ಯಡಿಯೂರಪ್ಪಗೆ ಏನೂ ಗೊತ್ತಿಲ್ಲ, ಆತನ ಸಲಹೆ ನಮಗೆ ಬೇಕಿಲ್ಲ: ಸಿ.ಎಂ
ದಾವಣಗೆರೆ, ಡಿಸೆಂಬರ್ 26: ಯಡಿಯೂರಪ್ಪ ಹಣಕಾಸು ವ್ಯವಹಾರ ಗೊತ್ತಿಲ್ಲದೆ ಮಾತನಾಡುತ್ತಾರೆ, ಆರ್ಥಿಕ ನಿರ್ವಹಣೆ ಕುರಿತು ಯಡಿಯೂರಪ್ಪರಿಂದ ಪಾಠ ಕಲಿಯಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನನಲ್ಲಿ 672ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.
ಯಡಿಯೂರಪ್ಪ ಹಣಕಾಸು ವ್ಯವಹಾರ ಗೊತ್ತಿಲ್ಲದೆ ಮಾತನಾಡುತ್ತಾರೆ, ನಾವು 2012 ರಲ್ಲಿ ಪಿಸ್ಕಲ್ ರೆಸ್ಪಾನ್ಸಿಬಿಲಿಟಿ ಆಕ್ಟ್ ಜಾರಿಗೆ ತಂದಿದ್ದೇವೆ. ಆರ್ಥಿಕ ಸುಸ್ಥಿತಿ ಬಗ್ಗೆ ಮಾನದಂಡ ನಿಗಧಿ ಆಗಿದೆ. ಆದಾಯ ಹೆಚ್ಚಿರಬೇಕು, ಜಿಡಿಪಿ ಶೇ 25 ಇರಬೇಕು, ವಿತ್ತೀಯ ಕೊರತೆ ಶೇ 3 ದಾಟಬಾರದು ಎಂಬುದು ನಿಯಮ ಆದರೆ ಇವೆಲ್ಲಾ ಯಡಿಯೂರಪ್ಪಗೆ ಗೊತ್ತಿಲ್ಲ, ಇದನ್ನು ಆತ ಓದಿಕೊಂಡಿಲ್ಲ ಎಂದು ಟೀಕಿಸಿದರು.
ರಾಜ್ಯದ ಆರ್ಥಿಕತೆ ಸುಸ್ಥಿತಿಯಲ್ಲಿದೆ. ರಾಜ್ಯಕ್ಕೆ ಎರಡು ತಿಂಗಳ ಹಿಂದೆ ಬಂದಿದ್ದ ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್, ರಾಜ್ಯದ ಆರ್ಥಿಕತೆ ಸುಸ್ಥಿತಿಯಲ್ಲಿದ್ದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ, ನಮಗೆ ಯಡಿಯೂರಪ್ಪನ ಸರ್ಟಿಫಿಕೇಟ್ ಬೇಕಿಲ್ಲ ಎಂದರು.

ಯಡಿಯೂರಪ್ಪ ಅಭಿವೃದ್ಧಿ ಮಾಡಲಿಲ್ಲ
ಬಜೆಟ್ ನ ಉದ್ದೇಶವೇ ಸರ್ವರಿಗೂ ಸಮಪಾಲು, ಸಮಬಾಳು ಕಲ್ಪಿಸುವುದಾಗಿದೆ. ಇದರಲ್ಲಿ ದಲಿತ ಬಜೆಟ್, ಹಿಂದುಳಿದ ಬಜೆಟ್, ಯುವಕ-ಯುವತಿ, ರೈತ ಬಜೆಟ್ ಅಂತ ಇರುವುದಿಲ್ಲ. ಯಡಿಯೂರಪ್ಪ ಹಸಿರುಶಾಲು ಹಾಕಿಕೊಂಡು ಕೃಷಿ ಬಜೆಟ್ ಮಂಡಿಸಿದರು. ಆದರೆ ಯಾವ ಕಾರ್ಯಕ್ರಮಗಳನ್ನು ಕೊಡಲಿಲ್ಲ. ಸರ್ವರಿಗೂ ಸಮಬಾಳು ಸಮಪಾಲು ಎಂಬ ಬಜೆಟ್ ನ ಮೂಲ ಮಂತ್ರವನ್ನು ಅವರು ಹಾಳು ಮಾಡಿದರು ಎಂದರು.
ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ
ಯಡಿಯೂರಪ್ಪ ಗೊಬ್ಬರ ಕೇಳಿದ ರೈತರ ಮೇಲೆ ಗುಂಡು ಹಾರಿಸಿದವರು ಎಂದು ಸಿಎಂ ಹರಿಹಾಯ್ದರು. ಮುಖ್ಯಮಂತ್ರಿಗೆ ಪತ್ರ ಬರಯಬೇಕಿದ್ದ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಯಡಿಯೂರಪ್ಪಗೆ ಬರೆದಿದ್ದಾರೆ ಆದರೆ ಅದಕ್ಕೆ ಕಾನೂನು ಮಾನ್ಯತೆ ಇಲ್ಲ. ಇಬ್ಬರೂ ಸೇರಿ ನಾಟಕ ಆಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಮೂದಲಿಸಿದರು. ಮಹದಾಯಿ ನದಿ ನೀರು ಹಂಚಿಕೆಯಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಲೇಬೇಕು ಎಂದು ಅವರು ಆಗ್ರಹಿಸಿದರು.

ಯಡಿಯೂರಪ್ಪ ಏನು ಆಯುಕ್ತರಾ?
ಮಂತ್ರಿ ಮಂಡಲ ವಿಸರ್ಜನೆ ಮಾಡಿ ಚುನಾವಣೆಗೆ ಇಳಿಯುವಂತೆ ಯಡಯೂರಪ್ಪ ನಿನ್ನೆ ಹಾಕಿದ್ದ ಸವಾಲಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ 'ಅವರು ಏನು ಚುನಾವಣಾ ಆಯೋಗದ ಆಯುಕ್ತರಾ? ನಮಗೆ ಜನರು 5 ವರ್ಷದವರೆಗೆ ಆಯ್ಕೆ ಮಾಡಿದ್ದಾರೆ ಅಷ್ಟನ್ನೂ ಮುಗಿಸಿಯೇ ತೀರುತ್ತೇವೆ'. ಮೇ ತಿಂಗಳಲ್ಲಿ ಚುನಾವಣೆಗೆ ಬರಲಿ ಎಂದು ಪ್ರತಿ ಸವಾಲು ಹಾಕಿದರು.

ಫಲಾನುಭವಿಗಳಿಗೆ ಸವಲತ್ತು
ಮುಖ್ಯಮಂತ್ರಿ ಅವರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭೆ ಕ್ಷೇತ್ರದಲ್ಲಿ ರೂ.672 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸವನ್ನು ನೆರವೇರಿಸಿ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಿದರು.












Click it and Unblock the Notifications