ಚಿಕ್ಕಪೇಟೆಯಲ್ಲಿ ವರ್ತಕರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವಾಟಾಳ್ ನಾಗರಾಜ್
ದಾವಣಗೆರೆ, ಡಿ 4: ಮರಾಠಾ ಪ್ರಾಧಿಕಾರ ರಚನೆಯ ವಿಚಾರದಲ್ಲಿ ಬಿಜೆಪಿ ಮತ್ತು ಕನ್ನಡಪರ ಸಂಘಟನೆಗಳ ನಡುವಿನ ವಾಕ್ಸಮರ ತಾರಕಕ್ಕೇರಿದೆ. ತಮ್ಮನ್ನು ನಾಯಿ ಎಂದು ಕರೆದ ವಾಟಾಳ್ ನಾಗರಾಜ್ ಗೆ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
"ಕನ್ನಡ, ಭುವನೇಶ್ವರಿ ಹೆಸರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಬ್ಯ್ಲಾಕ್ ಮೇಲ್ ಮಾಡುತ್ತಿದ್ದಾರೆ. ಅಂತವರಿಂದ ನಾನು ಕನ್ನಡ ಪಾಠ ಕಲಿಯಬೇಕಾಗಿಲ್ಲ"ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಿಡಿಕಾರಿದರು.
"ಆ ವ್ಯಕ್ತಿ ಬಹಳ ಬ್ಲ್ಯಾಕ್ ಮೇಲ್ ಮಾಡುವವರು ಎನ್ನುವುದು ಎಲ್ಲರಿಗೂ ಅರಿತಿದೆ. ಶಾಸಕರಾಗಿದ್ದಾಗ ಚಿಕ್ಕಪೇಟೆಯಲ್ಲಿ ಸಣ್ಣಸಣ್ಣ ವರ್ತಕರಿಗೆ ಕಣ್ಣೀರು ಹಾಕಿಸಿರುವುದು, ವಸೂಲಿ ಮಾಡಿರುವುದು ಗೊತ್ತಿಲ್ಲವೇ"ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದರು.

"ನನ್ನನ್ನು ಆ ವ್ಯಕ್ತಿ ನಾಯಿ ಎಂದು ಸಂಭೋಧಿಸಿದ್ದಾರೆ. ಹೌದು ನಾನು ನಾಯಿನೇ. ನಾಯಿಗೆ ಇರುವ ನಿಯತ್ತು ಅವರಿಗಿದೆಯಾ. ನಾನು ನನ್ನ ದೇಶ, ರಾಜ್ಯ, ಭಾಷೆ ಮತ್ತು ಮತಕ್ಷೇತ್ರದ ನಿಯತ್ತಿನ ನಾಯಿ"ಎಂದು ರೇಣುಕಾಚಾರ್ಯ ಹೇಳಿದರು.
"ನಮ್ಮ ಜನ ಕನ್ನಡವನ್ನು ಪ್ರತಿನಿತ್ಯ ಆರಾಧಿಸುತ್ತಾರೆ, ಕನ್ನಡದ ತೇರನ್ನು ಎಳೆಯುತ್ತಾರೆ, ಕನ್ನಡ ಶಾಲೆಗೆ ಹೋಗುತ್ತಾರೆ. ವಾಟಾಳ್ ನಾಗರಾಜ್ ಮುಂತಾದವರಿಂದ ನಾನು ಕನ್ನಡ ಪಾಠ ಕಲಿಯಬೇಕಾಗಿಲ್ಲ"ಎಂದು ರೇಣುಕಾಚಾರ್ಯ ಹೇಳಿದರು.
"ಈ ನಡುವೆ, ಡಿಸೆಂಬರ್ ಐದರಂದು ನಡೆಯಲಿರುವ ಕರ್ನಾಟಕ ಬಂದ್ ಯಶಸ್ಸನ್ನು ನಾವು ಸವಾಲಾಗಿ ಸ್ವೀಕರಿಸಿದ್ದೇವೆ. ಈ ಬಂದ್ ಯಶಸ್ವಿಯಾಗುವುದು ನಿಶ್ಚಿತ"ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.












Click it and Unblock the Notifications