ಗೆ ಟಿಕೆಟ್ ಯಾಕೆ ಕೊಡಲಿಲ್ಲ. ಕೆ.ಎಸ್. ಈಶ್ವರಪ್ಪರಿಗೆ ಯಾಕೆ ಟಿಕೆಟ್ ಕೊಡಲಿಲ್ಲ. ಅವರಿಬ್ಬರೂ ಸಮರ್ಥರಿದ್ದರೂ ಕಡೆಗಣಿಸಿದರು ಎಂದು ಆಕ್ರೋಶ ಹೊರ ಹಾಕಿದ್ದರು.












Click it and Unblock the Notifications