ಪೂಜಾರಿಯೇ ದೇವರು, ಭಕ್ತರೇ ಇಲ್ಲಿ ಪೂಜಾರಿಯ ದಾರಿಗೆ ಹಾಸು!
ದಾವಣಗೆರೆ, ಡಿಸೆಂಬರ್.22: ದಲಿತರು ಅಂದರೆ ಅಸ್ಪೃಶ್ಯರು, ತುಳಿತಕ್ಕೆ ಒಳಗಾದವರು ಅನ್ನುವ ಮಾತಿದೆ. ಆದರೆ ಹರಪ್ಪನಹಳ್ಳಿ ತಾಲ್ಲೂಕಿನ ಅರಸೀಕೆರೆಯಲ್ಲಿ ದಲಿತರೇ ಭಕ್ತರ ಪಾಲಿಗೆ ದೇವರ ಸಮಾನ. ದಲಿತ ಪೂಜಾರಿಯ ಪಾದಸ್ಪರ್ಶಕ್ಕಾಗಿ ಸಾವಿರಾರು ಭಕ್ತರು ಹಾತೊರೆಯುತ್ತಾರೆ.
ಇಲ್ಲಿ ಪೂಜಾರಿ ಭಕ್ತರ ಮೇಲೆ ನಡೆದುಕೊಂಡು ಹೋದರೆ, ಭಕ್ತರ ಇಷ್ಟಾರ್ಥಗಳು ಈಡೇರುತ್ತವೇ ಎಂಬುದು ಇಲ್ಲಿನ ನಂಬಿಕೆಯಾಗಿದೆ. ಶಕ್ತಿದೇವತೆ ದಂಡಿ ದುಗಮ್ಮ ದೇವಿಯ ಕಾರ್ತಿಕೋತ್ಸವದ ಅಂಗವಾಗಿ ಪ್ರತಿವರ್ಷ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ವೇಳೆ ದಲಿತ ಪೂಜಾರಿಗಳು ಹೀಗೆ ಭಕ್ತರ ಬೆನ್ನಮೇಲೆ ನಡೆಯೋ ಪದ್ಧತಿ ಮೊದಲಿನಿಂದಲೂ ಜಾರಿಯಲ್ಲಿದೆ.
ಇಲ್ಲಿ ದಲಿತ ಪೂಜಾರಿಗಳಿಗೆ ದೇವರ ಸ್ಥಾನ ನೀಡಲಾಗಿದ್ದು, ದೇವರ ಪಾದ ನೆಲಕ್ಕೆ ಸ್ಪರ್ಶ ಆಗಬಾರದು ಅಂತ ಜಾತ್ರೆಗೆ ಬಂದ ಸಾವಿರಾರು ಭಕ್ತರು ತಮ್ಮ ಬೆನ್ನನ್ನೇ ಹಾಸಿಗೆ ಮಾಡಿಕೊಳ್ಳುತ್ತಾರೆ. ಹೀಗೆ ಪೂಜಾರಿ ತಮ್ಮ ಬೆನ್ನಮೇಲೆ ನಡೆದರೆ ಒಳಿತಾಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.
ಶಾಸಕರು ಹಾಗೂ ಸಂಸದರು ಪ್ರಥಮ ಪೂಜೆ ಸಲ್ಲಿಸಿ ದಲಿತ ಪೂಜಾರಿಯ ಆಶೀರ್ವಾದ ಪಡೆಯುತ್ತಾರೆ. ನಂತರ ದಲಿತ ಪೂಜಾರಿಗಳು ಸುಮಾರು ಎರಡು ಕಿಲೋಮೀಟರ್ ದೂರ ಭಕ್ತರ ಬೆನ್ನಮೇಲೆ ನಡೆದುಕೊಂಡು ದೇವಸ್ಥಾನಕ್ಕೆ ಹೋಗುತ್ತಾರೆ.
ಆಧುನಿಕ ಕಾಲದಲ್ಲಿ ದೇವರು ಎನ್ನುವ ನಂಬಿಕೆ ಮಾಯವಾಗುತ್ತಿರುವಾಗ ಕಾಲದಲ್ಲಿ ಇಂತಹ ಆಚರಣೆ ಯುವ ಪೀಳಿಗೆಗೆ ಅದರ್ಶವಾಗಲಿದೆ. ಸರ್ವ ಧರ್ಮಗಳನ್ನು ಒಂದೇ ರೀತಿ ನೋಡುವಂತ ವಾತಾವರಣ ಸೃಷ್ಠಿಯಾಗಿದೆ. ದಲಿತ ವ್ಯಕ್ತಿಯೊಬ್ಬ ದೇವತೆಗೆ ಪೂಜಿ ಸಲ್ಲಿಸಿ ಆ ದೇವರನ್ನು ತಲೆ ಮೇಲೆ ಹೊತ್ತುಕೊಂಡು ಜನರ ಮೇಲೆ ನಡೆದರೆ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ನಾವೆಲ್ಲರೂ ಒಂದೇ ತಾಯಿ ಮಕ್ಕಳು, ನಮ್ಮಲ್ಲಿ ಯಾವುದೇ ಬೇಧಭಾವ ಇಲ್ಲ ಅನ್ನೋದಕ್ಕೆ ಈ ಆಚರಣೆಯೇ ಸಾಕ್ಷಿಯಾಗಿದೆ.
ರಾಜ್ಯದಲ್ಲಿ ದಂಡಿ ದುಗ್ಗಮ್ಮ ದೇವಿಗೆ ಮಾತ್ರ ದಲಿತ ಪೂಜಾರಿ ಇರೋದು ಇಲ್ಲಿನ ವಿಶೇಷ. ದಲಿತ ಪೂಜಾರಿ ಪಾದ ನಮಗೆ ಸ್ಪರ್ಶವಾದರೆ ನಾವೇ ಭಾಗ್ಯವಂತರು ಅನ್ನೋ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ.