ಚಿತ್ರಗಳು; ರೈತರಿಗೆ ಬೆಂಬಲ, ದಾವಣಗೆರೆಯಲ್ಲಿ ಟ್ರಾಕ್ಟರ್ ಪರೇಡ್
ದಾವಣಗೆರೆ, ಜನವರಿ 26 : ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ನವದೆಹಲಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ರೈತರ ಹೋರಾಟವನ್ನು ಬೆಂಬಲಿಸಿ ಗಣರಾಜ್ಯೋತ್ಸದ ದಿನ ದಾವಣಗೆರೆಯಲ್ಲಿ ಟ್ರಾಕ್ಟರ್ ಪರೇಡ್ ನಡೆಯಿತು.
ಮಂಗಳವಾರ ದಾವಣಗೆರೆ ನಗರದ ಅಂಬೇಡ್ಕರ್ ವೃತ್ತದಿಂದ ಬೃಹತ್ ಟ್ರಾಕ್ಟರ್ ಪೆರೇಡ್ ಆರಂಭಿಸಿದ ಅನ್ನದಾತರು ಜಯದೇವ ವೃತ್ತಕ್ಕೆ ಆಗಮಿಸಿದರು. ಮಾರ್ಗದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ನೀತಿಗಳನ್ನು ಹಿಂಪಡೆಯದಿದ್ದರೆ ನಿರಂತರವಾಗಿ ಹೋರಾಟ ಮಾಡುತ್ತೇವೆ. ಸ್ವಾತಂತ್ರ್ಯ ಚಳುವಳಿ ಆದಮೇಲೆ ದೇಶದಲ್ಲಿ ಹೋರಾಟ ನಡೆಯುತ್ತಿದೆ ಎಂದರೆ ಅದು ಅನ್ನದಾತರ ಹೋರಾಟ ಎಂದು ರೈತ ಮುಖಂಡರು ಹೇಳಿದರು.
72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ
ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳ ಒತ್ತಾಯಕ್ಕೆ ಮಣಿದು, ಕಂಪನಿಗಳಿಗೆ ಅನುಕೂಲವಾಗುವಂತ ಭೂ ಕಾಯ್ದೆಗಳನ್ನು ಜಾರಿಗೆ ತಂದಿದೆ. ಇವು ಕಂಪನಿಗಳಿಗೆ ಅನುಕೂಲವಾಗುತ್ತದೆ ಹೊರತು ರೈತರಿಗೆ ಅನುಕೂಲವಾಗುವಂತ ಕಾಯ್ದೆಗಳಲ್ಲ ಎಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಮೊಂಡುತನ
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದರೂ ಕಾಯ್ದೆಗಳನ್ನ ಹಿಂಪಡೆಯದೇ ಈ ಸರ್ಕಾರ ಮೊಂಡುತನ ಪ್ರದರ್ಶನ ಮಾಡುತ್ತಿದೆ. ರೈತರ ಮರಣ ಶಾಸನ ಬರೆಯಲು ಮುಂದಾಗಿರುವ ಈ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದರು.

ನಮ್ಮ ಹೋರಾಟ ನಿಲ್ಲುವುದಿಲ್ಲ
ಕಳೆದ 2 ತಿಂಗಳಿಂದಲೂ ಚಳಿಯನ್ನೂ ಲೆಕ್ಕಿಸದೇ ಅನ್ನದಾತರು ಹೋರಾಟ ಮಾಡುತ್ತಿದ್ದಾರೆ. ಅನೇಕ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ರೈತ ವಿರೋಧಿ ನೀತಿಗಳನ್ನ ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ.
ಕೃಷಿ ನೀತಿಗಳನ್ನು ಹಿಂಪಡೆಯುವವರೆಗೂ ನಾವು ಹೋರಾಟ ಮುಂದುವರೆಸುತ್ತೇವೆ ಎಂದು ರೈತರು ಹೇಳಿದರು.

ನರೇಂದ್ರ ಮೋದಿ ವಿರುದ್ಧ ಆಕ್ರೋಶ
ದಿ. ಇಂದಿರಾ ಗಾಂಧಿ ಅವರು ಊಳುವವನೆ ಒಡೆಯ ಎಂದು ಬಡವರ ಪರವಾಗಿದ್ದರು ಆದರೆ, ಪ್ರಧಾನಿ ನರೇಂದ್ರ ಮೋದಿ ಉಳ್ಳವನೇ ಒಡೆಯ ಎಂದು ಶ್ರೀಮಂತರಿಗೆ ಅನುಕೂಲವಾಗುವಂತ ಭೂ ಸುಧಾರಣೆ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದಾರೆ ಎಂದುದ ಆರೋಪಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ರೈತರು ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತ ಸೇರಿದಂತೆ ನಗರದ ವಿವಿಧ ಕಡೆ ಪರೇಡ್ ಸಂಚಾರ ನಡೆಸಿತು. ಕೃಷಿ ಕಾಯ್ದೆಗಳ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಕೂಡ ಬೆಂಬಲ ನೀಡಿತ್ತು.












Click it and Unblock the Notifications