Vani Vilasa Sagara Dam: ವಾಣಿ ವಿಲಾಸ ಸಾಗರ ಡ್ಯಾಂನಿಂದ ಈ ಕೆರೆಗಳಿಗೆ ನೀರು ಬಿಡಲೇಬೇಕು-ರೈತರ ಮನವಿ
Vani Vilasa Sagara Dam: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ಪಕ್ಕದಲ್ಲಿರುವ ಭರಮಗಿರಿ, ಗೌನಳ್ಳಿ, ಭೂತನಹಟ್ಟಿ, ಬೀರೇನಹಳ್ಳಿ, ತವಂದಿ ಹಾಗೂ ಕೂನಿಕೆರೆ ಕರೆಗಳಿಗೆ ಡ್ಯಾಂನಿಂದ ನೀರು ಹರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದ್ದ ಬಂದ್ ಯಶಸ್ವಿಯಾಯಿತು.
ವಾಣಿ ವಿಲಾಸಪುರ ಗ್ರಾಮದ ಪ್ರಮುಖ ಬೀದಿಗಳಲ್ಲಿ ರೈತ ಸಂಘದ ಕಾರ್ಯಕರ್ತರು ಮೆರವಣಿಗೆ ನಡೆಸಿ, ವೇದಿಕೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿ.ರಾಜೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಅವರು ಮಾತನಾಡಿ, ಪ್ರತಿವರ್ಷ ಭದ್ರಾ ಜಲಾಶಯ ಹಾಗೂ ಎತ್ತಿನಹೊಳೆ ಯೋಜನೆಯಿಂದ 10 ಟಿಎಂಸಿ ನೀರನ್ನು ವಾಣಿ ವಿಲಾಸ ಸಾಗರ ಡ್ಯಾಂಗೆ ಮೀಸಲಿಡಬೇಕು. ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ತಾಲ್ಲೂಕಿನಲ್ಲಿ ವಾಣಿ ವಿಲಾಸ ಜಲಾಶಯ ಇದ್ದು, ಜಲಾಶಯದ ಪಕ್ಕದಲ್ಲಿರುವ ಕೆರೆಗಳಿಗೆ ನೀರು ತುಂಬಿಸಲು ರಾಜ್ಯ ಸರ್ಕಾರ ಕೂಡಲ ತ್ವರಿತಗತಿಯಲ್ಲಿ ಕೆಲಸ ಆರಂಭಿಸಬೇಕು ಎಂದರು. ಇನ್ನು ಈ ಭಾಗದಲ್ಲಿ ಸಾವಿರಾರು ಅಡಿ ಬೋರ್ ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಕುಡಿಯುವ ನೀರಿಗಾಗಿ ಟ್ಯಾಂಕರ್ ಮೂಲಕ ಗ್ರಾಮ ಪಂಚಾಯಿತಿಯಿಂದ ನೀರು ಪೂರೈಕೆ ಮಾಡಲಾಗುತ್ತದೆ.
ಹೀಗೆ ಆದರೆ ಮುಂದಿನ ದಿನಗಳಲ್ಲಿ ರೈತರು ಸಾಲಸೂಲ ಮಾಡಿ ಬೆಳೆಸಿರುವ ಅಡಿಕೆ, ತೆಂಗು ಬಾಳೆ ಮುಂತಾದ ತೋಟಗಾರಿಕೆ ಬೆಳೆಗಳು ಒಣಗಿ ಹೋಗಿ, ಸಾವಿರಾರು ರೈತರ ಬದುಕು ಬೀದಿಗೆ ಬೀಳುತ್ತದೆ. ಆದ್ದರಿಂದ ಕೂಡಲೇ ಈ ಭಾಗಕ್ಕೆ ನೀವು ಹರಿಸಬೇಕು. ಒಂದು ವಾರದೊಳಗೆ ಆದೇಶ ಆಗಬೇಕು. ಇಲ್ಲದಿದ್ದರೆ ತಾಲ್ಲೂಕ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಸಿದ್ದವೀರಪ್ಪ ಮಾತನಾಡಿ, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಭಾಗದ ಅಚ್ಚುಕಟ್ಟು ಪ್ರದೇಶದ ರೈತರಿಗಾಗಿ ಜಲಾಶಯವನ್ನು ಕಟ್ಟಿಸಿದ್ದಾರೆ. ರೈತರಿಗೆ ಉಪಯೋಗವಾಗದೇ ಕೇವಲ ಕುಡಿಯುವ ನೀರಿಗಾಗಿ ಬಳಕೆಯಾಗುತ್ತದೆ. 30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಈ ಡ್ಯಾಂ, ಈ ಭಾಗದ ಪ್ರತಿ ಹಳ್ಳಿಯಲ್ಲೂ ಪ್ರತಿಯೊಬ್ಬ ರೈತನ ಜಮೀನಿಗೂ ನೀರು ಹರಿಯಬೇಕು ಎಂದರು.
ತಾಲ್ಲೂಕಿನಲ್ಲಿರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿ ರೈತರ ಜಮೀನಿಗೆ ನೀರು ಹರಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಹನಿ ನೀರಾವರಿ ಪದ್ಧತಿಯನ್ನು ನೀರಾವರಿ ಇಲಾಖೆ ಅಧಿಕಾರಿಗಳು ಕೂಡಲೇ ಕೈ ಬಿಡಬೇಕು.
ಮಳೆಗಾಲದಲ್ಲಿ ಡ್ರಿಪ್ ಮೂಲಕ ನೀರು ಹರಿಸಿದರೆ, ಯಾರಿಗೂ ಪ್ರಯೋಜನವಿಲ್ಲ. ಅದನ್ನು ನಿಲ್ಲಿಸಿ ನಮ್ಮ ಮಣ್ಣಿನ ಕೆರೆಗಳಿಗೆ ನೀರು ತುಂಬಿಸಲು ಮುಂದಾಗಬೇಕು. ನೀವು ಕಾಮಗಾರಿ ನಿಲ್ಲಿಸದಿದ್ದರೆ ನಾವೇ ಎಲ್ಲಾ ಡ್ರಿಪ್ ಪೈಪುಗಳನ್ನು ಕಿತ್ತುಕೊಂಡು ಬಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಹಾಕಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಹಿರಿಯ ಮುಖಂಡ ಆಲೂರು ಸಿದ್ದರಾಮಣ್ಣ ಮಾತನಾಡಿ, ಈ ಹಿಂದೆ ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸುವಂತೆ ಆಗ್ರಹಿಸಿ ತಾಲ್ಲೂಕ ಕಚೇರಿ ಮುಂದೆ 543 ದಿನ ಚಳುವಳಿ ನಡೆಸಲಾಯಿತು. ಹಾಗೆಯೇ ಧರ್ಮಪುರ ಕೆರೆಗಳಿಗೆ ನೀರು ಹರಿಸಲು ರೈತ ಸಂಘ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರಿಂದ ಈ ಕಾರ್ಯಗಳು ಅನುಷ್ಠಾನಕ್ಕೆ ಬಂದವು.
ಇದೀಗ ಜೆಜೆ ಹಳ್ಳಿ ಹೋಬಳಿಯಲ್ಲಿ ನೀರಾವರಿಗಾಗಿ ಎರಡು ತಿಂಗಳಿನಿಂದ ಹೋರಾಟ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ವಾಣಿ ವಿಲಾಸ ಸಾಗರ ಭಾಗದ ಕೆರೆಗಳಿಗೆ ನೀರು ತುಂಬಿಸಲು ನಿರಂತರ ಹೋರಾಟ ಮಾಡಲು ತಾಲ್ಲೂಕು ರೈತ ಸಂಘ ಬದ್ಧವಾಗಿದೆ. ನೀವೆಲ್ಲರೂ ನಮ್ಮ ಜೊತೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಹೊಳಲ್ಕೆರೆ ಘಟಕದ ಅಧ್ಯಕ್ಷ ರಂಗಣ್ಣ, ಹೊಸದುರ್ಗ ಘಟಕದ ಅಧ್ಯಕ್ಷ ಚಿತ್ತಪ್ಪ, ಅರಳಿಕೆರೆ ತಿಪ್ಪೇಸ್ವಾಮಿ, ಕೆಂಚಪ್ಪ, ಮಂಜಣ್ಣ, ಬಳಗಟ್ಟ ವೆಂಕಟೇಶ್, ಹನುಮಂತಪ್ಪ, ಯಲ್ಲಪ್ಪ, ಶಾಂತರಾಜ್, ಕರಿಯಪ್ಪ, ಭೂತಯ್ಯ, ಹನುಮಂತಪ್ಪ, ರಾಮಯ್ಯ, ಭೂತರಾಜ್, ಕಣ್ಮಯ್ಯ, ಗಿರೀಶ್, ರಾಮಣ್ಣ, ಚಂದ್ರಣ್ಣ, ಶಿವಣ್ಣ, ನಿಂಗಮ್ಮ, ಸರೋಜಮ್ಮ, ರತ್ನಮ್ಮ, ಶಂಕ್ರಪ್ಪ, ಪಾಂಡುರಂಗಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.












Click it and Unblock the Notifications