ಉದ್ಧವ್ ಠಾಕ್ರೆ ಹೇಳಿಕೆ ಅವಿವೇಕಿತನದ್ದು: ಡಿಸಿಎಂ ಲಕ್ಷ್ಮಣ ಸವದಿ
ದಾವಣಗೆರೆ, ಜನವರಿ 18: " ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ" ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಹೇಳಿದ್ದಾರೆ. ಕರ್ನಾಟಕದಲ್ಲಿ ಈ ಹೇಳಿಕೆ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಕನ್ನಡ ಪರ ಸಂಘಟನೆಗಳು ಆಕ್ರೋಶವನ್ನು ವ್ಯಕ್ತಪಡಿಸುತ್ತಿವೆ.
ದಾವಣಗೆರೆಯಲ್ಲಿ ಸೋಮವಾರ ಮಾತನಾಡಿದ ಉಪ ಮಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ, "ಮಹಾರಾಷ್ಟ್ರ ಸಿಎಂ ಹೇಳಿಕೆ ಅವಿವೇಕಿತನದ್ದು. ಸಿಎಂ ಏನಾದರೂ ಹೇಳುವಾಗ ಎಚ್ಚರಿಕೆ ಇರಬೇಕು. ಸಾವಿರ ಜನ ಸಿಎಂ ಬಂದರೂ ಬೆಳಗಾವಿ ಕರ್ನಾಟಕದಲ್ಲೇ ಇರುತ್ತದೆ" ಎಂದರು.
"ಬೆಳಗಾವಿ, ನಿಪ್ಪಾಣಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಯಾವುದೇ ಕಾರಣಕ್ಕೂ ಅದು ಮಹಾರಾಷ್ಟ್ರಕ್ಕೆ ಸೇರಲು ಸಾಧ್ಯವಿಲ್ಲ" ಎಂದು ಹೇಳಿದರು.

ಪಕ್ಷದ ಚೌಕಟ್ಟಿನಲ್ಲಿ ಮಾತನಾಡಲಿ; "ಹಿರಿಯರು ಸಚಿವ ಸ್ಥಾನ ತ್ಯಾಗ ಮಾಡಬೇಕು" ಎಂಬ ರೇಣುಕಾಚಾರ್ಯ ಹೇಳಿಕೆಗೆ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದರು. "ಅದು ಅವರ ವೈಯುಕ್ತಿಕ ಅಭಿಪ್ರಾಯ. ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ" ಎಂದರು.
"ಕೇಳುವುದನ್ನು ಪಕ್ಷದ ಚೌಕಟ್ಟಿನಲ್ಲಿ ಕೇಳಲಿ. ರಾಜ್ಯಾಧ್ಯಕ್ಷರ ಮೂಲಕ ಅಭಿಪ್ರಾಯಗಳು ಬರಲಿ. ಸ್ವಂತ ಬಲದ ಮೇಲೆ ಪಕ್ಷ ಅಧಿಕಾರಕ್ಕೆ ಬಂದಿಲ್ಲ, ಸಮ್ಮಿಶ್ರ ಸರ್ಕಾರದಿಂದ ರಾಜೀನಾಮೆ ನೀಡಿದವರಿಂದ ಅಧಿಕಾರಕ್ಕೆ ಬಂತು" ಎಂದು ಉಪಮುಖ್ಯಮಂತ್ರಿಗಳು ವಿವರಣೆ ನೀಡಿದರು.
"ಭರವಸೆ ನೀಡಿದಂತೆ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಪಕ್ಷದ ಚೌಕಟ್ಟಿನಲ್ಲಿ ಈ ಕಾರ್ಯ ನಡೆದಿದೆ. ಮುಂದಿನ ದಿನಗಳಲ್ಲಿ ಪ್ರದೇಶವಾರು ಸಚಿವ ಸ್ಥಾನದ ಚಿಂತನೆ ನಡೆಯಲಿದೆ" ಎಂದು ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.












Click it and Unblock the Notifications