ದಾವಣಗೆರೆ; ಸಾಯುತ್ತೇನೆ ಎಂದ ಮಹಿಳೆ ಮೇಲೆ ಎಫ್ಐಆರ್ ದಾಖಲಿಸಿ ಎಂದ ಡಿಸಿ
ದಾವಣಗೆರೆ, ಫೆಬ್ರವರಿ 03: ದಾವಣಗೆರೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ 'ಕೆಲಸ ಕೊಡಿ, ಇಲ್ಲದಿದ್ದರೆ ಸಾಯುತ್ತೇನೆ' ಎಂದಾಗ ಮಹಿಳೆ ಮೇಲೆ ಸಿಟ್ಟಾದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆ ಮಹಿಳೆ ಮೇಲೆ ಎಫ್ ಐಆರ್ ದಾಖಲಿಸಿ ಎಂದು ಆದೇಶಿಸಿದ ಘಟನೆ ನಡೆಯಿತು.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಸ್ಪಂದನ ಸಭೆ ನಡೆಯುತ್ತಿತ್ತು. ಈ ವೇಳೆ ಮಕ್ಕಳೊಂದಿಗೆ ಬಂದ ಮಹಿಳೆಯೊಬ್ಬರು, "ಸರ್ ನನಗೆ ಕೆಲಸ ಕೊಡ್ತಾ ಇಲ್ಲ, ಅವರಿಗೆ ಬೇಕಾದವರಿಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕೂಲಿ ಕೆಲಸ ಕೊಡುತ್ತಾರೆ. ನನಗೆ ಕೆಲಸ ಕೊಡಿಸದಿದ್ದರೆ ಸಾಯುತ್ತೇನೆ" ಎಂದು ಹೇಳಿದರು. ಇದಕ್ಕೆ ಕೆಂಡಾಮಂಡಲವಾದ ಡಿಸಿ, "ಜಿಲ್ಲಾಧಿಕಾರಿ ಕಚೇರಿ ಕೆಲಸ ಕೊಡಲ್ಲ, ನೀನು ಸಾಯುತ್ತೇನೆ ಎಂದು ಹೇಳುವುದು ಸರಿಯಲ್ಲ" ಎಂದು ಗರಂ ಆದರು. "ಸಾಯುತ್ತೇನೆ ಎಂದು ಹೇಳುವುದು ಅಪರಾಧ, ಎಸ್ಪಿಯವರಿಗೆ ಹೇಳಿ ಇವರ ಮೇಲೆ ಕೇಸ್ ದಾಖಲಿಸಿ" ಎಂದು ಸಿಟ್ಟಾದರು.
ಅಲ್ಲದೆ ಮಹಿಳೆ ಹಾಗೂ ಇಬ್ಬರು ಮಕ್ಕಳು ಡಿಸಿ ಗರಂ ಆಗಿದ್ದಕ್ಕೆ ಕಣ್ಣೇರಿಟ್ಟು ತಮಗೆ ಮುಂದೆ ದಾರಿ ಯಾವುದೂ ಇಲ್ಲ, ಕೆಲಸ ಮಾಡಿ ಮಕ್ಕಳನ್ನು ಸಾಕಬೇಕು. ಈಗ ಯಾವುದೇ ಕೆಲಸವಿಲ್ಲ ಎಂದು ತಮ್ಮ ನೋವು ಹೇಳಿಕೊಂಡರು. ಜಿಲ್ಲಾಧಿಕಾರಿ ಈ ರೀತಿ ನಡೆದುಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವೂ ವ್ಯಕ್ತಗೊಂಡಿದೆ.

ವೃದ್ಧನಿಗೆ ವ್ಯಂಗ್ಯ: ವೃದ್ಧನೊಬ್ಬ, ತಮ್ಮ ಜಮೀನು ಒತ್ತುವರಿಯಾಗಿದೆ, ನ್ಯಾಯ ಕೊಡಿಸಿ ಎಂದು ಕೇಳಿಕೊಂಡು ಬಂದಿದ್ದೇ ತಡ, "ಹೋಗಯ್ಯ ನೀನೇ ಟೋಪಿ ಹಾಕೋನ್ ತರ ಇದೀಯಾ, ನೀನು ಎಷ್ಟು ಜನಕ್ಕೆ ಟೋಪಿ ಹಾಕಿದಿಯಾ ಎಂದು ವ್ಯಂಗ್ಯವಾಡಿದರು.
ಜನಸ್ಪಂದನ ಸಭೆಯಲ್ಲಿ ಪದೇ ಪದೇ ಕೆಲಸ ಕೊಡಿ, ಇಲ್ಲವೇ ಸಾಯುತ್ತೇನೆ ಎಂದು ಹೇಳಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ, ಜನಸ್ಪಂದನ ಸಭೆ ಕೆಲಸ ಕೊಡುವ ಇಲಾಖೆಯಲ್ಲ ಎಂದು ಹೆಸರು ಹಾಕಿ ಎಂದು ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.












Click it and Unblock the Notifications