ದಾವಣಗೆರೆಯ ಗಾಜಿನ ಮನೆಯಲ್ಲಿ ಪುಷ್ಪೋತ್ಸವದ ಸೊಬಗು; ವಿದ್ಯುತ್ ದೀಪಾಲಂಕಾರದ ಬೆರಗು
ದಾವಣಗೆರೆ, ನವೆಂಬರ್, 11: ಕಳೆದ ಎರಡು ವರ್ಷಗಳ ಕಾಲ ಮಹಾಮಾರಿ ಕೊರೊನಾದಿಂದ ನಗರದಲ್ಲಿ ಫಲಪುಷ್ಪ ಪ್ರದರ್ಶನ ಕಳೆಗುಂದಿತ್ತು. ಆದರೆ ಈ ಬಾರಿ ಏಷ್ಯಾದ ಅತಿದೊಡ್ಡ ಗಾಜಿನ ಮನೆಯಲ್ಲಿ ಫಲಪುಷ್ಟ ಪ್ರದರ್ಶನ ಅದ್ಧೂರಿಯಾಗಿ ನಡೆಯುತ್ತಿದೆ. ನಾಲ್ಕು ದಿನಗಳ ಕಾಲ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಂಸದ ಡಾ.ಜಿ.ಎಂ. ಸಿದ್ದೇಶ್ವರ್ ಗುರುವಾರ (ನವೆಂಬರ್ 10)ದಂದು ಅಧಿಕೃತವಾಗಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ್ದು, ಜನರು ಈ ಸೊಬಗನ್ನು ವೀಕ್ಷಿಸಲು ತಂಡೋಪತಂಡವಾಗಿ ಆಗಮಿಸುತ್ತಲೇ ಇದ್ದಾರೆ. ಈ ಬಾರಿ ಗ್ಲಾಸ್ ಹೌಸ್ನ ಮತ್ತೊಂದು ಆಕರ್ಷಣೆ ಎಂದರೆ ಕಾರಂಜಿ. ಜೊತೆಗೆ ಗಾಜಿನ ಮನೆಯು ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಹೊಸ ಲೋಕವೇ ಸೃಷ್ಟಿ ಆದಂತಿದೆ.
ಗಾಜಿನ ಮನೆಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನವು ಪ್ರತಿವರ್ಷವೂ ಜನರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತಿತ್ತು. ಕೊರೊನಾ ಮೊದಲನೇ ಹಾಗೂ ಎರಡನೇ ಅಲೆ ವೇಳೆ ಅಷ್ಟೇನೂ ಫಲಪುಷ್ಪ ಪ್ರದರ್ಶನ ಕಳೆಗಟ್ಟಿರಲಿಲ್ಲ. ಈ ವರ್ಷ ವೈಭವಯುತವಾಗಿ ಪುಷ್ಪ ಅಲಂಕಾರ ಮಾಡಿದ್ದು, ಪುನೀತ್ ರಾಜಕುಮಾರ್, ರಾಜಕುಮಾರ್, ಹರಿಹರದ ಹರಿಹರೇಶ್ವರ ದೇವಸ್ಥಾನದ ಮಾದರಿ ಸೇರಿದಂತೆ ಎಲ್ಲಾ ಕಲಾಕೃತಿಗಳು ಗಮನ ಸೆಳೆಯುತ್ತಿವೆ.

ಹೂವಿನಲ್ಲಿ ತಯಾರಾದ ಕಲಾಕೃತಿಗಳು
ಗಾಜಿನ ಮನೆಯು ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಹೊಸಲೋಕವೇ ಸೃಷ್ಟಿ ಆದಂತಿದೆ. ಬೆಳಕಿನ ನಡುವೆ ಪ್ರಜ್ವಲಿಸುವ ರೀತಿಯಲ್ಲಿ ಕಾಣುವ ಕಲಾಕೃತಿಗಳನ್ನು ನೋಡುವುದೇ ಒಂದು ರೀತಿಯ ಹಬ್ಬ ಎಂದೆನಿಸುತ್ತಿದೆ.
ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಪುಷ್ಕರಣಿ, ವಸಂತ ಮಂಟಪ, ಹರಿಹರದ ಹರಿಹರೇಶ್ವರ ಮೂರ್ತಿ, ಸೆಲ್ಫಿ ಪ್ರಿಯರಿಗಾಗಿ ರೂಪಿಸಿರುವ ಐ ಲವ್ ದಾವಣಗೆರೆ ಹೂವಿನ ಕಲಾಕೃತಿ, ಪುನೀತ್ ರಾಜಕುಮಾರ್, ವರನಟ ಡಾ.ರಾಜ್ಕುಮಾರ್ ಅವರ ಯೋಗ ಭಂಗಿ, ಬೇಡರ ಕಣ್ಣಪ್ಪ, ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಬೊಂಬೆ ರಾತ್ರಿಯ ವೇಳೆಯನ್ನು ಬೆಳಕಿನಲ್ಲಿ ನೋಡುವುದೇ ಒಂದು ರೀತಿಯ ರೋಮಾಂಚನವಾಗಿದೆ.

ಕಂಗೊಳಿಸುತ್ತಿರುವ ಅಲಂಕಾರಿಕಾ ಗಿಡಗಳು
ಇನ್ನು ರೈತರು ಬೆಳೆದ ವಿವಿಧ ಹಣ್ಣುಗಳು, ಗುಲಾಬಿ ಸೇರಿದಂತೆ ಇತರೆ ಹೂವುಗಳು ಜನರನ್ನು ಆಕರ್ಷಿಸುತ್ತಿವೆ. ಅಲಂಕಾರಿಕಾ ಗಿಡಗಳು ಬೆಳಕಿನಲ್ಲಿ ಕಂಗೊಳಿಸುತ್ತಿವೆ. ವಿವಿಧ ನಮೂನೆಯ ಮೀನುಗಳ ಅಕ್ವೇರಿಯಂ ಮನ ಸೆಳೆಯುತ್ತಿದೆ. ಪ್ರತಿವರ್ಷವೂ ಗಾಜಿನ ಮನೆಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ.
ಯುವಕರು, ಯುವತಿಯರು, ವೃದ್ಧರು, ಪುರುಷರು, ಮಹಿಳೆಯರು, ಮಕ್ಕಳು ತಂಡೋಪತಂಡವಾಗಿ ಬರುತ್ತಿದ್ದಾರೆ. ಇನ್ನು ಇಲ್ಲಿನ ಸೊಬಗಿಗೆ ಪ್ರವಾಸಿಗರು ಫಿದಾ ಆಗಿದ್ದು, ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತಾ ಸೆಲ್ಪೀ ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಈ ಬಾರಿ ವಿಶೇಷ ದೀಪಾಲಂಕಾರ ಮಾಡಿರುವುದರಿಂದ ಜನರು ಹೆಚ್ಚಾಗಿ ಆಗಮಿಸತೊಡಗಿದ್ದಾರೆ.

ಮನೆಯ ಸುತ್ತಲೂ ವಿದ್ಯುತ್ ದೀಪಾಲಂಕಾರ
ನಗರದ 3 ಖಾಸಗಿ ಅಲಂಕಾರಿಕ ಗಿಡಗಳ ನರ್ಸರಿಗಳು ಸಹ ತಮ್ಮಲಿನ ವೈವಿಧ್ಯಮಯ ಅಲಂಕಾರಿಕ ಗಿಡಗಳು ಮತ್ತು ಹೂವಿನ ಗಿಡಗಳ ಹಲವಾರು ವಿನ್ಯಾಸಗಳಲ್ಲಿ ಪ್ರದರ್ಶಿಸಲಿವೆ. ನಾಗರೀಕರಿಗೆ ಇಷ್ಟವಾದ ಗಿಡಗಳನ್ನು ಸ್ಥಳದಲ್ಲಿಯೇ ಖರೀದಿಸಲು ಅವಕಾಶ ಮಾಡಲಾಗಿದೆ. ನಗರದ ಮಹಿಳೆಯರು ಬೆಳೆದ ತಾರಸಿ ತೋಟದ ವಿವಿಧ ಮಾದರಿಗಳು ಪ್ರದರ್ಶನದಲ್ಲಿ ವೀಕ್ಷಕರ ಗಮನ ಸೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಾಗೆಯೇ ಮರಗಳು ಮತ್ತು ಗಾಜಿನ ಮನೆಯ ಒಳಗಿನ ಭಾಗಗಳಿಗೆ ವಿವಿಧ ಬಣ್ಣಗಳ ವಿದ್ಯುತ್ ದೀಪಾಲಂಕಾರ ಮಾಡಿರುವುದು ಕಾರ್ಯಕ್ರಮಕ್ಕೆ ಮತ್ತಷ್ಟು ಸೊಬಗು ಬಂತಂತಾಗಿದೆ.

ಕಾರಂಜಿ ವಿಕ್ಷಣೆಗೆ ನಿಗದಿಯಾದ ಶುಲ್ಕದ ವಿವರ
ಮಕ್ಕಳಿಗೆ ವಿವಿಧ ಆಟಗಳ ಜೊತೆಗೆ ವಿಶೇಷ ತಿಂಡಿ ತಿನಿಸುಗಳ ಮಳಿಗೆಗಳನ್ನೂ ಸಹ ನಿರ್ಮಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ತೋಟಗಾರಿಕೆ ಬೆಳೆಗಾರರು ಬೆಳೆದ ವಿವಿಧ ಹಣ್ಣು, ತರಕಾರಿ, ಸಾಂಬಾರು ಮತ್ತು ತೋಟದ ಬೆಳೆಗಳ ಉತ್ಪನ್ನಗಳನ್ನು ಪ್ರದರ್ಶಿಸಲಾಗುವುದು.
ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಸಾರ್ವಜನಿಕರಿಗೆ ನವೆಂಬರ್ 13ರವರೆಗೆ ಪ್ರತಿದಿನ ಸಂಜೆ ಸಂಗೀತ ಕಾರಂಜಿಯ ಎರಡು ಪ್ರದರ್ಶನಗಳನ್ನು ಆಯೋಜಿಸಲಾಗುವುದು. ಕಾರಂಜಿಯ ಪ್ರದರ್ಶನಕ್ಕೆ ಸಾರ್ವಜನಿಕ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದ್ದು, ವಯಸ್ಕರಿಗೆ 30 ರೂಪಾಯಿ ಮತ್ತು ಮಕ್ಕಳಿಗೆ 10 ರೂಪಾಯಿ ನಿಗದಿಪಡಿಸಲಾಗಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಲಾಭದ ನಿರೀಕ್ಷೆಯಲ್ಲಿ ತೋಟಗಾರಿಕೆ ಇಲಾಖೆ
ಬೇರೆ ಕಡೆಗಳಿಗೆ ಹೋಗುವುದಕ್ಕಿಂತ ಎಲ್ಲರೂ ಗಾಜಿನ ಮನೆಗೆ ಹೋಗುವ ಯೋಜನೆ ರೂಪಿಸಿಕೊಂಡಿದ್ದಾರೆ. ಶನಿವಾರ, ಭಾನುವಾರ ರಜೆ ಇರುವ ಕಾರಣ ತಮ್ಮ ಮಕ್ಕಳನ್ನು ಪುಷ್ಪಪ್ರದರ್ಶನಕ್ಕೆ ಕರೆದುಕೊಂಡು ಹೋಗಲು ಪೋಷಕರು ಈಗಲೇ ನಿರ್ಧರಿಸಿದ್ದಾರೆ. ವೀಕೆಂಡ್ ದಿನಗಳಲ್ಲಿ ಪ್ರವಾಸಿಗರು ದುಪ್ಪಟ್ಟು ಆಗುವ ಸಾಧ್ಯತೆ ಹೆಚ್ಚಿದೆ. ದೀಪಾಲಂಕಾರ, ಹಣ್ಣು, ತರಕಾರಿ, ಭಿನ್ನ ವಿಭಿನ್ನವಾದ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಲು ಜನರು ಆಗಮಿಸುತ್ತಲೇ ಇದ್ದಾರೆ.
ಹೀಗೆ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಕಾರಣ ಈ ಬಾರಿ ಲಾಭ ಹೆಚ್ಚಾಗಬಹುದು ಎಂಬ ನಿರೀಕ್ಷೆ ತೋಟಗಾರಿಕಾ ಇಲಾಖೆಯದ್ದಾಗಿದೆ. ಯಾವಾಗಲೂ ಫಲಪುಷ್ಪ ಪ್ರದರ್ಶನ ನಡೆದಾಗ ಜನರು ಉತ್ತಮ ಪ್ರತಿಕ್ರಿಯೆಯನ್ನೇ ತೋರಿದ್ದರು. ಇದರಿಂದ ಲಾಭವೂ ಆಗಿತ್ತು. ಮಾಡಿದ ಖರ್ಚಿಗೆ ಮೋಸ ಆಗಿರಲಿಲ್ಲ. ಈ ಬಾರಿಯೂ ಹೆಚ್ಚಿನ ಹಣ ಸಂಗ್ರಹ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವುದು ಅಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದೆ.












Click it and Unblock the Notifications