ಚುನಾವಣೆಗಾಗಿ ಡ್ರಾಮ ಮಾಡಲು ಹೊರಟಿದ್ದಾರೆ: ಕಾಂಗ್ರೆಸ್ ವಿರುದ್ಧ M.P. ರೇಣುಕಾಚಾರ್ಯ ಆಕ್ರೋಶ
ಹೊನ್ನಾಳಿಯಲ್ಲಿ ಮಾಜಿ ಸಚಿವ ಶಾಂತನಗೌಡರ ಹರಸರೇಳದೇ, ಅವರ ವಿರುದ್ಧ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದೇಕೆ ಎನ್ನುವ ಮಾಹಿತಿ ಇಲ್ಲಿದೆ.
ದಾವಣಗೆರೆ, ಜನವರಿ, 31: ಹೊನ್ನಾಳಿ ತಾಲೂಕಿನ ಚೀಲೂರು ಗ್ರಾಮದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ವೇದಿಕೆಯಿಂದ ನನ್ನನ್ನು ಯಾರೂ ಕೆಳಗಿಳಿಸಿಲ್ಲ. ಆದರೆ ರಾಜಕೀಯ ವಿರೋಧಿಗಳು ಅಪಪ್ರಚಾರ ನಡೆಸುತ್ತಿದ್ದಾರೆ. ಚುನಾವಣೆ ಬಂದಿದೆ ಅಂತಾ ಡ್ರಾಮಾ ಮಾಡಲು ಹೊರಟಲು ಹೊರಟಿದ್ದು, ಜನರು ಇದನ್ನು ಒಪ್ಪುವುದಿಲ್ಲ. ಕ್ಷೇತ್ರದ ಜನರು ನಮ್ಮ ಜೊತೆಗಿದ್ದಾರೆ. ಸತ್ಯಾಸತ್ಯತೆ ಕಾರ್ಯಕ್ರಮದಲ್ಲಿದ್ದವರಿಗೆ ಗೊತ್ತು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಹೊನ್ನಾಳಿಯ ಹಿರೇಕಲ್ಮಠದ ತನ್ನ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿತ್ಯವೂ 20 ರಿಂದ 25 ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ದಾವಣಗೆರೆಯಿಂದ ಬಂದು ದೊಡ್ಡೇರಹಳ್ಳಿ, ಮಲ್ಲಿಗೇನಹಳ್ಳಿ ಶಾಲಾ ವಾರ್ಷಿಕೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ಚೀಲೂರು ಗ್ರಾಮಕ್ಕೆ ಹೋಗಿದ್ದೆ. ಆಗ ಜನರು ಪ್ರೀತಿಯಿಂದ ಅದ್ಧೂರಿ ಸ್ವಾಗತ ಕೋರಿದರು. ಜನರು ಬರಮಾಡಿಕೊಂಡ ವಿಡಿಯೋದಲ್ಲಿ ಸುಳ್ಳಿದೆಯಾ? ಎಂದು ಪ್ರಶ್ನಿಸಿದರು.
ನಾನು ದುಡ್ಡು ಪಡೆದಿದ್ದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಬೈರತಿ ಬಸವರಾಜ್
ನಾನು ಬರುವುದು ತಡವಾದರೆ ಕಾರ್ಯಕ್ರಮ ಮುಂದುವರೆಸಿ ಎಂಬುದಾಗಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಿಗೆ ಹೇಳಿದ್ದೆ. ಆದರೂ ಕಾದಿದ್ದಾರೆ. ಮಾಜಿ ಶಾಸಕರ ಪುತ್ರ ಯಾರಿಗಾಗಿಯೋ ಕಾಯುವುದು ಬೇಡ. ಕಾರ್ಯಕ್ರಮ ಶುರು ಮಾಡಿ ಎಂದಿದ್ದಾರೆ. ಹಾಗೆಯೇ ಶಿಷ್ಟಾಚಾರದ ಪ್ರಕಾರ ಶಾಸಕರು ಬರಬೇಕು ಎಂದಿದ್ದಾರೆ. ಹಾಗಾಗಿ, ಸ್ವಲ್ಪ ಹೊತ್ತು ನನಗಾಗಿ ಕಾದಿದ್ದರು. ವೇದಿಕೆಯಲ್ಲಿ ನಾನು ರಾಜಕೀಯದ ಬಗ್ಗೆ ಮಾತನಾಡಿಯೇ ಇಲ್ಲ. ಕೆಲವರು ಅಪಪ್ರಚಾರ ನಡೆಸಿದ್ದಾರೆ. ಶಾಲೆ, ಕ್ರೀಡೆ, ಪ್ರತಿಭಾ ಪುರಸ್ಕಾರದ ಕುರಿತಾಗಿ ಭಾಷಣ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ವೇದಿಕೆಯಿಂದ ಕೆಳಗಿಳಿಸಿದರೆಂದು ಸುಳ್ಳು ಪ್ರಚಾರ
ಕೆಲವರು ಮಾಜಿ ಶಾಸಕರ ಪುತ್ರ ನಿಮ್ಮ ಬಗ್ಗೆ ಮಾತನಾಡಿದ್ದಾರೆ. ನೀವೂ ಮಾತನಾಡಿ ಅಂದರು. ಶಾಲಾ ಕಾರ್ಯಕ್ರಮ ಆಗಿರುವ ಕಾರಣ ನಾನು ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದೆ. ಚುನಾವಣೆ ಬಂದಿದೆ ಎಂದು ರಾಜಕಾರಣ ಮಾಡಲು ಹೊರಟಿದ್ದಾರೆ. ನನ್ನನ್ನು ವೇದಿಕೆಯಿಂದ ಕೆಳಗಿಳಿಸಿದರು ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ. ಈಗ ನನ್ನ ಬಗ್ಗೆ ಟೀಕೆ ಮಾಡುವವರು ಇಷ್ಟು ದಿನ ಎಲ್ಲಿ ಹೋಗಿದ್ದರು. ನಾನು ರಾಜಕೀಯ ವೇದಿಕೆಯಲ್ಲಿ ಸರಿಯಾದ ಉತ್ತರ ನೀಡುತ್ತೇನೆ. ನನ್ನ ಹೆಸರು ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದೇನೆ. ವೇದಿಕೆಯಿಂದ ಕೆಳಗಿಳಿಸಿದ ವಿಡಿಯೋ ತೋರಿಸಿದ್ದಾರಾ? ಸುಳ್ಳು ಹೇಳಿದರೆ ಜನರು ನಂಬುವುದಿಲ್ಲ ಎಂದು ಹೇಳಿದರು.
ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದೇನೆ
ಮಾಜಿ ಶಾಸಕರ ನಾಲ್ವರ ಹಿಂಬಾಲಕರು ಸುಳ್ಳು ಹೇಳಿದ್ದಾರೆ. ಅವರು ಮೈಕ್ ಕಸಿದುಕೊಂಡು ಕೆಳಗಿಳಿಸಿದ್ದಾರೆ ಎನ್ನುವ ವಿಡಿಯೋ ಕೊಟ್ಟಿದ್ದಾರಾ? ಸರ್ಕಾರದ ಸಾಧನೆ ಮತ್ತು ನಾನು ಮಾಡಿದ ಕೆಲಸಗಳ ಕುರಿತಾಗಿ ಮಾತನಾಡುತ್ತೇನೆ. ಎರಡು ಬಾರಿ ಶಾಸಕರಾಗಿದ್ದರೂ ಯಾಕೆ ಅಭಿವೃದ್ಧಿ ಮಾಡಲಿಲ್ಲ? ಜನರ ಸಂಕಷ್ಟ ಕೇಳಲಿಲ್ಲ. ಚುನಾವಣೆ ಹತ್ತಿರವಾಗುತ್ತಿದೆ ಎನ್ನುವ ಕಾರಣಕ್ಕೆ ಈಗ ಬಂದಿದ್ದು, ವಿನಾಕಾರಣ ನನ್ನ ಬಗ್ಗೆ ಆರೋಪ ಮಾಡಿದ್ದಾರೆ. ಸೋಲಿನ ಭೀತಿ ಅವರಲ್ಲಿ ಕಾಡುತ್ತಿದೆ. ಜನರ ಮಧ್ಯೆ ಇಷ್ಟು ದಿನ ಇರಲಿಲ್ಲ, ಕೋವಿಡ್ ಸೋಂಕಿನಿಂದ ಜನರು ತತ್ತರಿಸಿ ಹೋದಾಗ ಮನೆಯಲ್ಲಿ ಮಲಗಿದ್ದಾರೆ. ನಾನು ಹಗಲಿರುಳು ಕ್ಷೇತ್ರದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದೇನೆ. ಅವರಿಗಾಗಿ ಹಗಲಿರುಳು ಓಡಾಡಿದ್ದೇನೆ. ಎಲ್ಲಾ ರೀತಿಯ ನೆರವು ನೀಡಿದ್ದೇನೆ. ಕೆಲಸ ಮಾಡಿದ ತೃಪ್ತಿ ನನಗಿದೆ ಎಂದರು.
ಎಲ್ಲಾ ಸಮಾಜದವರು ನನ್ನೊಟ್ಟಿಗೆ ಇದ್ದಾರೆ
ಈಗ ಜಾತಿ ರಾಜಕಾರಣ ಮಾಡಲು ಹೊರಟಿದ್ದಾರೆ. ನನ್ನೊಟ್ಟಿಗೆ ವೀರಶೈವ ಲಿಂಗಾಯತರು, ಎಸ್ಸಿ, ಎಸ್ಟಿಯವರು ಸೇರಿದಂತೆ ಎಲ್ಲಾ ಸಮಾಜದವರು ಇದ್ದಾರೆ. ನಾನು ಸಚಿವನಾಗಿದ್ದಾಗಲೂ ಕ್ಷೇತ್ರ ಬಿಟ್ಟಿಲ್ಲ. ವಾರದಲ್ಲಿ ಮೂರು ದಿನ ಕ್ಷೇತ್ರದಲ್ಲೇ ಇರುತ್ತಿದ್ದೆ. 2018ರಿಂದ ಇಲ್ಲಿಯವರೆಗೆ ವಾರದಲ್ಲಿ ಮೂರು ದಿನ ಇಲ್ಲೇ ಇರುತ್ತೇನೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೊನ್ನಾಳಿ - ನ್ಯಾಮತಿ ಅವಳಿ ಕ್ಷೇತ್ರದಿಂದ ಸ್ಪರ್ಧಿಸಿ 25 ರಿಂದ 30 ಸಾವಿರ ಮತಗಳ ಅಂತರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ. ಇದು ರೇಣುಕಾಚಾರ್ಯ ಗೆಲುವು ಅಲ್ಲ, ಈ ಕ್ಷೇತ್ರದ ಜನರ ಗೆಲುವು. ಗೆಲ್ಲಿಸಲೇಬೇಕೆಂದು ಎಲ್ಲಾ ವರ್ಗದ ಜನರು ತೀರ್ಮಾನ ಮಾಡಿದ್ದಾರೆ. ಶಾಸಕರಾಗಿ ನಾಲ್ಕನೇ ಬಾರಿ ನನ್ನನ್ನು ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಎರಡು ಬಾರಿ ಸೋತಿದ್ದು, ಸೋಲಿನಿಂದ ಕಂಗೆಟ್ಟು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಂತನಗೌಡರ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು.
ನಾನು ಪಕ್ಷಕ್ಕಾಗಿ ದುಡಿಯುತ್ತೇನೆ
ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಸ್ವಾಗತಿಸುತ್ತೇನೆ. ಪಕ್ಷದ ವರಿಷ್ಟರ ತೀರ್ಮಾನಕ್ಕೆ ತಲೆಬಾಗುತ್ತೇನೆ. ಟಿಕೆಟ್ ಯಾರಿಗಾರದರೂ ಕೊಡಲಿ, ನಾನು ಪಕ್ಷಕ್ಕಾಗಿ ದುಡಿಯುತ್ತೇನೆ. ನಾನು ಹೇಳುವುದಕ್ಕಿಂತ ಜನರನ್ನು ಕೇಳಿ. ಟಿಕೆಟ್ ಸಿಗಲ್ಲ ಅಂದರೆ ಬೇಡ ಬಿಡಿ. ರೇಣುಕಾಚಾರ್ಯರಿಗೆ ಈ ಬಾರಿ ಟಿಕೆಟ್ ಇಲ್ಲ ಎಂದು ಸುದ್ದಿ ಮಾಡಿದರೂ ನಾನು ಸ್ವಾಗತಿಸುತ್ತೇನೆ. ಗುಜರಾತ್, ಕರ್ನಾಟಕ., ಉತ್ತರ ಪ್ರದೇಶದ ಮಾದರಿಯಾದರೂ ಸರಿಯೇ. ಪಕ್ಷದ ವರಿಷ್ಠರು ಈ ಬಗ್ಗೆ ನಿರ್ಧರಿಸುತ್ತಾರೆ. ನನ್ನನ್ನು ಸಿಂಹ, ಹೋರಿ, ಗೂಳಿ ಅಂತಾರೆ. ಮತದಾರರೇ ನನ್ನ ಮಾಲೀಕರು. ನಾನು ಸೇವಕನಷ್ಟೇ ಎಂದು ಹೇಳಿದರು