ಕರಾಳ ಅಮವಾಸ್ಯೆ: ದಾವಣಗೆರೆ ಸಕ್ಕರೆ ಕಾರ್ಖಾನೆಯಲ್ಲಿ ಪಿಲ್ಲರ್ ಕುಸಿದು ಮೂವರ ಸಾವು, ಐವರಿಗೆ ಗಾಯ
ದಾವಣಗೆರೆ, ನವೆಂಬರ್ 4: ದಾವಣಗೆರೆಯಲ್ಲಿ ದೀಪಾವಳಿಯ ಅಮವಾಸ್ಯೆ ಕರಾಳ ಅಮವಾಸ್ಯೆ ಎನ್ನುವಂತ ಘಟನೆಯೊಂದು ನಡೆದಿದೆ. ತಾಲೂಕಿನ ಕುಕ್ಕುವಾಡ ಬಳಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ದುರ್ಘಟನೆಯಲ್ಲಿ ಮೂವರು ಕಾರ್ಮಿಕರು ಪ್ರಾಣ ಬಿಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ದೀಪಾವಳಿ ಹಬ್ಬದ ಖುಷಿಯಲ್ಲಿದ್ದ ಕಾರ್ಮಿಕರ ಮನೆಗಳಲ್ಲಿ ಇದೀಗ ಸೂತಕ ಆವರಿಸಿದೆ.
ದಾವಣಗೆರೆ ತಾಲೂಕಿನ ಕುಕ್ಕುವಾಡ ಬಳಿಯ ಸಕ್ಕರೆ ಕಾರ್ಖಾನೆಯ ಬಳಿ ಇಂಥದೊಂದು ಘಟನೆ ನಡೆದಿದೆ. ಎಥೆನಾಲ್ ಘಟಕ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ವೇಳೆ ಹತ್ತಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮಧ್ಯಾಹ್ನ ಎಥೆನಾಲ್ ಘಟಕದ ಕಟ್ಟಡದ ಸೆಂಟ್ರಿಂಗ್ ಕಾರ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಒಂದು ಪಿಲ್ಲರ್ ಕುಸಿದು ಬಿದ್ದಿದೆ.
ದಾವಣಗೆರೆ: ಕೈ ಸುಡುತ್ತಿದೆ ಪಟಾಕಿ, ಜನರ ಜೇಬಿಗೆ ಬೀಳುತ್ತಿದೆ ಕತ್ತರಿ; ಮಾರಾಟಗಾರರಿಗೆ ಇಲ್ಲ ಹಬ್ಬದ ಖುಷಿ!
ಈ ವೇಳೆ ಕೆಲಸ ಮಾಡುತ್ತಿದ್ದ ಮೂವರು ಮಣ್ಣಿನೊಳಗೆ ಸಿಲುಕಿದ್ದು, ಇಬ್ಬರು ಮಣ್ಣಿನಡಿ ಸಿಲುಕಿ ಸ್ಥಳದಲ್ಲೇ ಪ್ರಾಣ ಬಿಟ್ಟರೆ ಮತ್ತೊಬ್ಬ ಕಾರ್ಮಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಉಳಿದ ಐವರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಏನಿದು ಪಿಲ್ಲರ್ ಕುಸಿತದ ಘಟನೆ?:
ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್ ಕುಸಿದ ಪರಿಣಾಮ ಮೂವರು ಮೃತಪಟ್ಟ ದಾರುಣ ಘಟನೆ ದಾವಣಗೆರೆ ತಾಲೂಕಿನ ಕುಕ್ಕುವಾಡ ಸಕ್ಕರೆ ಕಾರ್ಖಾನೆಯ ಬಳಿ ನಡೆದಿದೆ. ರಾಯಚೂರು ಮೂಲದ ಬಸಪ್ಪ (32), ಮಾದಪ್ಪ (32) ಹಾಗೂ ಪಶ್ಚಿಮ ಬಂಗಾಳ ಮೂಲದ ಮಜೀದ್ (28) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಉತ್ತರ ಕರ್ನಾಟಕ ಹಾಗೂ ಬೇರೆ ರಾಜ್ಯಗಳ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ಕುಕ್ಕುವಾಡ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ನಿರ್ಮಾಣಕ್ಕಾಗಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿತ್ತು. ಈ ವೇಳೆ ಸೆಂಟ್ರಿಂಗ್ ಕುಸಿದಿದ್ದು, ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು ಮಣ್ಣಿನೊಳಗೆ ಸಿಲುಕಿಕೊಂಡ ಕಾರಣ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಸೆಂಟ್ರಿಂಗ್ ಅಕ್ಕ-ಪಕ್ಕದಲ್ಲಿ ಕೆಲಸ ಮಾಡುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ಹೇಗಿತ್ತು..?
ಕುಕ್ಕುವಾಡದ ಈ ಸಕ್ಕರೆ ಕಾರ್ಖಾನೆಯು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪುತ್ರ ಎಸ್. ಎಸ್. ಗಣೇಶ್ ಅವರಿಗೆ ಸೇರಿದ್ದಾಗಿದೆ. ಗುರುವಾರ ಮಧ್ಯಾಹ್ನ ಕಟ್ಟಡದ ಸೆಂಟ್ರಿಂಗ್ ಕುಸಿತ ಘಟನೆ ನಡೆಯುತ್ತಿದ್ದಂತೆ ಸ್ಥಳೀಯ ಕಾರ್ಮಿಕರು ರಕ್ಷಣೆ ಮಾಡಲು ಪ್ರಯತ್ನಿಸಿದರೂ ಮೂವರು ಮಣ್ಣಿನಡಿ ಸಿಲುಕಿದರು. ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದರು. ತಕ್ಷಣವೇ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿದರು.
ಕ್ರೇನ್ ಹಾಗೂ ಜೆಸಿಬಿ ಸಹಾಯದ ಮೂಲಕ ಮಣ್ಣಿನೊಳಗೆ ಸಿಲುಕಿದ್ದ ಇಬ್ಬರು ಕಾರ್ಮಿಕರ ಮೃತದೇಹವನ್ನು ಹೊರ ತೆಗೆಯಲಾಯಿತು. ಮತ್ತೊಬ್ಬ ಕಾರ್ಮಿಕನನ್ನು ರಕ್ಷಿಸಿದರೂ ಬದುಕಿಸಲು ಸಾಧ್ಯವಾಗಲಿಲ್ಲ.
ಹದಡಿ ಪೊಲೀಸ್ ಠಾಣೆಯಲ್ಲಿ ಈ ಘಟನಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಇದರ ಮಧ್ಯೆ ಘಟನೆ ನಡೆದು ಗಂಟೆಗಳೇ ಕಳೆದರೂ ಎಂಜಿನಿಯರ್ ಸ್ಥಳಕ್ಕೆ ಬಾರದ ಹಿನ್ನೆಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತದನಂತರ ಸಂಜೆ ವೇಳೆಗೆ ಸ್ಥಳಕ್ಕೆ ಎಂಜಿನಿಯರ್ ಆಗಮಿಸಿದ್ದು, ಸದ್ಯ ಸೆಂಟ್ರಿಂಗ್ ಕುಸಿತಕ್ಕೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.