ಹಾವು ಕಚ್ಚಿದರೂ ಏನೂ ಆಗುವುದಿಲ್ಲ; ನಾಗೇನಹಳ್ಳಿಯ ವಿಶೇಷತೆ
ದಾವಣಗೆರೆ, ಅಕ್ಟೋಬರ್, 02: ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಸಮೀಪದ ನಾಗೇನಹಳ್ಳಿಯಲ್ಲಿ ಗ್ರಾಮದ ಜನರಿಗೆ ಹಾವುಗಳೆಂದರೆ ಭಯವೇ ಇಲ್ಲದಂತಾಗಿದೆ. ಯಾಕೆಂದರೆ ಇಲ್ಲಿ ಪವಾಡ ನಡೆಯುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮನೆಯೊಳಗೆ ಬಂದರೆ ಶ್ರದ್ಧಾ, ಭಕ್ತಿಯಿಂದ ನಾಗ ದೇವನಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೇ ನಾಗರಹಾವುಗಳ ಜೊತೆ ಆಟವನ್ನೂ ಆಡಿ ಖುಷಿ ಪಡುವುದು ಇಲ್ಲಿನ ಜನರ ಸಂಪ್ರದಾಯ ಆಗಿದೆ. ಮಹಿಳೆಯರು ಹಾವುಗಳನ್ನು ಕೈಯಲ್ಲಿ ಹಿಡಿದುಕೊಂಡು ಆಟ ಆಡಿಸುತ್ತಾರೆ. ಹಾವುಗಳು ಗ್ರಾಮದ ಒಳಗಡೆ ಬಂದರೂ ಹೆದರುವುದಿಲ್ಲ. ಕಚ್ಚಿದರೂ ಏನೂ ಆಗುವುದಿಲ್ಲ ಎನ್ನುವುದು ಈ ಭಾಗದ ಜನರ ನಂಬಿಕೆಯಾಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಸಮೀಪದ ನಾಗೇನಹಳ್ಳಿಯಲ್ಲಿ ಇಂತಹ ವಿಶೇಷವನ್ನು ಕಾಣಬಹುದಾಗಿದೆ. ಈ ಗ್ರಾಮದಲ್ಲಿ ಹಲವಾರು ಪವಾಡ, ವಿಸ್ಮಯಗಳು ನಡೆಯುತ್ತವೆ. ಹಾವು ಕಂಡ ತಕ್ಷಣ ಹೆದರಿ ಓಡಿ ಹೋಗುವವರೇ ಹೆಚ್ಚಾಗಿರುತ್ತಾರೆ. ಆದರೆ ನಾಗೇನಹಳ್ಳಿ ಗ್ರಾಮದಲ್ಲಿ ಜನರು ಮಾತ್ರ ಇದಕ್ಕೆ ತಲೆಕೆಡಿಸಿಕೊಳ್ಳದೇ ಹಾವುಗಳ ಜೊತೆಗೆ ಆಟ ಆಡುವುದನ್ನು ರೂಢಿಸಿಕೊಂಡು ಬಂದಿದ್ದಾರೆ.
40 ವರ್ಷಗಳ ಬಳಿಕ ಭರ್ತಿಯಾದ ಅಣಜಿ ಕೆರೆ: ಹಲವು ಜಲಮೂಲಗಳಿಗೆ ಆಸರೆಯಾದ ಕೆರೆ
ಒಂದು ವೇಳೆ ಹಾವು ಕಚ್ಚಿದರೂ ಇವರಿಗೆ ಏನೂ ಆಗುವುದಿಲ್ಲವಂತೆ. ಇವರಿಗೆ ಹಾವು ಕಚ್ಚುವುದು ತುಂಬಾ ಕಡಿಮೆ ಎಂದು ಅಲ್ಲಿನ ಜನರು ಹೇಳುತ್ತಾರೆ. ನೂರಾರು ವರ್ಷಗಳಿಂದಲೂ ಇದು ನಡೆದುಕೊಂಡು ಬರುತ್ತಿದೆ. ಈಗಲೂ ಜನರು ನಾಗರ ಹಾವನ್ನು ಆರಾಧಿಸುತ್ತಾರೆ, ಪೂಜಿಸುತ್ತಾರೆ. ದೊಡ್ಡವರಿಂದ ಹಿಡಿದು ಪುಟ್ಟ ಮಕ್ಕಳಿಗೂ ಹಾವು ಕಂಡರೆ ಭಯ ಆಗುವುದೇ ಇಲ್ಲ ಎಂದು ಇಲ್ಲಿನ ಜನರ ಅಭಿಪ್ರಾಯವಾಗಿದೆ.
ಜನರ ಆರಾಧ್ಯನಾದ ನಾಗಲಿಂಗೇಶ್ವರ
ಇನ್ನು ನಾಗಲಿಂಗೇಶ್ವರ ಸ್ವಾಮಿಯು ನಾಗೇನಹಳ್ಳಿಯಲ್ಲಿ ನೆಲೆಸಿರುವ ಪವಿತ್ರ ಶ್ರದ್ಧಾ, ಭಕ್ತಿಯ ದೇವರಾಗಿದೆ. ಈ ಗ್ರಾಮದಲ್ಲಿ ನಾಗರಹಾವು ಕಚ್ಚಿದರೂ ನಾಗಲಿಂಗೇಶ್ವರ ಸ್ವಾಮಿ ಶ್ರೀರಕ್ಷೆಯಾಗಿ ನಿಂತಿದ್ದಾನೆ. ಏನೂ ಆಗದಂತೆ ನೋಡಿಕೊಳ್ಳುತ್ತಾನೆ. ಈಗಲೂ ಗ್ರಾಮಗಳಲ್ಲಿ ಹಾವುಗಳು ಬರುತ್ತಲೇ ಇರುತ್ತವೆ. ಊರಿನಲ್ಲಿ ಓಡಾಡಿಕೊಂಡಿವೆ. ಆದರೂ ಜನರಿಗೆ ಯಾವುದೇ ತೊಂದರೆ ಕೊಡುವುದಿಲ್ಲ. ಕೆಲವೊಮ್ಮೆ ಮನೆಯೊಳಗೂ ಹಾವು ಬರುತ್ತದೆ. ಆಗ ನಾಗನಿಗೆ ಪೂಜೆ ಸಲ್ಲಿಸಿದ ಬಳಿಕ ಮತ್ತೆ ತನ್ನ ಪಾಡಿಗೆ ಹೋಗಿ ಬಿಡುತ್ತದೆ ಎನ್ನುವುದು ಇಲ್ಲಿನ ನಂಬಿಕೆಯಾಗಿದೆ.
ಶತಮಾನಗಳ ಇತಿಹಾಸ ಇರುವ ನಂಬಿಕೆ ಏನು?
ಈ ನಂಬಿಕೆಗೆ ಶತಮಾನಗಳ ಇತಿಹಾಸವೂ ಇದೆ. ಸುಮಾರು ನಾಲ್ಕು ಶತಮಾನಗಳ ಹಿಂದೆ ಈ ಗ್ರಾಮಕ್ಕೆ ಋಷಿ ಮುನಿಯೊಬ್ಬರು ಬಂದು ನೆಲೆಸುತ್ತಾರೆ. ಈ ಗ್ರಾಮದಲ್ಲಿರುವ ಬಸಲೆ ಮರಕಟ್ಟೆಯಲ್ಲಿಯೇ ಅವರು ವಾಸವಾಗಿರುತ್ತಾರೆ. ಪ್ರತಿನಿತ್ಯವೂ ನಾಗದೇವನಿಗೆ ಪೂಜೆ ಸಲ್ಲಿಸಿ ಭಿಕ್ಷೆ ಬೇಡಲು ಹೋಗುತ್ತಿದ್ದರು. ಅದರಿಂದಲೇ ಬದುಕು ಸಾಗುತ್ತಿತ್ತು. ಭಿಕ್ಷಾಟನೆಗೆ ಹೋದಾಗ ಋಷಿ ಮುನಿಗೆ ಒಂದು ಮಗು ಸಿಗುತ್ತದೆ. ದೇಗುಲದ ಬಳಿ ಮಗುವನ್ನು ಬಿಟ್ಟು ಭಿಕ್ಷಾಟನೆಗೆ ಹೋಗಿ ಬರುವಷ್ಟರಲ್ಲಿ ಹಾವು ಮಗುವಿಗೆ ಕಚ್ಚಿಬಿಡುತ್ತೆ. ಆಗ ಮಗು ವಿಷವೇರಿ ಮೃತಪಟ್ಟಿತ್ತು. ಇದರಿಂದ ಕಠಿಣ ತಪಸ್ವಿ ಋಷಿಮುನಿ ಕುಪಿತರಾಗಿ ಬಿಡುತ್ತಾರೆ. ಅವರಿಗೆ ಎಲ್ಲಿಲ್ಲದ ಸಿಟ್ಟು ಬರುತ್ತದೆ. ಮಗುವನ್ನು ಕಳೆದುಕೊಂಡ ನೋವು ಒಂದು ಕಡೆಯಾದರೆ, ಮತ್ತೊಂದೆಡೆ ಮತ್ತೆ ಇಂತಹ ಅನಾಹುತ ಘಟನೆ ಸಂಭವಿಸಬಾರದು. ಇದಕ್ಕೊಂದು ಪರಿಹಾರ ಹುಡುಕಲೇ ಬೇಕು ಎನ್ನುವ ಕಾರಣಕ್ಕೆ ಶಾಪ ಕೊಡುತ್ತಾರೆ.
ಋಷಿ ಮುನಿಗಳು ಶಾಪ ಕೊಟ್ಟಿದ್ದೇಕೆ?
ಇಂತಹ ಸಾವಿನ ನೋವು ಯಾರಿಗೂ ಬರಬಾರದು ಎನ್ನುವ ಕಾರಣ ನಾಗರಹಾವು ಈ ಗ್ರಾಮದ ಗಡಿ ಭಾಗದಲ್ಲಿ ಕಚ್ಚಬಾರದು. ಕಚ್ಚಿದರೂ ವಿಷ ಏರಬಾರದು ಎನ್ನುವ ಶಾಪ ಕೊಟ್ಟಿದ್ದರಂತೆ. ಅಂದಿನಿಂದ ಇಂದಿನವರೆಗೂ ಇದೇ ರೀತಿ ನಡೆದುಕೊಂಡು ಬರುತ್ತಿದೆ. ಋಷಿಮುನಿ ಸಾವನ್ನಪ್ಪಿದ ಬಳಿಕವೂ ಅವರು ಪೂಜೆ ಮಾಡುತ್ತಿದ್ದ ಸ್ಥಳವನ್ನು ಈಗಲೂ ಪೂಜಿಸಿಕೊಂಡು ಬರುತ್ತಿದ್ದೇವೆ. ನಾಗನನ್ನು ಆರಾಧನೆ ಮಾಡಿಕೊಂಡು ಬಂದಿದ್ದೇವೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.
ನಾಗಲಿಂಗೇಶ್ವರ ಮೊರೆ ಹೋಗುವ ಜನರು
ಈ ಗ್ರಾಮದಲ್ಲಿ ನಾಗರಹಾವು ಯಾರಿಗೂ ಕಚ್ಚಿಲ್ಲ ಅಂತೇನಿಲ್ಲ. ತುಂಬಾ ಜನರುಗೆ ಹಾವು ಕಚ್ಚಿದರೂ ಸತ್ತಿಲ್ಲ, ವಿಷವೂ ಏರಿಲ್ಲ ಎನ್ನುತ್ತಾರೆ ಇಲ್ಲಿನ ಜನರು. ಹಾವು ಕಡಿದರೆ ಆಸ್ಪತ್ರೆಗೂ ಹೋಗುವುದಿಲ್ಲ ಇವರು. ಆಂಜನೇಯನ ಗುಡಿಗೆ ಹೋಗಿ ತೀರ್ಥ ಹಾಕಿದರೆ ವಾಸಿ ಆಗುತ್ತದೆ ಎಂಬ ನಂಬಿಕೆಯನ್ನು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದಾರೆ. ಹಾವು ಕಚ್ಚಿದರೂ ದೇವಸ್ಥಾನದಲ್ಲಿ ಇದ್ದು ಮನೆಗೆ ಹೋಗುತ್ತಾರೆ. ರಕ್ತ ಸೋರುವ ಹಾಗೆ ಕಚ್ಚಿದರೂ ಯಾರೂ ಸಾವನ್ನಪ್ಪಿಲ್ಲ ಎನ್ನುವುದೇ ಆಶ್ಚರ್ಯದ ಸಂಗತಿ ಆಗಿದೆ. ಈ ಊರಿನ ಜನರು ಸಾವನ್ನಪ್ಪಿದ್ದ ಋಷಿಮುನಿಗೆ ಈಗಲೂ ಪೂಜೆ ನೆರವೇರಿಸುತ್ತಾ ಬರುತ್ತಿದ್ದಾರೆ. ಸರ್ಪ ದೋಷ ಇದ್ದರೆ, ಸರ್ಪ ಹುಣ್ಣು ಆದರೆ ಈ ಗ್ರಾಮಕ್ಕೆ ಬಂದು ನಾಗಲಿಂಗೇಶ್ವರ ಸ್ವಾಮಿಗೆ ಪೂಜೆ ಮಾಡಿಸಿದರೆ ಸಾಕು ದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ. ಏನೇ ಕಷ್ಟ ಬಂದರೂ ನಾಗಲಿಂಗೇಶ್ವರ ಸ್ವಾಮಿ ಈಡೇರಿಸುತ್ತಾನೆ. ಇನ್ನು ತಪ್ಪು ಮಾಡಿದ್ದನ್ನು ಒಪ್ಪಿಕೊಂಡರೇ ಸ್ವಾಮಿ ಕ್ಷಮಿಸಿಬಿಡುತ್ತಾನೆ ಎನ್ನುವ ಬಲವಾದ ನಂಬಿಕೆ ಈಗಲೂ ಬೇರೂರಿದೆ.
ಒಂದೇ ಸ್ಥಳದಲ್ಲಿರುವ ನಾಲ್ಕು ಮರಗಳು
ನಾಗಲಿಂಗೇಶ್ವರ ದೇವಾಸ್ಥಾನದ ಆವರಣದ ಒಂದೇ ಸ್ಥಳದಲ್ಲಿ ನಾಲ್ಕು ವಿಶೇಷ ಮರಗಳಿವೆ. ಅಶ್ವತ್ಥ್ ವೃಕ್ಷ, ಬನ್ನಿಮರ, ಬಸಲಿ ಮರ, ಮತ್ತು ಬಿಲ್ವಾ ಪತ್ರ ಈ ನಾಲ್ಕು ಮರಗಳು ಒಂದೇ ಕಡೆ ಇರುವುದು ಇನ್ನು ವಿಶೇಷವಾಗಿದೆ. ಹಾಗಾಗಿಯೇ ಈ ಸ್ಥಳ ಒಂದು ಪುಣ್ಯ ಸ್ಥಳವಾಗಿದೆ ಎಂಬುದು ಗ್ರಾಮಸ್ಥರ ನಂಬಿಕೆ ಆಗಿದೆ. ಇನ್ನು ನಾಗರಹಾವು ಮೃತಪಟ್ಟರೆ ಅಂತ್ಯ ಸಂಸ್ಕಾರವನ್ನು ಮಾಡುತ್ತಾರೆ. ಮನುಷ್ಯರಿಗೆ ಹೇಗೆ ಅಂತಿಮ ವಿಧಿವಿಧಾನಗಳನ್ನು ಮಾಡಲಾಗುತ್ತದೆಯೋ ಅದೇ ರೀತಿಯಲ್ಲಿ ಸಾವನ್ನಪ್ಪಿದ ಹಾವುಗಳಿಗೂ ಅಂತಿಮ ಕಾರ್ಯಗಳನ್ನು ನೆರವೇರಿಸಲಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ದೇವಸ್ಥಾನದಲ್ಲಿ ತೀರ್ಥ ಕುಡಿದರೆ ಗುಣಮುಖ
ಇನ್ನು ಮತ್ತೊಂದು ವಿಶೇಷ ಅಂದರೆ ಈ ಗ್ರಾಮಕ್ಕೆ ಬೇರೆ ಗ್ರಾಮದವರು ಬಂದರೂ ಹಾವುಗಳು ಕಚ್ಚುವುದಿಲ್ಲ. ಗ್ರಾಮದ ಗಡಿ ಬಿಟ್ಟು ಹೊರಗೆ ಹಾವು ಕಚ್ಚಿದರೆ ಅಥವಾ ಬೇರೆ ಗ್ರಾಮಗಳಲ್ಲಿ ಹಾವು ಕಚ್ಚಿದರೆ ಶ್ರೀ ಕ್ಷೇತ್ರ ನಾಗೇನಹಳ್ಳಿ ನಾಗಲಿಂಗೇಶ್ವರ ದೇವಸ್ಥಾನಕ್ಕೆ ಬಂದು ತೀರ್ಥ ಕುಡಿದು ಒಂದು ದಿನ ಇದ್ದರೇ ಸಾಕು. ಗುಣಮುಖರಾಗಿ ವಾಪಸ್ ಹೋಗುತ್ತಾರೆ. ಒಟ್ಟಿನಲ್ಲಿ ಇದು ವಿಸ್ಮಮಯವೋ, ಪವಾಡವೋ ಗೊತ್ತಿಲ್ಲ. ಆದರೆ ಇಲ್ಲಿ ನಡೆಯುತ್ತಿರುವ ಘಟನೆಗಳು ಮಾತ್ರ ಸೋಜಿಗವೇ ಸರಿ ಎಂದು ನಾಗಲಿಂಗೇಶ್ವರ ದೇಗುಲದ ಪ್ರಮುಖರು ಹೇಳುತ್ತಿದ್ದಾರೆ.