ಮದುವೆಯಾಗಲ್ಲ ಎಂದು ಯುವತಿ ಶಪಥ: ಎಚ್. ರಾಂಪುರಕ್ಕೆ ದಾವಣಗೆರೆ ಜಿಲ್ಲಾಡಳಿತ ದೌಡು!
ದಾವಣಗೆರೆ, ಸೆಪ್ಟೆಂಬರ್ 16: ರಸ್ತೆ ನಿರ್ಮಾಣ ಮಾಡಿ ತನ್ನ ಗ್ರಾಮಕ್ಕೆ ಬಸ್ ಬಾರದ ಹೊರತು ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದ ಯುವತಿಯ ಗ್ರಾಮಕ್ಕೆ ದಾವಣಗೆರೆ ಜಿಲ್ಲಾಡಳಿತ ಭೇಟಿ ನೀಡಿದೆ. ಈ ಮೂಲಕ ರಾಜ್ಯವ್ಯಾಪಿ ಗಮನ ಸೆಳೆದಿದ್ದ ಯುವತಿಯ ಹೋರಾಟಕ್ಕೆ ಅಲ್ಪಮಟ್ಟಿಗೆ ಜಯ ಸಿಕ್ಕಂತಾಗಿದೆ.
Recommended Video

ದಾವಣಗೆರೆ ತಾಲೂಕಿನ ಮಾಯಕೊಂಡದ ಎಚ್. ರಾಂಪುರದ ಯುವತಿ ಬಿಂದು, ಸರಿಯಾದ ರಸ್ತೆ ನಿರ್ಮಾಣ ಮಾಡಿ, ಸರ್ಕಾರಿ ಬಸ್ ಬರುವತನಕ ಮದುವೆಯಾಗಲ್ಲ ಎಂದು ಪ್ರತಿಜ್ಞೆ ಮಾಡಿದ್ದಳು. ಈ ಸುದ್ದಿ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿತ್ತು. ಎಲ್ಲೆಡೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್. ಆರ್. ಬೀಳಗಿ ಎಚ್. ರಾಂಪುರ ಗ್ರಾಮಕ್ಕೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಗ್ರಾಮಸ್ಥರ ಸಂಕಷ್ಟ ಆಲಿಸಿದರು.
ಈ ವೇಳೆ ರಸ್ತೆ ನಿರ್ಮಾಣ ಮಾಡಿಕೊಡುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು. ಇದೇ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಕಾಟ, ನೆಟ್ವರ್ಕ್ ತೊಂದರೆ, ಗುಡ್ಡಗಾಡು ಪ್ರದೇಶದ ಸಂಕಷ್ಟಗಳು, ರಸ್ತೆ ಹಾಳಾಗಿರುವುದು, ಬಸ್ ಬಾರದಿರುವುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಬಿಂದು ಎಂಬ ಯುವತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಪತ್ರ ಬರೆದಿದ್ದರು. ಯುವತಿ ಪತ್ರಕ್ಕೆ ಸ್ಪಂದಿಸಿದ್ದ ಸಿಎಂ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಪತ್ರ ಬರೆದಿದ್ದು, ಪತ್ರಕ್ಕೆ ಸಿಎಂ ಕಾರ್ಯದರ್ಶಿ ಪ್ರತಿಕ್ರಿಯೆ ನೀಡಿದ್ದರು.
ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಸಮೀಪದ ಎಚ್. ರಾಂಪುರದಲ್ಲಿನ ರಸ್ತೆ ಅವ್ಯವಸ್ಥೆ ಬಗ್ಗೆ ಪತ್ರದಲ್ಲಿ ಅಳಲು ತೋಡಿಕೊಂಡಿದ್ದ ಬಿಂದುಗೆ ನಿಮ್ಮ ಪತ್ರ ಬಂದಿದ್ದು, ಆದಷ್ಟು ಬೇಗ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಉತ್ತರ ಬಂದಿತ್ತು. ಪಿಎಂ ಸೇರಿದಂತೆ ಹಲವರಿಗೆ ಪತ್ರ ಬರೆದಿದ್ದ ಬಿಂದುಗೆ ಯಾರೂ ಸ್ಪಂದನೆ ಮಾಡಿರಲಿಲ್ಲ. ಆದರೆ ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಮೇಲೆ ಸ್ಪಂದನೆ ಸಿಕ್ಕಿದ್ದು ಯುವತಿಗೆ ಖುಷಿಯಾಗಿತ್ತು.
ಎಚ್. ರಾಂಪುರ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಇಲ್ಲದೇ ಸಂಕಷ್ಟ ಅನುಭವಿಸಿದ್ದ ಜನರಿಗೆ ಈಗ ಸ್ವಲ್ಪ ನೆಮ್ಮದಿ ತಂದಿದ್ದು, ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.

ಯುವತಿಯ ಶಪಥ
ಎಚ್. ರಾಂಪುರ ಗ್ರಾಮದ ಬಿಂದು ಎಂಬ ಯುವತಿಯು ತಮ್ಮೂರಿಗೆ ಸರಿಯಾದ ರಸ್ತೆಯಾಗಿ, ಬಸ್ ಬರುವವರೆಗೂ ಮದುವೆ ಆಗಲ್ಲ ಎಂಬುದಾಗಿ ಶಪಥ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರಿಗೂ ಪತ್ರ ಬರೆದಿದ್ದಾಳೆ. ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ.
"ಇದುವರೆಗೂ ಯಾರೊಬ್ಬರೂ ಕ್ಯಾರೇ ಎಂದಿರಲಿಲ್ಲ. ಈಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿರುವುದು ಖುಷಿ ತಂದಿದೆ. ನಾವು ಗುಡ್ಡಗಾಡು ಪ್ರದೇಶದಲ್ಲಿ ನಡೆದುಕೊಂಡು ಹೋಗಬೇಕು. ಏನಾದರೂ ಆದರೆ ಯಾರೂ ಹೊಣೆ. ನಾವು ಕೇಳುತ್ತಿರುವುದು ಮೂಲಭೂತ ಸೌಕರ್ಯ. ಆದಷ್ಟು ಬೇಗ ರಸ್ತೆ ನಿರ್ಮಾಣ ಆಗಬೇಕು. ಗ್ರಾಮಕ್ಕೆ ಬಸ್ ಬರಬೇಕು. ಆ ನಂತರವೇ ನಾನು ಮದುವೆಯಾಗುತ್ತೇನೆ,'' ಎಂದು ಬಿಂದು ಹೇಳಿದ್ದರು.

ಇನ್ನು ಆಸ್ಪತ್ರೆಗೆ ಹೋಗುವವರ ಪಾಡು ದೇವರಿಗೇ ಪ್ರೀತಿಯಾಗಿತ್ತು. ಹಾಳಾದ ರಸ್ತೆಯಲ್ಲಿ ಕಷ್ಟಪಟ್ಟು ಹೋಗುವಂಥ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಹಾಳಾಗಿರುವುದರಿಂದ ಸಕಾಲಕ್ಕೆ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲಾಗುತ್ತಿಲ್ಲ. ಆ್ಯಂಬುಲೆನ್ಸ್ ಬರಲು ಕಷ್ಟವಾಗುತ್ತದೆ. ಮಳೆ ಬಂದರೆ ಇಲ್ಲಿಯ ಜನರ ಕಷ್ಟ ಹೇಳತೀರದು. ನಮ್ಮ ಗೋಳು ಯಾರಿಗೆ ಹೇಳುವುದು. ಇನ್ನು ಗ್ರಾಮದ ಜನರು ತಮ್ಮೂರಿಗೆ ರಸ್ತೆ ನಿರ್ಮಿಸಿಕೊಡುವಂತೆ ಶಾಸಕ ಪ್ರೊ. ಲಿಂಗಣ್ಣ ಬಳಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಎಚ್. ರಾಂಪುರ ಗ್ರಾಮಸ್ಥರು ದೂರಿದ್ದರು.












Click it and Unblock the Notifications