40 ವರ್ಷಗಳ ಬಳಿಕ ಭರ್ತಿಯಾದ ಅಣಜಿ ಕೆರೆ: ಹಲವು ಜಲಮೂಲಗಳಿಗೆ ಆಸರೆಯಾದ ಕೆರೆ
ದಾವಣಗೆರೆ, ಸೆಪ್ಟೆಂಬರ್ 18: ಈ ಬಾರಿ ದಾವಣಗೆರೆಯಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು, ಕೆರೆ, ಹಳ್ಳಗಳು ತುಂಬಿ ಹರಿಯುತ್ತಿವೆ. ಜಗಳೂರು ಸಮೀಪದಲ್ಲಿ ಬರುವ ಅಣಜಿ ಕೆರೆ ಸುಮಾರು 40 ವರ್ಷಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ತುಂಬಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ. ನಾಲ್ಕು ದಶಕಗಳ ಬಳಿಕ ಈ ಕೆರೆಯ ಕೋಡಿ ಬಿದ್ದಿರುವುದು ಅಲ್ಲಿನ ಜನರಲ್ಲಿ ಸಂತೋಷ ಮೂಡಿಸಿದೆ.
ಅಣಜಿ ಕೆರೆಯು ದಾವಣಗೆರೆ ಜಿಲ್ಲೆಯಲ್ಲಿನ ದೊಡ್ಡ ಕೆರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಈ ಕೆರೆಗೆ ಐತಿಹಾಸಿಕ ಹಿನ್ನೆಲೆಯೂ ಇದೆ. ಕೆರೆ ಹೊನ್ನಮ್ಮ ಎಂದು ಕರೆಯಲ್ಪಡುವ ಈ ಕೆರೆಯ ವಿಸ್ತೀರ್ಣ ಬರೋಬ್ಬರಿ 800 ಎಕರೆ ಇದೆ. 1980ರಲ್ಲಿ ಅಣಜಿ ಕೆರೆ ತುಂಬಿ ಕೋಡಿ ಬಿದ್ದಿತ್ತು. ಬಳಿಕ ಕೆರೆ ತುಂಬಲೇ ಇಲ್ಲ. ಇದನ್ನು ನೋಡುವ ಭಾಗ್ಯವೂ ಜನರಿಗೆ ಸಿಗಲಿಲ್ಲ. ಮಳೆ ಆದರೂ ಅಣಜಿ ಕೆರೆ ಮಾತ್ರ ಪೂರ್ಣ ಪ್ರಮಾಣದಲ್ಲಿ ತುಂಬಲಿಲ್ಲ. ಇದರಿಂದ ಅಲ್ಲಿನ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಈಗ ಕೆರೆಗೆ ಅಪಾರ ಪ್ರಮಾಣದಲ್ಲಿ ಮಳೆ ನೀರು ಬಂದಿದ್ದು, ಕೋಡಿ ಬಿದ್ದು ರಸ್ತೆ ಮೇಲೆಲ್ಲಾ ನೀರು ಹರಿಯುತ್ತಿದೆ. ಇದನ್ನು ನೋಡಲು ಜನರು ಸಹ ಮುಗಿಬಿದ್ದು ಬರುತ್ತಿದ್ದಾರೆ.
ಅಕ್ಕದಲ್ಲಿ ಮಳೆಯುಂಟು, ಪಕ್ಕದಲ್ಲೇ ಬಿಸಿಲುಂಟು; ದಾವಣಗೆರೆಯಲ್ಲೊಂದು ವಿಸ್ಮಯದ ದೃಶ್ಯ!
40 ವರ್ಷಗಳ ಬಳಿಕ ಭರ್ತಿಯಾದ ಅಣಜಿ ಕೆರೆ
ಕೆರೆಯ ಪೂರ್ವಭಾಗದಲ್ಲಿ ಜಗಳೂರು ರಸ್ತೆಗೆ ಹೊಂದಿಕೊಂಡಂತಿರುವ ಕೋಡಿಯಲ್ಲಿನ ಹರಿವನ್ನು ಸುತ್ತಮುತ್ತಲಿನ ಗ್ರಾಮಗಳ ಜನರು, ದಾವಣಗೆರೆ - ಜಗಳೂರು ಮಾರ್ಗವಾಗಿ ತೆರಳುವ ಪ್ರಯಾಣಿಕರು ವೀಕ್ಷಿಸಲು ಬರುತ್ತಿದ್ದಾರೆ. ಅಣಜಿ ಕೆರೆಯು ಸುತ್ತಮುತ್ತಲಿನ ಗ್ರಾಮಗಳ ನೀರಿನ ಸೆಲೆ ಆಗಿದೆ. ಕೆರೆಯ ನೀರನ್ನು ಆಧರಿಸಿ ಇಲ್ಲಿನ ರೈತರು ಸಾವಿರಾರು ಎಕರೆ ಪ್ರದೇಶಗಳಲ್ಲಿ ಅಡಿಕೆ, ಭತ್ತ, ಮೆಕ್ಕೆಜೋಳ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಈ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರದಿದ್ದರೆ ರೈತರು ಮತ್ತು ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ ಹಳ್ಳಕೊಳ್ಳಗಳು ತುಂಬಿ ಹೆಚ್ಚಿನ ನೀರು ಕೆರೆಗೆ ಬಂದು ಸಂಗವಾಗಿದೆ. ಇದರಿಂದಾಗಿ ಕೆರೆಯು ಉಕ್ಕಿ ಹರಿಯುತ್ತಿದೆ.
ಸಾವಿರಾರು ಎಕರೆ ಅಡಿಕೆ ತೋಟ ಜಲಾವೃತ; ಕಂಗಾಲಾದ ದಾವಣಗೆರೆ ಜಿಲ್ಲೆಯ ಅನ್ನದಾತರು!
ಹಲವು ಜಲಮೂಲಗಳಿಗೆ ಆಸರೆಯಾದ ಕೆರೆ
ಕಳೆದ ಐದು ವರ್ಷಗಳ ಹಿಂದೆ ಹರಿಹರ ತಾಲೂಕಿನ ರಾಜನಹಳ್ಳಿ ಬಳಿಯ ತುಂಗಭದ್ರಾ ನದಿಯಿಂದ 22 ಕೆರೆಗಳ ಏತ ನೀರಾವರಿ ಯೋಜನೆಯಡಿ ಪೈಪ್ಲೈನ್ ಮೂಲಕ ನೀರು ಹರಿಸಲಾಗಿತ್ತು. ಆದ ಕಾರಣ ನದಿ ನೀರು ಹಾಗೂ ಪ್ರಸ್ತುತ ಮಳೆಯ ಪರಿಣಾಮವಾಗಿ ಕೆರೆ ತುಂಬಿದೆ. ಈ ನೀರು ಜಗಳೂರು ತಾಲೂಕಿನ ತುಪ್ಪದಹಳ್ಳಿ ಕೆರೆಗೆ ಹರಿದು ಹೋಗುತ್ತದೆ. ಇದರಿಂದಾಗಿ ತುಪ್ಪದಹಳ್ಳಿ ಕೆರೆಯು ಸಹ ಉಕ್ಕಿ ಹರಿಯುತ್ತಿದೆ. ಹೆಚ್ಚುವರಿಯಾಗಿ ಬಂದಿರುವ ನೀರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲ್ವಿ ಜಲಾಶಯಕ್ಕೆ ಸೇರಲಿದೆ. ಮಾರ್ಗದ ಮಧ್ಯದಲ್ಲಿ ಬಸವನಕೋಟೆ ಸಮೀಪ ನಿರ್ಮಿಸಿರುವ ಒಂದು ಕಿಲೋ ಮೀಟರ್ಗೂ ಹೆಚ್ಚು ಹಿನ್ನೀರು ಸಂಗ್ರಹವಾಗುವ ಬೃಹತ್ ಚೆಕ್ ಡ್ಯಾಂ ಸೇರಿದಂತೆ ಸುಮಾರು ಹಳ್ಳಕೊಳ್ಳಗಳು ಹಾಗೂ ಕೆರೆಕಟ್ಟೆಗಳಿಗೆ ನೀರು ಹರಿದು ಹೋಗುತ್ತಿದ್ದು, ಇವುಗಳಿಗೂ ಕಳೆ ಬಂದಂತಾಗಿದೆ.
ಜೀವಭಯದಲ್ಲಿ ವಾಹನ ಸವಾರರು
ಕೆರೆಯ ಸುತ್ತಮುತ್ತ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿಲ್ಲ. ಸುಮಾರು ಅರ್ಧ ಕಿಲೋ ಮೀಟರ್ ಅಂತರದ ಕೆರೆ ಏರಿಯ ರಸ್ತೆಯನ್ನು ಕೆಲ ತಿಂಗಳ ಹಿಂದೆಯಷ್ಟೇ ನಿರ್ಮಾಣ ಮಾಡಲಾಗಿತ್ತು. ಆದರೂ ಮೆಟ್ಲಿಂಗ್ ಸೇರಿದಂತೆ ಇತರೆ ಕಾಮಗಾರಿಯಿಂದಾಗಿ ನೂತನ ರಸ್ತೆಯನ್ನು ಹಳೆಯ ರಸ್ತೆಗಿಂತ ಎರಡು ಅಡಿಗಳಷ್ಟು ಎತ್ತರವಾಗಿ ನಿರ್ಮಿಸಲಾಗಿದೆ. ಇದು ಕೂಡ ಉಪಯೋಗ ಆಗಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಅಳವಡಿಸಲಾಗಿದ್ದ ತಡೆಗೋಡೆ ನೀರಿನಲ್ಲಿ ಮುಳುಗಿ ಹೋಗಿದೆ. ರಸ್ತೆ ಒಂದೆಡೆಯಲ್ಲಿ 100 ಅಡಿಗೂ ಹೆಚ್ಚು ಆಳವಿರುವುದರಿಂದ ಅಪಾಯ ಆಗುವ ಸಾಧ್ಯತೆ ಹೆಚ್ಚಿದೆ.
ಅಪಘಾತಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಿ
ಇದು ಜಗಳೂರು - ಮಲ್ಪೆ - ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಆಗಿರುವ ಕಾರಣದಿಂದಾಗಿ ನಿತ್ಯವೂ ಸಾವಿರಾರು ವಾಹನಗಳು, ಬೈಕ್ಗಳಲ್ಲಿ ಜನರ ಓಡಾಟ ಹೆಚ್ಚಾಗಿರುತ್ತದೆ. ಇಂತಹ ಅಪಾಯಕಾರಿ ಜಾಗದಲ್ಲಿ ಆತಂಕದಲ್ಲೇ ವಾಹನ ಚಲಾಯಿಸುವ ಸ್ಥಿತಿ ನಿರ್ಮಾಣ ಆಗಿದೆ. ಈ ಹಿಂದೆ ಹಲವು ಬಾರಿ ಇಲ್ಲಿ ಬಸ್ಗಳು ಉರುಳಿ ಅಪಘಾತ ಸಂಭವಿಸಿ, ಸಾವು ನೋವುಗಳು ಆಗಿರುವ ಉದಾಹರಣೆಗಳು ಇವೆ. ಈಗಲಾದರೂ ಜಿಲ್ಲಾಡಳಿತ, ರಾಜ್ಯ ಹೆದ್ದಾರಿ, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.