ವಿಧಾನಸಭೆ ಚುನಾವಣೆ: ಹರಿಹರದಲ್ಲಿ ಅಭ್ಯರ್ಥಿ ಬಗ್ಗೆ ಸುಳಿವು ಬಿಟ್ಟುಕೊಡದ ಬಿಜೆಪಿ ನಾಯಕರು
ದಾವಣಗೆರೆ, ನವೆಂಬರ್, 24: ಕಾಂಗ್ರೆಸ್ ಭದ್ರಕೋಟೆ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆದಿತ್ತು. 2023ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪಣತೊಟ್ಟು ನಿಂತಿದ್ದು, ರಾಜ್ಯಾದ್ಯಂತ ಬಿಜೆಪಿ ಸಂಕಲ್ಪ ಯಾತ್ರೆ ನಡೆಸುತ್ತಿದೆ. ಆದರೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಸಿಎಂ ಬಸವರಾಜ ಬೊಮ್ಮಾಯಿ ಹಾದಿಯಾಗಿ ನಾಯಕರು ನಡೆದುಕೊಂಡಿದ್ದು, ಇದೀಗ ಚರ್ಚೆಗೆ ಕಾರಣವಾಗಿದೆ.
ವಿಧಾನಸಭೆ ಚುನಾವಣೆ ಘೋಷಣೆ ಇನ್ನು ಆಗಿಲ್ಲ. ಈಗಳೆ ಬಿಜೆಪಿ ತಾಲೀಮು ನಡೆಸಲು ಸಜ್ಜಾಗಿದೆ. ಜಗಳೂರಿನಲ್ಲಿ ಏರ್ಪಡಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಶ್ರೀರಾಮುಲು, ಬೈರತಿ ಬಸವರಾಜ್ ಸೇರಿದಂತೆ ಬಹುತೇಕ ನಾಯಕರು ಮುಂದಿನ ಚುನಾವಣೆಯಲ್ಲಿ ರಾಮಚಂದ್ರಪ್ಪರನ್ನು ಗೆಲ್ಲಿಸಿ ಅಂತಾ ಮನವಿ ಮಾಡಿದರು. ಅಷ್ಟೇ ಅಲ್ಲ, ಬರೋಬ್ಬರಿ 50 ಸಾವಿರ ಮತಗಳ ಅಂತರದಿಂದ ಮತ್ತೆ ಗೆಲ್ಲಿಸಿ ಎಂದರು. ಆದರೆ ಹರಿಹರದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಯಾರು ಎಂದು ಹೇಳಲಿಲ್ಲ. ಎಲ್ಲರೂ ಒಟ್ಟಾಗಿ ಗೆಲ್ಲಿಸಿ, ಹರಿಹರದಲ್ಲಿ ಬಿಜೆಪಿ ಬಾವುಟ ಹಾರಬೇಕು ಎಂದೆಲ್ಲಾ ಹೇಳಿದರೂ ಕೂಡ ಅಭ್ಯರ್ಥಿ ಯಾರು ಎಂಬ ಬಗ್ಗೆ ಹೇಳಲಿಲ್ಲ.
ವಿಧಾನಸಭೆ ಚುನಾವಣೆ: ಹರಿಹರದಲ್ಲಿ ಅಭ್ಯರ್ಥಿ ಬಗ್ಗೆ ಸುಳಿವು ಬಿಟ್ಟುಕೊಡದ ಬಿಜೆಪಿ ನಾಯಕರು
ರಾಮಚಂದ್ರಪ್ಪಗೆ ಟಿಕೆಟ್ ಎಂದ ನಾಯಕರು
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನು ಬಿಡುಗಡೆ ಮಾಡಿಲ್ಲ. ಅಭ್ಯರ್ಥಿಗಳು ಯಾರು ಎಂಬುದು ಘೋಷಣೆಯೂ ಆಗಿಲ್ಲ. ಮುಂಚಿತವಾಗಿ ಸಿಎಂ, ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರು ಬಹಿರಂಗವಾಗಿ ರಾಮಚಂದ್ರಪ್ಪಗೆ ಟಿಕೆಟ್ ಎಂದಿದ್ದಾರೆ. ಅವರಿಗೆ ಟಿಕೆಟ್ ಸಿಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಆದರೂ ಇದೊಂದು ಕ್ಷೇತ್ರಕ್ಕೆ ಮಾತ್ರ ಘೋಷಣೆ ಮಾಡಬೇಕಿತ್ತು ಎಂಬ ಪ್ರಶ್ನೆ ಬಿಜೆಪಿ ಕಾರ್ಯಕರ್ತರದ್ದಾಗಿದೆ. ರಾಮಚಂದ್ರಪ್ಪರಿಗೆ ಟಿಕೆಟ್ ಕೊಟ್ಟರೆ ಅಭ್ಯಂತರವೇನು ಇಲ್ಲ. ಎಲ್ಲಿಯೂ ಯಾರಿಗೂ ಟಿಕೆಟ್ ಘೋಷಣೆ ಆಗಿಲ್ಲ.
ದೊಡ್ಡದಿರುವ ಆಕಾಂಕ್ಷಿಗಳ ಪಟ್ಟಿ
ಹರಿಹರ ಕ್ಷೇತ್ರದಲ್ಲಿ ಕಾಂಗ್ರೆಸ್ನ ರಾಮಪ್ಪ ಶಾಸಕರಾಗಿದ್ದಾರೆ. ಹರಿಹರ ತಾಲೂಕಿನಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಗಳ ಪಟ್ಟಿಯೇ ದೊಡ್ಡದಿದೆ. ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದಾರೆ. ಟಿಕೆಟ್ಗಾಗಿ ಈಗಿನಿಂದಲೂ ಪ್ರಯತ್ನ ಶುರು ಮಾಡಿದ್ದಾರೆ. ಹರಿಹರದಲ್ಲಿ ಅಭ್ಯರ್ಥಿ ಘೋಷಿಸದೇ, ಜಗಳೂರಿನಲ್ಲಿ ಮಾತ್ರ ರಾಮಚಂದ್ರಪ್ಪನ ಪರ ಎಲ್ಲರೂ ಜೈಕಾರ, ಹೊಗಳಿಕೆಯ ಸುರಿಮಳೆಯನ್ನೇ ಹರಿಸಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.
ಸಿದ್ದರಾಮಯ್ಯ ವಿರುದ್ಧ ಸಿಎಂ ಆಕ್ರೋಶ
ಕಾಂಗ್ರೆಸ್ ಪಕ್ಷ ಟಿಕೆಟ್ಗೆ ಅರ್ಜಿ ಕರೆದಿದ್ದರೆ, ಬಿಜೆಪಿ ಒಂದು ಹೆಜ್ಜೆ ಮುಂದೇ ಹೋಗಿ ಟಿಕೆಟ್ ಅನ್ನು ಘೋಷಣೆ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ಜಗಳೂರು ಹಾಗೂ ಹರಿಹರ ವಿಧಾನಸಭಾ ಕ್ಷೇತ್ರ ಎರಡರಲ್ಲೂ ನಾಯಕರು ಜನರು ಸೇರಿದ್ದನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಜಗಳೂರಿನ ನಂತರ ಹರಿಹರಕ್ಕೆ ಬಂದ ಬಿಜೆಪಿ ನಾಯಕರು, ಭಾಷಣದುದಕ್ಕೂ ಸಿದ್ದರಾಮಯ್ಯ ವಿರುದ್ದ ಗುಡುಗಿದರು. ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಿದ್ದರಾಮಯ್ಯನ ಭಾಷಣ ಅಣಕಿಸಿ ಕಾಲೆಳೆದರು. "ಅನ್ನಭಾಗ್ಯ ಅಕ್ಕಿ ಮೋದಿಯದ್ದು, ಚೀಲ ಸಿದ್ದರಾಮಯ್ಯರದ್ದಾಗಿದೆ. ಮೂವತ್ತು ರೂಪಾಯಿ ಮೋದಿಯವರು ಕೊಟ್ಟರು. ಮೇಲಿನ ಮೂರು ರೂಪಾಯಿ ಮಾತ್ರ ಸಿದ್ದರಾಮಯ್ಯ ಕೊಟ್ಟು ಫೋಟೊ ಹಾಕಿಕೊಂಡರು. ಆದ್ದರಿಂದ ನಾನು ಅಕ್ಕಿ ಕೊಟ್ಟೆ ಎಂದು ಸಿದ್ದರಾಮಯ್ಯ ಭಾಷಣದುದ್ದಕ್ಕೂ ಹೇಳುತ್ತಾರೆ," ಎಂದು ಸಿಎಂ ವ್ಯಂಗ್ಯವಾಡಿದರು.
ಕುತೂಹಲ ಕೆರಳಿಸಿದ ಬೊಮ್ಮಾಯಿ ನಡೆ
ಇನ್ನು ಜಿಲ್ಲೆಯಲ್ಲಿ ಕುರುಬರು ಹೆಚ್ಚಿದ್ದು, ಈ ಸಮುದಾಯದ ಮತ ಸೆಳೆಯುವ ಪ್ರಯತ್ನವನ್ನು ಬಸವರಾಜ ಬೊಮ್ಮಾಯಿ ಮಾಡಿದರು. ಜೆಡಿಎಸ್ ವಿರುದ್ಧ ಎಲ್ಲಿಯೂ ಮಾತನಾಡದ ಬೊಮ್ಮಾಯಿ ಅವರು, ಕೇವಲ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವುದು ಗಮನ ಸೆಳೆದಿದೆ. ಇನ್ನು ಸಂಸದ ಸಿದ್ದೇಶ್ವರ್ ಅವರ ಮಾತು ಸಹ ಸಾಕಷ್ಟು ಚರ್ಚೆಗೆ ಕಾರಣವಾಗುವಂತಿದೆ. ಬಿಜೆಪಿಗೆ ಸ್ಪಷ್ಟ ಬಹುಮತ ಯಾವತ್ತೂ ಬಂದಿಲ್ಲ. ಎಲ್ಲರೂ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದಿದ್ದರು.
ಗೊಂದಲ, ಪ್ರತಿಷ್ಠೆ ಬಿಟ್ಟು ಬಿಜೆಪಿ ಅಧಿಕಾರಕ್ಕೆ ತರಬೇಕು ಅಂತಾ ಹೇಳಿರುವುದು ಕೂಡ ಗಮನಾರ್ಹವಾಗಿದೆ. ಇದಕ್ಕೆ ಟಿಕೆಟ್ಗೆ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿರುವುದೇ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ ಒಂದೆಡೆ ಮತಗಳ ಸೆಳೆಯುವಿಕೆ, ಮತ್ತೊಂದೆಡೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶಾಸಕರನ್ನು ಮತ್ತೆ ಭಾರಿ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಿ ಎಂದರು. ಮತ್ತೊಂದೆಡೆ ಯಾರು ಅಭ್ಯರ್ಥಿ ಎಂದು ಹೇಳದಿರುವುದನ್ನು ನೋಡಿದರೆ ಬಿಜೆಪಿಯ ಚುನಾವಣಾ ಲೆಕ್ಕಾಚಾರ ಯಾವ ರೀತಿ ಅನ್ನುವುದನ್ನು ಕಾದುನೋಡಬೇಕಿದೆ.