ಮಾಜಿ ಶಾಸಕ ತಿಪ್ಪೇಸ್ವಾಮಿ ಸಮಾಧಿ ಧ್ವಂಸ ವಿರೋಧಿಸಿ ಪ್ರತಿಭಟನೆ
ದಾವಣಗೆರೆ, ನವೆಂಬರ್ 24: ಮಾಜಿ ಶಾಸಕ, ಖ್ಯಾತ ನೇತ್ರ ತಜ್ಞ ಡಾ. ಬಿ. ಎಂ. ತಿಪ್ಪೇಸ್ವಾಮಿ ಮತ್ತವರ ಕುಟುಂಬದ ಮೂವರು ಸಮಾಧಿ ಧ್ವಂಸ ಮಾಡಿರುವುದನ್ನು ವಿರೋಧಿಸಿ ದಲಿತ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಶಿವಕುಮಾರ್ ಬಡಾವಣೆಯ ವಿದ್ಯುತ್ ನಗರ ಸಮೀಪದಲ್ಲಿನ ತಿಪ್ಪೇಸ್ವಾಮಿ ಸಮಾಧಿ ಸ್ಥಳದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿತು. ಸಮಾಧಿ ಧ್ವಂಸ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಯಿತು. ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು, ಮಾದಿಗ ಸಮಾಜದ ಮುಖಂಡರು, ತಿಪ್ಪೇಸ್ವಾಮಿ ಪುತ್ರಿ, ಸಂಬಂಧಿಕರು, ಹಿತೈಷಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು, ಉಪವಿಗಾಧಿಕಾರಿ ಅವರಿಗೆ ಮನವಿ ಅರ್ಪಿಸಲಾಯಿತು.
ಮಾಜಿ ಶಾಸಕ, ನೇತ್ರ ತಜ್ಞ ತಿಪ್ಪೇಸ್ವಾಮಿ ಸಮಾಧಿ ಧ್ವಂಸ: ನ.24ರಂದು ಬೃಹತ್ ಪ್ರತಿಭಟನೆ
ಸರ್ವೆ ನಂಬರ್ 34/2 ಎ1ನಲ್ಲಿ ಇರುವ ಎಂ ರವಿ ಬಿನ್ ಎಂ. ವೀರಭದ್ರಪ್ಪ ಹಾಗೂ ಸರ್ವೇ ನಂಬರ್ 34/2ಎ2 ನಲ್ಲಿನ ರವಿಕುಮಾರ್ ಎಚ್. ಸಿ. ಇವರ ಹೆಸರಿನಲ್ಲಿ ದಾಖಲಾಗಿರುವ ಪಹಣಿ ರದ್ದುಗೊಳಿಸಬೇಕು. ಸಮಾಧಿ ಧ್ವಂಸಗೊಳಿಸಿದವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ವೈಯಕ್ತಿಕ ಉದ್ದೇಶಕ್ಕೆ ಬಳಸದೇ ಈ 20 ಗುಂಟೆ ಜಾಗದಲ್ಲಿ ಡಾ. ತಿಪ್ಪೇಸ್ವಾಮಿಯವರ ಸ್ಮಾರಕ ಸ್ಥಾಪಿಸುವ ಉದ್ದೇಶ ಹೊಂದಲಾಗಿತ್ತು. ಆದರೆ, ಈ ಭೂಮಿಗೆ ಸಂಬಂಧಿಸಿದಂತೆ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದು, 2002ರಲ್ಲಿ ಮಲ್ಲಿಕಾರ್ಜುನ್ರಿಗೆ ಮಂಜೂರಾದ ಭೂಮಿ ನ್ಯಾಯಸಮ್ಮತ ಎಂಬುದಾಗಿ ಹೈಕೋರ್ಟ್ ಆದೇಶ ನೀಡಿದೆ. ಮಲ್ಲಿಕಾರ್ಜುನ್ ಮರಣ ನಂತರ ಅವರ ಪತ್ನಿ ಪುಷ್ಪಲತಾ, ಮಕ್ಕಳಾದ ರಾಹುಲ್ ಹಾಗೂ ನಕುಲ್ ಅವರ ಹೆಸರಿಗೆ ವರ್ಗಾವಣೆಯಾಗಿದೆ. ಕೆಲವರು ನಕಲಿ ಪಾಣಿ ಸೃಷ್ಟಿಸಿದ್ದರೂ, ಖಾತೆ ನಮ್ಮ ಹೆಸರಿನಲ್ಲಿದೆ ಎಂದು ಹೇಳಿದರು.
ಕಳೆದ ಭಾನುವಾರ ಮಧ್ಯಾಹ್ನ 11 ಗಂಟೆ ಸುಮಾರಿಗೆ ಯಾವುದೇ ಮುನ್ಸೂಚನೆ ಇಲ್ಲದೇ, ಜೆಸಿಬಿಯಿಂದ ಧ್ವಂಸ ಮಾಡಿರುವುದು ಕುಟುಂಬ ಸದಸ್ಯರು ಹಾಗೂ ಮಾದಿಗ ಸಮಾಜಕ್ಕೆ ಆಘಾತ ಉಂಟು ಮಾಡಿದೆ. 1985ರಲ್ಲಿ ಭರಮಸಾಗರದ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿ ಶಾಸಕರಾಗಿ ಅತ್ಯುತ್ತಮ ಕೆಲಸ ನಿರ್ವಹಿಸಿದವರು. ಅಂಥವರ ಸಮಾಧಿಗೆ ರಕ್ಷಣೆ ಇಲ್ಲ ಎಂದರೆ ಭೂಗಳ್ಳರು ಎಷ್ಟರ ಮಟ್ಟಿಗೆ ಪ್ರಭಾವಿಗಳಿದ್ದಾರೆ ಎಂಬುದು ಗೊತ್ತಾಗುತ್ತದೆ. ಇಂಥವರನ್ನು ಮಟ್ಟ ಹಾಕಬೇಕು. ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
32 ವರ್ಷಗಳಿಂದ ಅಲ್ಲೇ ಇದ್ದ ಡಾ. ತಿಪ್ಪೇಸ್ವಾಮಿಯವರ ಸಮಾಧಿ ಜಾಗಕ್ಕಾಗಿ ಯಾರೂ ಬಂದಿರಲಿಲ್ಲ. ಆದರೆ ಈಗ ಏಕಾಏಕಿಯಾಗಿ ಧ್ವಂಸ ಮಾಡಿರುವುದು ಅಕ್ಷಮ್ಯ. ಭೂಗಳ್ಳರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಿ. ಎಸ್. ದ್ವಾರಕನಾಥ್, ತಿಪ್ಪೇಸ್ವಾಮಿಯವರ ಪುತ್ರಿ ಜಾಹ್ನವಿ, ಸೊಸೆ ಬಿ. ಎಂ. ಪುಷ್ಪಲತಾ, ಮೊಮ್ಮಗ ರಾಹುಲ್, ಬಿಜೆಪಿ ಮುಖಂಡ ಆಲೂರು ನಿಂಗರಾಜ್, ಹಾಲೇಶ್ ಮತ್ತಿತರರು ಪಾಲ್ಗೊಂಡಿದ್ದರು.