ಅನಂತಕುಮಾರ್ ಹೆಗಡೆ ಸಂಸದ ಆಗಲು ಸಹ ನಾಲಾಯಕ್: ಸಿದ್ದರಾಮಯ್ಯ
ದಾವಣಗೆರೆ, ನವೆಂಬರ್ 18: "ಅನಂತಕುಮಾರ್ ಹೆಗಡೆ ಸಚಿವರಾಗುವುದಕ್ಕಲ್ಲ, ಸಂಸದ ಆಗಲು ಸಹ ನಾಲಾಯಕ್" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
"ಅಧಿಕಾರಕ್ಕಾಗಿ ಸಿದ್ದರಾಮಯ್ಯ ಬೂಟು ನೆಕ್ಕಲು ಸಿದ್ಧವಾಗಿದ್ದಾರೆ" ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಶುಕ್ರವಾರ ಚನ್ನಮ್ಮನ ಕಿತ್ತೂರಿನಲ್ಲಿ ಟೀಕಿಸಿದ್ದರು. ಇದಕ್ಕೆ ಶನಿವಾರ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅನಂತಕುಮಾರ್ ನಾಲಗೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

"ನಾಲ್ಕೂವರೆ ವರ್ಷದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಒಂದೇ ಒಂದು ಹಗರಣವನ್ನು ದಾಖಲೆ ಸಮೇತ ಯಾರಾದರೂ ಸಾಬೀತು ಪಡಿಸಿದರೆ ಇನ್ನು ಮುಂದೆ ನಾನು ರಾಜಕೀಯದ ಬಗ್ಗೆಯೇ ಮಾತನಾಡುವುದಿಲ್ಲ" ಎಂದು ಪಂಥಾಹ್ವಾನ ನೀಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.
ಕರ್ನಾಟಕ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವ ಕ್ರಮದ ಬಗ್ಗೆ ಕೂಡ ಅನಂತಕುಮಾರ್ ಹೆಗಡೆ ಕಟುವಾದ ಶಬ್ದಗಳಿಂದ ಟೀಕಿಸಿದ್ದರು. ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿದರೆ ವೇದಿಕೆಯಲ್ಲೇ ಟಿಪ್ಪು ವಿರುದ್ಧ ಧಿಕ್ಕಾರ ಕೂಗುವುದಾಗಿ ಹೇಳಿದ್ದರು.
ಆ ನಂತರ ಬಿಜೆಪಿಯ ಕೆಲವು ಸಂಸದರ ಅದೇ ರೀತಿ ತಮ್ಮ ಹೆಸರನ್ನು ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಹಾಕಬಾರದು ಎಂದಿದ್ದರು. ಕೊನೆಗೆ ರಾಜ್ಯ ಸರಕಾರವೇ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿ, ಒಪ್ಪಿಗೆ ಇಲ್ಲದ ಜನಪ್ರತಿನಿಧಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಬಳಸದಂತೆ ತಿಳಿಸಿತ್ತು.












Click it and Unblock the Notifications