ಇದು ರೈಲು ಬಿಡುವ ಬಜೆಟ್ ಅಲ್ಲ ಎಂದು ಸಿದ್ದುಗೆ ತಿರುಗೇಟು ಕೊಟ್ಟ ನಗರಾಭಿವೃದ್ಧಿ ಸಚಿವ
ದಾವಣಗೆರೆ, ಮಾರ್ಚ್ 6: ರಾಜ್ಯ ಸರ್ಕಾರದ ಬಜೆಟ್ ದರಿದ್ರ ಬಜೆಟ್ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿರುಗೇಟು ನೀಡಿದ್ದಾರೆ.
"ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದವರು. ಅವರ ಬಾಯಲ್ಲಿ ಇಂತಹ ಮಾತು ಬರಬಾರದು. ಸುಭೀಕ್ಷವಾದ, ರಾಜ್ಯಕ್ಕೆ ಉತ್ತಮವಾದ ಬಜೆಟ್ ಅನ್ನು ನಮ್ಮ ಸರ್ಕಾರ ನೀಡಿದೆ. ರೈಲು ಬಿಡುವಂತಹ ಬಜೆಟ್ ಮಾಡಿಲ್ಲ, ವಸ್ತುಸ್ಥಿತಿಗೆ ಅನುಗುಣವಾಗಿ ಬಜೆಟ್ ಮಾಡಿದ್ದಾರೆ" ಎಂದರು.
ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕೃಷಿ ಮೇಳದಲ್ಲಿ ಮಾತನಾಡಿದ ಅವರು, "ಈ ಬಜೆಟ್ ನಿಂದ ರಾಜ್ಯದ ಅಭಿವೃದ್ಧಿ ಯಾಗುತ್ತದೆ ಎನ್ನುವ ವಿಶ್ವಾಸ ಇದೆ. ಎಲ್ಲಾ ಶಾಸಕರಿಗೂ ಅನುದಾನ ನೀಡಲು ಸಾಧ್ಯವಿಲ್ಲ. ಇಲಾಖಾವಾರು ಅನುದಾನ ಬಿಡುಗಡೆಯಾಗಿದೆ. ಆಗ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ, ಇಲಾಖಾವಾರು ಆಯಾ ಕ್ಷೇತ್ರಕ್ಕೆ ಏನು ಬೇಕೋ ಅದು ಬಂದೇ ಬರುತ್ತದೆ" ಎಂದು ಭರವಸೆ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಭೈರತಿ ಬಸವರಾಜ್, "ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯ ಹೋರಾಟಗಾರರಂತೆ ಇರಬೇಕು. ಆ ರೀತಿ ನಡೆದುಕೊಂಡರೆ ಹೀಗೆಲ್ಲಾ ಆಗುತ್ತದೆ" ಎಂದು ಉತ್ತರಿಸಿದರು.












Click it and Unblock the Notifications