ಹಿರಿಯೂರು ತಾಲೂಕಿನಲ್ಲಿ ಮೈದುಂಬಿ ಹರಿಯುತ್ತಿರುವ ವೇದಾವತಿ ನದಿ; ತುರ್ತು ಸಹಾಯವಾಣಿ ಆರಂಭ
ಚಿತ್ರದುರ್ಗ, ಸೆಪ್ಟೆಂಬರ್, 06: ಕಳೆದ ಒಂದು ವಾರದಿಂದ ನಿರಂತರವಾಗಿ ವರುಣನ ಆರ್ಭಟಕ್ಕೆ ಜಿಲ್ಲೆಯ ಹಿರಿಯೂರು ತಾಲೂಕಿನ ಜನರು ತತ್ತರಿಸಿ ಹೋಗಿದ್ದಾರೆ. ವೇದಾವತಿ ನದಿ ಪಾತ್ರದ ಮನೆಗಳು ಜಲಾವೃತವಾಗಿದ್ದು, ಇಲ್ಲಿನ ಜನರ ಜೀವನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಬಿಟ್ಟಿದೆ.
ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಒಳ ಮತ್ತು ಹೊರ ಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ತಾಲೂಕಿನ ವೇದಾವತಿ ನದಿ, ಸುವರ್ಣಮುಖಿ ನದಿ ಹಾಗೂ ವಾಣಿ ವಿಲಾಸ ಸಾಗರದ ಎರಡು ನಾಲೆಗಳು ಮೈದುಂಬಿ ಹರಿಯುತ್ತಿವೆ. ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಇಂದು 7467 ಕ್ಯೂಸೆಕ್ ಒಳಹರಿವು ನೀರಿನ ಪ್ರಮಾಣ ಇದ್ದು, ಪ್ರಸ್ತುತ ಜಲಾಶಯದ ನೀರಿನ ಮಟ್ಟ 133 ಅಡಿ ಸಂಗ್ರಹ ಆಗಿದೆ. ಇನ್ನು ಜಲಾಶಯದಿಂದ 7312 ಕ್ಯೂಸೆಕ್ ಪ್ರಮಾಣದಲ್ಲಿ ಹೊರ ಹರಿವು ಇದ್ದು, ವೇದಾವತಿ ನದಿ ಮೂಲಕ ರಭಸವಾಗಿ ನೀರು ಹರಿದು ಹೋಗುತ್ತಿದೆ.
ಹಿರಿಯೂರಿನ ಗೌನಹಳ್ಳಿಯಲ್ಲಿ ಮಳೆಗೆ ಧರೆಗುರುಳಿದ ಬಾಳೆ, ತೆಂಗು, ಅಡಿಕೆ ಮರಗಳು
ನಗರದ ಸಿಎಂ ಬಡಾವಣೆ, ಲಕ್ಕವ್ವನಹಳ್ಳಿ ರಸ್ತೆ, ಮಟನ್ ಮಾರ್ಕೆಟ್, ಸುಣ್ಣಗಾರ್ ಬಡಾವಣೆ ಸೇರಿದಂತೆ ವೇದಾವತಿ ನದಿ ಪಾತ್ರದ ಬಹುತೇಕ ಮನೆಗಳು, ತೋಟಗಳು ಸಂಪೂರ್ಣ ಜಲಾವೃತಗೊಂಡಿವೆ. ಇನ್ನು ಕೆಲವು ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ. ಅಲ್ಲಿದ್ದ ಜನರನ್ನು ನಗರದ ಬಿಸಿಎಂ ಹಾಸ್ಟೆಲ್, ಸರ್ಕಾರಿ ಪಾಲಿಟೆಕ್ನಿಕ್ ಹಾಸ್ಟೆಲ್ನ ನಿರಾಶ್ರಿತ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗಿದೆ. ತುರ್ತು ಸೇವೆಗಳಿಗೆ ಸಹಾಯವಾಣಿಗಳನ್ನು ತೆರೆಯಲಾಗಿದೆ.
ಹಿರಿಯೂರು ಭಾಗದ ಜನರಿಗೆ ಆತಂಕ
ತಾಲೂಕಿನ ಬಹುತೇಕ ಚೆಕ್ ಡ್ಯಾಂ, ಹಳ್ಳ ಕೊಳ್ಳಗಳು, ಕೆರೆಗಳು, ಕೃಷಿ ಹೊಂಡಗಳು ಕೋಡಿ ತುಂಬಿ ಹರಿಯುತ್ತಿದ್ದು, ಯಾವ ಸಂದರ್ಭದಲ್ಲಿ ಬೇಕಾದರೂ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ. ಇದರಿಂದ ನದಿ ಪಾತ್ರದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಗಳು, ಎಲ್ಲಾ ಅಧಿಕಾರಿಗಳು ಎಚ್ಚೆತ್ತುಕೊಂಡು ಜನರಿಗೆ ಸ್ಪಂದಿಸಬೇಕಾಗಿದೆ ಎಂದು ಅಲ್ಲಿನ ಸ್ಥಲೀಯರು ಅಳಲು ತೋಡಿಕೊಂಡಿದ್ದಾರೆ. ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಆಡಳಿತ ಮತ್ತು ಶಾಸಕರು ಕ್ರಮವಹಿಸಬೇಕು ಎಂದು ಸ್ಥಳೀಯರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನದಿ ನೋಡಲು ಹರಿದು ಬಂದ ಜನಸಾಗರ
ವೇದಾವತಿ ನದಿ ಮೈದುಂಬಿ ಹರಿಯುತ್ತಿರುವ ಸುದ್ದಿ ತಿಳಿದ ತಕ್ಷಣವೇ, ನಗರದ ಅನೇಕ ಕಡೆಗಳಿಂದ ನಾಗರೀಕರು ನದಿಯನ್ನು ನೋಡಲು ಕಕ್ಕಿರಿದು ಬರುತ್ತಿದ್ದಾರೆ. ಹರಿಯುತ್ತಿರುವ ವೇದಾವತಿ ನದಿಯನ್ನು ನೋಡಲು ಜನಸಾಗವೇ ಹರಿದು ಬಂದಿದೆ. ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಮಾಡಿದ್ದರು. ಪೊಲೀಸ್ ವಾಹನ ಸೈರನ್ ಹಾಕಿಕೊಂಡು ಹೋಡಾಡುವ ಮೂಲಕ ನಾಗರೀಕರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದರು.
ಶಾಲೆಗಳಿಗೆ ರಜೆ ಘೋಷಣೆ
ಹಾಗೂ
ಮುಂಜಾಗ್ರತ
ಕ್ರಮವಾಗಿ
ನಗರ
ಪ್ರದೇಶದ
ಶಾಲೆಗಳಿಗೆ
ರಜೆ
ಘೋಷಿಸಲಾಗಿದೆ.
ಇತ್ತ
ತಾಲೂಕು
ಆಡಳಿತ,
ನಗರಸಭೆ
ಹಾಗೂ
ಎಲ್ಲಾ
ಸರ್ಕಾರಿ
ಸಂಸ್ಥೆಗಳು
ತಕ್ಷಣ
ತುರ್ತು
ಪರಿಸ್ಥಿತಿಗೆ
ಸ್ಪಂದಿಸಲು
ಸಜ್ಜಾಗಿವೆ.
ತೊಂದರೆಗೆ
ಸಿಲುಕಿದ
ಜನರ
ನೆರವಿಗೆ
ಧಾವಿಸಲು
ಕೆಲವು
ಅಧಿಕಾರಿಗಳನ್ನು
ಸಂಪರ್ಕಿಸಲು
ಫೋನ್
ನಂಬರ್ಗಳನ್ನು
ನೀಡಲಾಗಿದೆ.
ತುರ್ತು
ಪರಿಸ್ಥಿತಿಗೆ
ಇಲ್ಲಿರುವ
ಸಹಾಯ
ವಾಣಿಗಳನ್ನು
ಸಂಪರ್ಕಿಸಬಹುದಾಗಿದೆ.
1.
ತಹಸಿಲ್ದಾರ್,
8105999707
2.
ಪೌರಾಯುಕ್ತರು,
94495
80790
3.
ಡಿವೈಎಸ್ಪಿ,
9480803122
4.
ಇ.ಓ
94808
61110
ನದಿ ತೀರದ ಜನರಿಗೆ ಆಪತ್ತು
ಹಿರಿಯೂರಿನಲ್ಲಿ 73.2 ಮಿಲಿ ಮೀಟರ್ ಮಳೆ ಸುರಿದಿದ್ದು, ಈಶ್ವರಗೆರೆ 60.2 ಮಿಲಿ ಮೀಟರ್, ಬಬ್ಬೂರಿನಲ್ಲಿ 49 ಮಿಲಿ ಮೀಟರ್, ಸೂಗೂರು 28.4 ಮಿಲಿ ಮೀಟರ್, ಇಕ್ಕನೂರಿನಲ್ಲಿ 22.4 ಮಿಲಿ ಮೀಟರ್ ಮಳೆ ಸುರಿದಿದ್ದು, ಇದರಲ್ಲಿ ಹಿರಿಯೂರು ನಗರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿದಿದೆ. ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದಿದ್ದು, ವೇದಾವತಿ ನದಿ ಮೈದುಂಬಿ ಹರಿಯುತ್ತಿದೆ. ವೇದಾವತಿ ನದಿಯಲ್ಲಿರುವ ಶಿವನ ದೇವಾಲಯ ಜಲಾವೃತವಾಗಿತ್ತು. ಮತ್ತೆ ಇಂದು ಕೆಲವು ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.