ತಾಕತ್ತಿರೋದಕ್ಕೇ ರಾಜ್ಯದಲ್ಲಿ ಸರ್ಕಾರ ರಚಿಸಿದ್ದು; ಭೀಮಾಶಂಕರ್ ವಾಗ್ದಾಳಿ
ದಾವಣಗೆರೆ, ಜುಲೈ 8: ಯಡಿಯೂರಪ್ಪನವರಷ್ಟು ರಾಜಕೀಯ ಅನುಭವವಿಲ್ಲದ ಉಗ್ರಪ್ಪನವರು ಮೊದಲು ತಾಕತ್ತು ಎಂಬುದರ ಅರ್ಥ ತಿಳಿದುಕೊಂಡು ಮಾತನಾಡಲಿ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ತಾಕತ್ತು, ಧಮ್ ಇದ್ದುದರಿಂದಲೇ ರಾಜ್ಯದಲ್ಲಿ ಬಿಜೆಪಿ ಪಕ್ಷ ಸರ್ಕಾರ ರಚಿಸಿದೆ. ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಇನ್ನಾದರೂ ಕಾಂಗ್ರೆಸ್ ನಾಯಕರು ಉಡಾಫೆ ಮಾತನಾಡುವುದನ್ನು ಬಿಟ್ಟು ಸರ್ಕಾರಕ್ಕೆ ರಚನಾತ್ಮಕ ಸಲಹೆ ನೀಡಲಿ" ಎಂದು ಹೇಳಿದರು.
ಕಾಂಗ್ರೆಸ್, ಜೆಡಿಎಸ್ ಗೆ ಭೀಮಾಶಂಕರ ಪಾಟೀಲ್ ಸವಾಲು
"ಸಿದ್ದರಾಮಯ್ಯ ಸರ್ಕಾರದಲ್ಲಿ ಏನೆಲ್ಲಾ ಅವಾಂತರಗಳಾಗಿವೆ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಯಡಿಯೂರಪ್ಪನವರು ಯುವಕರಂತೆ ಹಗಲಿರುಳು ಕೊರೊನಾ ನಿಯಂತ್ರಿಸಲು ಕೆಲಸ ಮಾಡುತ್ತಿದ್ದಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳು ಟೀಕೆ ಬಿಟ್ಟು ಸರ್ಕಾರದ ಜೊತೆಗೆ ಕೆಲಸ ಮಾಡಬೇಕು. ಬಾಯಿ ಚಪಲಕ್ಕೆ ಮಾತನಾಡಿ ಜನರೆದುರು ನಗೆಪಾಟಲಿಗೆ ಈಡಾಗುವುದು ಸರಿಯಲ್ಲ" ಎಂದು ಹರಿಹಾಯ್ದರು.
"ಇಟಲಿ, ಅಮೇರಿಕಾ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾ ಸೋಂಕು ಅಷ್ಟಾಗಿ ಹಬ್ಬಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋಂಕು ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಂಡಿವೆ. ಜನರ ಆರೋಗ್ಯದ ಜೊತೆಗೆ ಆರ್ಥಿಕ ಸ್ಥಿತಿಯನ್ನೂ ಉತ್ತಮಗೊಳಿಸಬೇಕಾದ ಹೊಣೆಗಾರಿಕೆ ಸರ್ಕಾರಗಳ ಮೇಲಿದೆ. ಈ ನಿಟ್ಟಿನಲ್ಲಿ ಎರಡೂ ಸರ್ಕಾರಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ" ಎಂದು ಸಮರ್ಥಿಸಿಕೊಂಡರು.
ಬಿಜೆಪಿ ಮುಖಂಡರಾದ ಉಮೇಶ ಪಾಟೀಲ್, ನಬೀವುಲ್ಲಾ, ಶಿವಕುಮಾರ, ಕೆ.ಎನ್.ವೆಂಕಟೇಶ, ಶಿವನಗೌಡ ಪಾಟೀಲ್, ಶೇರ್ ಅಲಿ ಇತರರು ಈ ಸಂದರ್ಭ ಹಾಜರಿದ್ದರು.