ದಾವಣಗೆರೆ ಮೇಯರ್ ಚುನಾವಣೆ; ಯಾರಿಗೆ ಗದ್ದುಗೆ?
ದಾವಣಗೆರೆ, ಫೆಬ್ರವರಿ 4; ದಾವಣಗೆರೆ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದೆ. ಫೆಬ್ರವರಿ 24 ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ.
ದಾವಣಗೆರೆಯ ಮಹಾನಗರ ಪಾಲಿಕೆ ಒಂದು ವರ್ಷದ ಮೇಯರ್ ಅವಧಿ ಮುಗಿದಿದೆ. ಎರಡನೇ ಅವಧಿಗೆ ಈಗಾಗಲೇ ಮೀಸಲು ಪ್ರಕಟವಾಗಿದೆ. ದಾವಣಗೆರೆ ಹೇಳಿ ಕೇಳಿ ಸ್ಮಾರ್ಟ್ ಸಿಟಿ, ಹೀಗಾಗಿಯೇ ಪಾಲಿಕೆ ಗದ್ದುಗೆ ಹಿಡಿಯಲು ಪ್ರತಿ ವರ್ಷ ಪೈಪೋಟಿ ಜೋರಾಗಿರುತ್ತದೆ.
ಸಮಬಲದ ಸದಸ್ಯರ ಸಂಖ್ಯೆ ಹೊಂದಿರುವ ಕಾಂಗ್ರೆಸ್, ಬಿಜೆಪಿ ಅಧಿಕಾರ ಪಡೆಯಲು ಹಲವು ತಂತ್ರಗಳನ್ನು ಮಾಡುತ್ತಿವೆ. ಈ ಭಾರಿಯೂ ಆಡಳಿತ ನಡೆಸಲು ಎರಡು ವಾರ ಮುಂಚೆಯೇ ಕಿತ್ತಾಟ ಶುರುವಾಗಿದೆ. ಕಳೆದ ಬಾರಿ ಪಕ್ಷೇತರ ಸದಸ್ಯರ ಸಹಾಯದಿಂದ ಬಿಜೆಪಿ ಅಧಿಕಾರ ಪಡೆದಿತ್ತು.
ಎರಡನೇ ಅವಧಿಗೆ ಮೇಯರ್ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದೆ. ಈಗಲೂ ಬಿಜೆಪಿ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಎಂಎಲ್ಸಿಗಳನ್ನು ಮತಪಟ್ಟಿಗೆ ಸೇರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ, ಪ್ರತಿಭಟನೆ ನಡೆಸಿದೆ.

ಸಮಬಲತಂದ ಜಟಾಪಟಿ
ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ ಸಾಧಿಸಿರುವುದು ಪ್ರತಿವರ್ಷ ಮೇಯರ್ ಪಟ್ಟದ ಕಿತ್ತಾಟಕ್ಕೆ ಮುನ್ನುಡಿಯಾಗಿದೆ. 2019 ನವೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 22, ಬಿಜೆಪಿ 17, ಜೆಡಿಎಸ್ 1, ಪಕ್ಷೇತರ 5 ಮಂದಿ ಗೆದ್ದಿದ್ದಾರೆ. ಕಳೆದ ಮೇಯರ್ ಚುನಾವಣೆಯಲ್ಲಿ ನಾಲ್ವರು ಪಕ್ಷೇತರರ ಬೆಂಬಲ ಪಡೆದು ಬಿಜೆಪಿ 21 ಸದಸ್ಯ ಬಲದಿಂದ, ಹೊರಗಿನ ಎಂಎಲ್ಸಿಗಳ ಹೆಸರನ್ನು ಮತಪಟ್ಟಿಗೆ ಸೇರಿಸಿತ್ತು, ಕಾಂಗ್ರೆಸ್ನ ಮೂರು ಜನ ಸದಸ್ಯರು ಗೈರಾದ ಹಿನ್ನಲೆಯಲ್ಲಿ ಮೇಯರ್ ಪಟ್ಟ ಬಿಜೆಪಿಗೆ ಸಿಕ್ಕಿತ್ತು.

ಮತ್ತೆ ಎಂಎಲ್ಸಿ ಪಟ್ಟಿ ವಿವಾದ
ಈಗ ಎರಡನೇ ಅವಧಿಗೆ ಮೇಯರ್ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದ್ದು, ಈಗಲೂ ಕೂಡ ಬಿಜೆಪಿ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟಿದೆ. ಮತ್ತೆ ಬೇರೆ ಜಿಲ್ಲೆಯ ಎಂಎಲ್ಸಿಗಳನ್ನು ಮತಪಟ್ಟಿಗೆ ಸೇರ್ಪಡೆ ಮಾಡಲು ಮುಂದಾಗಿದ್ದು, ಸಚಿವ ಆರ್. ಶಂಕರ್, ಚಿದಾನಂದಗೌಡರನ್ನು ಸೇರ್ಪಡೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಬಿಜೆಪಿ ಅಧಿಕಾರದ ಚುಕ್ಕಣಿ ಹಿಡಿಯಲು ಮತ್ತೆ ವಾಮಾಮಾರ್ಗ ಹಿಡಿಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ ಮತ್ತು ಪಾಲಿಕೆ ಒಳಗೆ ಈ ಕುರಿತು ದೊಡ್ಡ ಹೈಡ್ರಾಮವನ್ನೇ ಮಾಡಿದೆ.

ಕಾಂಗ್ರೆಸ್ ಆರೋಪವೇನು?
ಬಿಜೆಪಿ ಹಿಂಬಾಗಿಲಿಂದ ಅಧಿಕಾರ ಹಿಡಿಯಲು ಹೊರಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ದಾವಣಗೆರೆ ನಗರದಲ್ಲಿ ವಾಸವೇ ಇಲ್ಲದ ಸಚಿವ ಆರ್. ಶಂಕರ್, ಚಿದಾನಂದಗೌಡ ಅವರ ಹೆಸರನ್ನು ಮತದಾರರಪಟ್ಟಿಗೆ ಕಾನೂನು ಬಾಹಿರವಾಗಿ ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿದೆ. ಕಾಂಗ್ರೆಸ್ ಪಾಲಿಕೆ ಸದಸ್ಯರು ಸಚಿವ ಆರ್. ಶಂಕರ್ ನೀಡಿದ್ದ ವಿಳಾಸಕ್ಕೆ ಹೋಗಿ ನೋಡಿದರೆ ಅಲ್ಲಿ ಸಚಿವರೇ ಇಲ್ಲ. ಇನ್ನು ಅವರಿಗೆ ಕರೆ ಮಾಡಿ ಕೇಳಿದರೆ, "ಇಲ್ಲ ನನ್ನನ್ನು ಮತದಾರರ ಪಟ್ಟಿಗೆ ಸೇರಿಸಿರುವ ವಿಚಾರ ಗೊತ್ತಿಲ್ಲ. ನಾನು ಅಧಿವೇಶನದಲ್ಲಿದ್ದೇನೆ ಎಂದು ಕರೆ ಕಟ್ ಮಾಡಿದ್ದಾರೆ. ಆದರೆ, ಮನೆ ಮಾಲೀಕರು ಮಾತ್ರ ಅವರು ಇಲ್ಲಿ ಬಂದು ಮನೆ ನೋಡಿಕೊಂಡು ಅಗ್ರಿಮೆಂಟ್ ಮಾಡಿಕೊಂಡು ಹೋಗಿದ್ದಾರೆ. ಇದೇ ತಿಂಗಳು ಮನೆಗೆ ಬಾಡಿಗೆಗೆ ಬರ್ತಾರೆ ಎಂದು ಹೇಳುತ್ತಿದ್ದಾರೆ.
Recommended Video

ಎಷ್ಟು ಮಂದಿ ಮತದಾರರು?
ದಾವಣಗೆರೆ ಮಹಾನಗರ ಪಾಲಿಕೆಯ 45 ಸದಸ್ಯರಲ್ಲಿ 20ನೇ ವಾರ್ಡ್ನ ಯಶೋಧಾ ಉಮೇಶ್ ರಾಜೀನಾಮೆ ಸಲ್ಲಿಸಿದ್ದಾರೆ. 44 ಮಂದಿ ಸದಸ್ಯರಿದ್ದು, ಇವರ ಜೊತೆ ಸಂಸದರು, ಶಾಸಕರು ಮತ್ತು ಎರಡೂ ಪಕ್ಷಗಳಿಗೆ ಸೇರಿಸಿರುವ ಎಂಎಲ್ಸಿಗಳು ಸೇರಿ 58 ಜನರು ಮತದಾನ ಮಾಡಲಿದ್ದಾರೆ.
ನೂತನ ಸಚಿವರು ಹಾಗೂ ಎಂಎಲ್ಸಿಗಳ ಹೆಸರು ಮತಪಟ್ಟಿಗೆ ಸೇರಿದೆ. ಇವರಿಗೆ ಮತದಾನದ ಹಕ್ಕು ಸಿಗುತ್ತದೆಯೇ? ಎಂದು ಕಾದು ನೋಡಬೇಕು.












Click it and Unblock the Notifications