2ಎ ಮೀಸಲಾತಿ; ಹೋರಾಟದ ಬಗ್ಗೆ ಬೆಂಗಳೂರಲ್ಲಿ ಜಂಟಿ ಅಧಿವೇಶನ
ದಾವಣಗೆರೆ, ಸೆಪ್ಟೆಂಬರ್ 30: "ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಈ ವರ್ಷದೊಳಗೆ ಸಿಗುವ ನಿರೀಕ್ಷೆ ಇದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಬೇಡಿಕೆ ಈಡೇರಿಸುವುದಾಗಿ ಹೇಳಿದ್ದಾರೆ. ನಾಳೆಯೊಳಗೆ ಮೀಸಲಾತಿ ನೀಡುವ ಬಗ್ಗೆ ಘೋಷಣೆ ಮಾಡಬೇಕು" ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಗುರುವಾರ ದಾವಣಗೆರೆ ನಗರದ ತ್ರಿಶೂಲ್ ಕಲಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, "ಸರ್ಕಾರ ತೀರ್ಮಾನ ಪ್ರಕಟಿಸದಿದ್ದರೆ ಅಕ್ಟೋಬರ್ 1ರಂದು ಬೆಂಗಳೂರಿನ ಭಾರತೀಯ ವಿದ್ಯಾ ಮಂದಿರದಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿರುವ ಸಮಾಜದವರ ಜಂಟಿ ಅಧಿವೇಶನ ಕರೆಯಲಾಗಿದ್ದು, ಮುಂದೆ ಏನು ಮಾಡಬೇಕು ಎಂಬ ಚರ್ಚೆ ನಡೆಸಿ ನಿರ್ಧಾರಕ್ಕೆ ಬರಲಾಗುವುದು" ಎಂದರು.
"ಪಂಚಮಸಾಲಿ, ಗೌಡ ಲಿಂಗಾಯತ, ಮಲೇಗೌಡ, ದೀಕ್ಷಾ ಲಿಂಗಾಯತರ ಪ್ರತಿಜ್ಞಾ ಪಂಚಾಯತ್ ಬೆಂಗಳೂರಿನಲ್ಲಿ ನಡೆಯಲಿದ್ದು, ದಾವಣಗೆರೆಯ ಕಾರ್ಯಕ್ರಮದ ಬಳಿಕ ಅಲ್ಲಿಗೆ ತೆರಳುತ್ತೇವೆ. ಬಸವರಾಜ ಬೊಮ್ಮಾಯಿಯವರು ನಿರಂತರವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಸಮಾಜದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸಿ. ಸಿ. ಪಾಟೀಲ್ ಜೊತೆಯೂ ಮಾತನಾಡಿದ್ದಾರೆ. ಅರವಿಂದ್ ಬೆಲ್ಲದ್ ಸೇರಿದಂತೆ ಸಮಾಜದ ಶಾಸಕರು ಹಾಗೂ ಸಚಿವರು ಮೀಸಲಾತಿ ದೊರಕಿಸಿಕೊಡಲು ಹೋರಾಟ ಮಾಡುತ್ತಿದ್ದಾರೆ. ಅಕ್ಟೋಬರ್ 23ರೊಳಗೆ ಮೀಸಲಾತಿ ಸಿಗುವ ವಿಶ್ವಾಸವಿದೆ" ಎಂದು ಹೇಳಿದರು.

"ಮುಖ್ಯಮಂತ್ರಿಯಾಗಿದ್ದಾಗ ಬಿ. ಎಸ್. ಯಡಿಯೂರಪ್ಪ ಅಧಿವೇಶನದಲ್ಲಿಯೇ ಪಂಚಮಸಾಲಿ ಸಮಾಜಕ್ಕೆ ಆರು ತಿಂಗಳೊಳಗೆ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಆದರೆ ಅದು ಈಡೇರಲಿಲ್ಲ. ಸೆಪ್ಟಂಬರ್ 15ಕ್ಕೆ ಅವರು ಕೊಟ್ಟಿದ್ದ ಗಡುವು ಮುಗಿದಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಹೋರಾಟಕ್ಕೆ ಇಳಿದಿದ್ದೇವೆ. ಅಧಿವೇಶನದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್ ಈ ಬಗ್ಗೆ ಪ್ರಸ್ತಾಪ ಮಾಡಿದ್ದು, ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ" ಎಂದು ತಿಳಿಸಿದರು.
"ಆದರೆ ಸ್ಪಷ್ಟ ಸಂದೇಶ ಬಂದಿಲ್ಲ. ಇದು ಬರುವ ನಿರೀಕ್ಷೆಯಲ್ಲಿದ್ದೇವೆ. ಮಾಜಿ ಮುಖ್ಯಮಂತ್ರಿ ಜೆ. ಎಚ್. ಪಟೇಲ್ರ ಜಯಂತಿ ನಾಳೆ ಇದೆ. ಈ ವೇಳೆ ಮೀಸಲಾತಿ ಘೋಷಣೆ ಮಾಡದಿದ್ದರೆ ಏನು ಮಾಡಬೇಕು. ಒಂದು ವೇಳೆ ಸಿಎಂ ಬಂದು ಆಶ್ವಾಸನೆ ಕೊಟ್ಟರೆ, ಇಲ್ಲವೇ ಸರ್ಕಾರದ ಪ್ರತಿನಿಧಿ ಕಳುಹಿಸಿಕೊಟ್ಟು ಸ್ಪಷ್ಟ ಸಂದೇಶ ನೀಡಿದರೆ ಹೋರಾಟ ಮುಂದುವರಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ" ಎಂದು ಸ್ವಾಮೀಜಿ ವಿವರಣೆ ನೀಡಿದರು.
:ಆಗಸ್ಟ್ 26ರಿಂದ ಇಲ್ಲಿಯವರೆಗೆ ಕೋಲಾರ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿಯೂ ಪಂಚಮಸಾಲಿ ಸಮಾಜಕ್ಕೆ 2ಎ ಹಾಗೂ ಲಿಂಗಾಯತ ಬಡ ಸಮಾಜಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರ್ಪಡೆ ಮಾಡುವ ಹಕ್ಕೊತ್ತಾಯ ಇಟ್ಟುಕೊಂಡು ನಾಲ್ಕನೇ ಹಂತದ ಚಳವಳಿ ನಡೆಸಿದ್ದೇವೆ. ನಮ್ಮ ಹೋರಾಟ ಸರ್ಕಾರದ ಗಮನ ಸೆಳೆದಿದೆ" ಎಂದು ಸ್ವಾಮೀಜಿ ಹೇಳಿದರು.
"ಬೇರೆಯವರಿಗೆ ಅನ್ಯಾಯ ಮಾಡಿ ನಮಗೆ ಕೊಡಿ ಎಂದು ಕೇಳುತ್ತಿಲ್ಲ. ಕಳೆದ 25 ವರ್ಷಗಳಿಂದ ನಮ್ಮ ಮೀಸಲಾತಿ ಹೋರಾಟ ಕೇವಲ ಸಿಎಂ ಅವರಿಗೆ ಮನವಿ ಸಲ್ಲಿಸುವುದಕ್ಕಷ್ಟೇ ಸೀಮಿತವಾಗಿತ್ತು. ಅವರ ಮನೆಗೆ ಹೋಗುವುದು ಹಾರ ಹಾಕುವುದು, ಚಹಾ ಕುಡಿಯುವುದು, ತಿಂಡಿ ತಿನ್ನುವುದು, ಮನವಿ ಕೊಟ್ಟು ಬರುವುದಕ್ಕಷ್ಟೇ ಆಗಿ ಹೋಗುತಿತ್ತು. ಈ ಹಿನ್ನೆಲೆಯಲ್ಲಿ ಜನಾಂದೋಲನ ಆರಂಭಿಸಲಾಯಿತು. ಈ ಜನಾಂದೋಲನದ ಪರಿಣಾಮವೇ ಈಗ ನಮಗೆ ಬರುತ್ತಿರುವ ಸಕಾರಾತ್ಮಕ ಸ್ಪಂದನೆ" ಎಂದು ಶ್ರೀಗಳು ವಿಶ್ಲೇಷಿಸಿದರು.
"ಇನ್ನು ಕೆಲವರು ಎಸಿ ರೂಂನಲ್ಲಿ ಕುಳಿತು ಹೋರಾಟ ಮಾಡುತ್ತಿದ್ದಾರೆ. ಮತ್ತೆ ಕೆಲವರು ಬೀದಿಗಿಳಿದು ಮೈಚಳಿ ಬಿಟ್ಟು ಹೋರಾಡುತ್ತಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಜವಹಾರಲಾಲ್ ನೆಹರೂ ಮನೆಯಲ್ಲಿ ಕುಳಿತು ಹೋರಾಟ ಮಾಡಿದರೆ, ಮಹಾತ್ಮಾ ಗಾಂಧೀಜಿ ಅವರು ಬೀದಿಯಲ್ಲಿ ಹೋರಾಟ ಮಾಡಿದರು. ಭಗತ್ ಸಿಂಗ್ ಅವರದ್ದು ಮತ್ತೊಂದು ಬಗೆಯ ಹೋರಾಟ. ಒಟ್ಟಾರೆ ನಮ್ಮ ನಿಲುವು ಒಂದೇ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲೇಬೇಕು ಎಂಬುದು. ನಮ್ಮ ಮಕ್ಕಳಿಗೆ ತಹಶೀಲ್ದಾರ್ ಕಚೇರಿಯಿಂದ ಮೀಸಲಾತಿ ಪತ್ರ ನೀಡುವವವರೆಗೂ ನಮ್ಮ ಹೋರಾಟ ನಿಲ್ಲದು. ಅಲ್ಲಿಯವರೆಗೆ ಹೋರಾಟ ಮುಂದುವರಿಯುತ್ತದೆ" ಎಂದು ಶ್ರೀಗಳು ಸ್ಪಷ್ಟಪಡಿಸಿದರು.
"ಇನ್ನು ಅಧಿವೇಶನದಲ್ಲಿ ಶಾಸಕರು ಹೋರಾಟ ಮಾಡುವುದು ಎಸಿ ರೂಂನಲ್ಲಿ ಕುಳಿತ ಹೋರಾಟ. ಬೀದಿಗಿಳಿದು ಹೋರಾಟ ಅಂದರೆ ನಾವು ಮಾಡುತ್ತಿರುವುದು. ಸಚಿವ ಮುರುಗೇಶ್ ನಿರಾಣಿಯವರ ಹೇಳಿಕೆ ಗಮನಿಸಿದ್ದೇನೆ. ಅವರು ಅವರದ್ದೇ ಆದ ರೀತಿಯಲ್ಲಿ ಹೋರಾಟ ಮಾಡಲಿ. ಶ್ರೀಗಳು ಬೀದಿಗಿಳಿದು ಹೋರಾಟ ಮಾಡುವುದರ ಔಚಿತ್ಯದ ಬಗ್ಗೆ ಪ್ರಶ್ನಿಸಿದ್ದಾರೆ. ಅವರ ಪ್ರಯತ್ನ ಅವರು ಮಾಡಲಿ. ನಮ್ಮ ಹೋರಾಟ ನಾವು ಮಾಡ್ತೇವೆ. ಒಟ್ಟಿನಲ್ಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಬೇಕು ಎಂಬುದಷ್ಟೇ ನಮ್ಮ ಅಪೇಕ್ಷೆ" ಎಂದು ಹೇಳಿದರು.
2ಎ ಮೀಸಲಾತಿ ಹೋರಾಟ ಸಮಿತಿಯ ರಾಷ್ಟ್ರಾಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, "ಯಡಿಯೂರಪ್ಪ ಆರು ತಿಂಗಳೊಳಗೆ ಮೀಸಲಾತಿ ನೀಡುತ್ತೇವೆ ಎಂಬ ಭರವಸೆ ಕೊಟ್ಟಿದ್ದರು. ನುಡಿದಂತೆ ನಡೆಯಲಿಲ್ಲ. ಹಾಗಾಗಿ ಸಮಾಜದ ಶಾಪಕ್ಕೆ ಗುರಿಯಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ಈಗ ಬಸವರಾಜ್ ಬೊಮ್ಮಾಯಿ ಅವರು ಭರವಸೆ ಕೊಟ್ಟಿದ್ದು, ಈಡೇರಿಸದಿದ್ದರೆ ಅವರಿಗೂ ಶಾಪ ಖಂಡಿತವಾಗಿಯೂ ತಟ್ಟುತ್ತದೆ" ಎಂದರು.












Click it and Unblock the Notifications