ಮುರುಘಾ ಶ್ರೀಗಳು ಅಮೆರಿಕಾಕ್ಕೆ ಹೋದಾಗಲೇ ಇಲ್ಲಿ ಷಡ್ಯಂತ್ರ: ಬಸವಪ್ರಭು ಸ್ವಾಮೀಜಿ
ದಾವಣಗೆರೆ, ಸೆಪ್ಟೆಂಬರ್, 02: ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಸಂಕಷ್ಟದಲ್ಲಿದ್ದಾರೆ. ಷಡ್ಯಂತ್ರ ಮಾಡಿ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಾವೆಲ್ಲರೂ ಕೇವಲ ಮಾತನಾಡಿದರೆ ಸಾಲದು. ಶ್ರೀಗಳ ಪರ ನಿಲ್ಲೋಣ. ಇದರ ಹಿಂದಿರುವ ಪಟ್ಟಭದ್ರಾ ಹಿತಾಸಕ್ತಿಗಳಿಗೆ ತಕ್ಕ ಪಾಠ ಕಲಿಸೋಣ. ನೈತಿಕ ಬೆಂಬಲ ನೀಡುವ ಜೊತೆಗೆ ಶ್ರೀಗಳಿಗಾಗಿ ಹೋರಾಟ ನಡೆಸೋಣ ಎಂದು ಸರ್ವ ಸಮಾಜದ ಮುರುಘಾ ಮಠದ ಅಭಿಮಾನಿಗಳು ದಾವಣಗೆರೆಯಲ್ಲಿ ಆಕ್ರೋಶ ಹೊರಹಾಕಿದರು.
ದಾವಣಗೆರೆಯ ಜಯದೇವ ವೃತ್ತದಲ್ಲಿ ಸರ್ವ ಸಮಾಜದ ಮುರುಘಾ ಮಠದ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದು, ಮುರುಘಾ ಶರಣರ ಬಂಧನವನ್ನು ವಿರೋಧಿಸಿ ಆಕ್ರೋಶ ಹೊರಹಾಕಿದರು. ಸಭೆಯಲ್ಲಿ ವಿವಿಧ ಸಮಾಜದ ಮುಖಂಡರು, ರಾಜಕೀಯ ನಾಯಕರು, ಸಂಘಟನೆಗಳ ಪ್ರಮುಖರು, ಮಾಜಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ಸಹೋದರಿ ಅನುಸೂಯ, ಮಠದ ಪ್ರಮುಖರು ಪಾಲ್ಗೊಂಡಿದ್ದರು. "ಶ್ರೀಗಳ ಪರ ನಿಂತು ನ್ಯಾಯಕ್ಕಾಗಿ ಹೋರಾಟ ನಡೆಸೋಣ. ಶ್ರೀಗಳು ಬಂಧನ ಮುಕ್ತರಾಗುವವರೆಗೆ ಹೋರಾಟ ನಿಲ್ಲಿಸಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
Breaking:ಮುರುಘಾ ಶರಣರನ್ನು 4 ದಿನ ಪೊಲೀಸ್ ಕಸ್ಟಡಿಗೆ ವಹಿಸಿದ ಕೋರ್ಟ್
ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, "ಮುರುಘಾ ಶರಣರು ಬಂಧನ ಆಗಿರುವುದು ಕರಾಳ, ನೋವಿನ ಸಂಗತಿ ಆಗಿದೆ. ಭಕ್ತ ಸಮೂಹವೇ ದುಃಖದಲ್ಲಿದೆ. ಕೆಲ ದುಷ್ಕರ್ಮಿಗಳು ಮಾಡಿರುವ ದೊಡ್ಡ ಪಿತೂರಿ ಇದು. ಮೊದಲು ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು," ಎಂದು ಕಿಡಿಕಾರಿದರು.
ಶ್ರೀಗಳ ಪರ ನಿಂತ ಬಸವಪ್ರಭು ಸ್ವಾಮೀಜಿ
ಸಾಮಾಜಿಕ ನ್ಯಾಯಕ್ಕೋಸ್ಕರ, ಸರ್ವ ಸಮಾಜ, ಸಮಾನತೆಗಾಗಿ ಶ್ರೀಗಳು ಶ್ರಮಿಸಿದ್ದಾರೆ. ಅವರು ಎಲ್ಲರ ಪಾಲಿಗೆ ಆದರ್ಶವಾಗಿದ್ದರು. ಬಸವಣ್ಣನವರನ್ನು ಗಡೀಪಾರು ಮಾಡಲಾಯಿತು. ಗಾಂಧೀಜಿ ಅವರನ್ನು ಗುಂಡಿಟ್ಟು ಕೊಲ್ಲಲಾಯಿತು. ಅದೇ ರೀತಿಯಲ್ಲಿ ದುಷ್ಕರ್ಮಿಗಳು ಸಂಚು ರೂಪಿಸಿ ಗುರುಗಳ ಚಾರಿತ್ರ್ಯ ವಧೆ ಮಾಡಲು ಯತ್ನಿಸಿರುವುದು ಸ್ಪಷ್ಟವಾಗಿದೆ. ಇದು ನಿಜಕ್ಕೂ ಖಂಡನೀಯ. "ಕಳೆದ ಒಂದು ತಿಂಗಳ ಹಿಂದೆ ಶ್ರೀಗಳು ಅಮೆರಿಕಾಕ್ಕೆ ಹೋದಾಗಲೇ ಇಲ್ಲಿ ಷಡ್ಯಂತ್ರ ರೂಪಿಸಲಾಗಿದೆ. ಮಕ್ಕಳ ಬ್ರೈನ್ ವಾಷ್ ಮಾಡಿ ವ್ಯವಸ್ಥಿತವಾಗಿ ಪಿತೂರಿ ನಡೆಸಲಾಗಿದೆ. ಕೆಳ ವರ್ಗದ ಮಕ್ಕಳು, ಪೋಷಕರ ಮನಸ್ಸನ್ನು ಕೆಡಿಸಿ ಈ ಕೃತ್ಯಕ್ಕೆ ಪ್ರಚೋದನೆ ನೀಡಿದವರನ್ನು ಮೊದಲು ಬಂಧಿಸಿ ವಿಚಾರಣೆ ನಡೆಸಿದರೆ ಸತ್ಯಾಸತ್ಯತೆ ಹೊರಬರಲಿದೆ. ಹಣ, ಅಧಿಕಾರದ ಆಸೆಗಾಗಿ ಈ ಕೃತ್ಯ ಎಸಗಲಾಗಿದ್ದು, ಅಂಥವನ್ನು ಸರ್ಕಾರ ಪತ್ತೆ ಹಚ್ಚಿ ಶಿಕ್ಷಿಸಬೇಕು," ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಆಗ್ರಹಿಸಿದರು.
ಮುರುಘಾ ಶ್ರೀಗಳ ಪರ ಭಕ್ತರ ಅಭಿಪ್ರಾಯ
ಸಭೆಯಲ್ಲಿ ಮಾತನಾಡಿದ ಸಮಾಜದ ಮುಖಂಡರು, ಮುರುಘಾ ಶರಣರಿಗೆ ಸಂಕಷ್ಟ ಬಂದಿರುವುದು ದುರಂತದ ಸಂಗತಿ ಆಗಿದೆ. "ಕೊಳ್ಳಿ ಇಟ್ಟವನ್ನು ಹಾಕಿದವರನ್ನು ಉರಿಯುವ ಬೆಂಕಿ ಸುಡುತ್ತದೆ." ಮುರುಘಾ ಶರಣರು ಸಮಸ್ಯೆಯಲ್ಲಿದ್ದಾರೆ ಎಂದು ನಾವೆಲ್ಲರೂ ಮನೆಯಲ್ಲಿ ಕೂರುವುದಲ್ಲ. ಶ್ರೀಗಳ ಸಮಸ್ಯೆ ಹೋಗಲಾಡಿಸಲು ಪಣ ತೊಡಬೇಕಿದೆ. ನಾವೆಲ್ಲರೂ ಷಡ್ಯಂತ್ರವನ್ನು ಖಂಡಿಸಿ ಶ್ರೀಗಳಿಗೆ ನೈತಿಕ ಬೆಂಬಲ ನೀಡೋಣ ಎಂದು ಹೇಳಿದರು.
ಮುರುಘಾ ಶ್ರೀಗಳ ಬಗ್ಗೆ ಅನುಸೂಯ ಹೇಳಿದ್ದೇನು?
ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಹೆಚ್.ಪಟೇಲ್ ಅವರ ಸಹೋದರಿ ಅನುಸೂಯ ಮಾತನಾಡಿ, ಇದು ಸತ್ಯ ಪರೀಕ್ಷೆಯ ಕಾಲ ಅಲ್ಲ, ಧರ್ಮ ಸಂಘರ್ಷದ ಕಾಲ. ಧರ್ಮ ಸಂಘರ್ಷಕ್ಕೆ ಭಕ್ತರು, ಎಲ್ಲಾ ಮಠಾಧೀಶರು ವರ್ಗರಹಿತರಾಗಿ, ಜಾತಿರಹಿತರಾಗಿ, ಧರ್ಮ ಉಳಿವಿಗಾಗಿ ಒಗ್ಗಟ್ಟಾಗಬೇಕು. ಕರ್ನಾಟಕದಲ್ಲಿನ ಎಲ್ಲಾ ಖಾವಿಧಾರಿಗಳು, ಧರ್ಮ ಪರಿಪಾಲಕರು, ಬಸವತತ್ವ ಪರಿಪಾಲಕರು ಮತ್ತು ವೈದಿಕ ಪರಂಪರೆ ನಡೆಸಿಕೊಂಡು ಬಂದವರೆಲ್ಲರೂ ಸೇರಿ ಧರ್ಮ ಸಂಘರ್ಷದಲ್ಲಿ ಪಾಲ್ಗೊಳ್ಳಬೇಕು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಶ್ರೀಗಳ ಬೆಂಬಲಕ್ಕೆ ನಿಲ್ಲುವಂತೆ ಮನವಿ
"ರಾಮ ರಾವಣರ ಯುದ್ದ ನಡೆಯುತ್ತಿದೆ. ನಾನು ಬೆಳಗ್ಗೆ ಎದ್ದು ಅಜ್ಜಯ್ಯ ಜೈಲಿಗೆ ಹೋಗಿದ್ದಾರೆ ಎಂದು ಮಗನಿಗೆ ಹೇಳಿದೆ. ನಾನು ಜೈಲಿಗೆ ಹೋಗುತ್ತೇನೆ ಎಂದಾಗ, ಮಗ ಅಮ್ಮ ನಿನಗೆ ವಯಸ್ಸಾಗಿದೆ ಎಂದು ಹೇಳಿದ. ಧರ್ಮ ಸಂಘರ್ಷಕ್ಕೆ ಎಲ್ಲರೂ ತಯಾರಾಗಬೇಕು. ಮಠಕ್ಕೆ ಬಂದು ನಮಸ್ಕಾರ ಮಾಡಿ ಪ್ರಸಾದ ಸೇವಿಸಿ ಹೋದರೆ ಸಾಲದು. ಜೀವನದಲ್ಲಿ ಒಮ್ಮೊಮ್ಮೆ ಪರೀಕ್ಷೆ ಅವಕಾಶ ಸಿಗುತ್ತದೆ. ಈಗ ಭಕ್ತರಿಗೆ ಪರೀಕ್ಷೆ ಬಂದಿದೆ." ಎಲ್ಲಾ ಮಠಾಧೀಶರು ಒಗ್ಗಟ್ಟಾಗಿ ಶ್ರೀಗಳ ಬೆಂಬಲಕ್ಕೆ ನಿಲ್ಲಬೇಕು. "ಜೆ.ಹೆಚ್.ಪಟೇಲ್ ಅಂದರೆ ಎಲ್ಲಾ ವರ್ಗದವರ ಪರ ಇದ್ದವರು. ಸನಾತನವಾಗಿ ಬಂದವರನ್ನು ನಾವು ಗೌರವದಿಂದ ಕಾಣಬೇಕು." ನಾವೇ ನ್ಯಾಯದ ಪರ ನಿಲ್ಲದಿದ್ದರೆ ಮತ್ಯಾರು ನಿಲ್ಲುತ್ತಿದ್ದರು. ಶ್ರೀಗಳ ಪರವಾಗಿ ಹೋರಾಟ ನಡೆಸಲು ಸಿದ್ದರಿದ್ದೇವೆ. ಈ ಕಾರಣಕ್ಕೆ ನಾನು ಜೈಲಿಗೆ ಹೋಗಲೂ ಹೆದರಲ್ಲ ಎಂದು ಹೇಳಿದರು.