ಸಚಿವ ಸ್ಥಾನ ಸಿಗಲ್ಲ, ಬಿಜೆಪಿಗೆ ಸೆಡ್ಡು ಹೊಡೆಯಲು ಶಾಸಕ ರೆಡಿ
ಚಿತ್ರದುರ್ಗ, ಡಿಸೆಂಬರ್ 23:ಪಕ್ಷದ ವಿರುದ್ಧವೇ ಹೊಸದುರ್ಗ ಬಿಜೆಪಿ ಶಾಸಕ ಗೂಳಿ ಹಟ್ಟಿ ಶೇಖರ್ ತಮ್ಮ ಹೆಜ್ಜೆ ಮುಂದಿಟ್ಟಿದ್ದಾರೆ.
ಹೊಸದುರ್ಗದ ಬನಶಂಕರಿ ಭವನದಲ್ಲಿ ಸ್ವಾಭಿಮಾನಿ ಗೂಳಿಹಟ್ಟಿ ಶೇಖರ್ ಅಭಿಮಾನಿಗಳ ಬಳಗದಿಂದ ಪ್ರತ್ಯೇಕ ಸಭೆ ನಡೆಸಿದ್ದಾರೆ.
ಅನರ್ಹ ಶಾಸಕರು ಬಿಜೆಪಿಯಿಂದ ಗೆದ್ದು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಕಮಲದ ಭದ್ರಕೋಟೆ ಎನಿಸಿರುವ ಕೋಟೆನಾಡು ಚಿತ್ರದುರ್ಗದಲ್ಲಿ ಬಿಜೆಪಿಗೆ ತಲೆನೋವು ಆರಂಭವಾಗಿದೆ. ಸಚಿವ ಸ್ಥಾನ ಸಿಗಲ್ಲ ಅಂತ ಬಿಜೆಪಿಗೆ ಸೆಡ್ಡು ಹೊಡೆಯಲು ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮುಂದಾಗಿದ್ದಾರೆ.

ಹೊಸದುರ್ಗದಲ್ಲಿ ಬೆಂಬಲಿಗರ ಸಭೆಯಲ್ಲಿ ತಮ್ಮ ಮನಸಿನ ನೋವನ್ನು ವ್ಯಕ್ತಪಡಿಸಿದ ಗೂಳಿಹಟ್ಟಿ ಶೇಖರ್ ಅವರು, ನಾನೊಬ್ಬ ಶಾಸಕನಾದರೂ ಬಿಜೆಪಿ ನನ್ನನ್ನು ಕಡೆಗಣಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಹೊಸದುರ್ಗ ತಾಲೂಕು ಬಿಜೆಪಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ನಾಮ್ ಕೇ ವಾಸ್ತೆ ಸಹ ಶಾಸಕರ ಅಭಿಪ್ರಾಯವನ್ನು ಕೇಳಿಲ್ಲ. ಬಿಜೆಪಿ ಪಕ್ಷದ ನಾಯಕರ ಕಪಿಮುಷ್ಟಿಯಲ್ಲೇ ಇರಲಿ ಅಂತ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಷ್ಟೇ ಅಲ್ಲದೆ ತೆರೆಮರೆಯಲ್ಲಿ ಅತೀ ಬೇಗ ಶಾಸಕರಾಗುವ ಬಯಕೆಯುಳ್ಳ ತಾಲೂಕಿನ ಬಿಜೆಪಿ ನಾಯಕರು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದು, ಪಕ್ಷದ ವರಿಷ್ಠರಲ್ಲಿ ಚಾಡಿ ಹೇಳುತ್ತಿದ್ದಾರೆ ಎಂದು ಅಸಾಮಾಧಾನ ಹೊರ ಹಾಕಿದ್ದಾರೆ.
ಜೊತೆಗೆ ನಾನು ಇನ್ನೂ ಮೂರು ವರ್ಷ ಎಲ್ಲೂ ಹೋಗಲ್ಲ. ಬಿಜೆಪಿಯಲ್ಲಿ ಎಷ್ಟೇ ಕಿರುಕುಳವಿದ್ದರೂ ಇಲ್ಲೇ ಇರುತ್ತೇನೆ. ಆದರೆ ಮುಂದಿನ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸುವ ಸಾಧ್ಯತೆ ಇರುವ ಬಗ್ಗೆ ಗೂಳಿಹಟ್ಟಿ ಶೇಖರ್ ತಿಳಿಸಿದ್ದಾರೆ.












Click it and Unblock the Notifications