ಚಿತ್ರದುರ್ಗ: ಜಿಟಿಜಿಟಿ ಮಳೆಗೆ ಮನೆ ಗೋಡೆ ಕುಸಿದು ಮೂವರ ದುರ್ಮರಣ
ಚಿತ್ರದುರ್ಗ, ನವೆಂಬರ್ 19: ಚಿತ್ರದುರ್ಗ ಜಿಲ್ಲೆಯ ಕಾರೋಬಯ್ಯನಹಟ್ಟಿಯಲ್ಲಿ ಗೋಡೆ ಕುಸಿದು ಮೂವರು ಮೃತಪಟ್ಟಿದ್ದ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಮ್ಮೆ ಗೋಡೆ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗುರುವಾರದಿಂದ ಎಡೆಬಿಡದೆ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಮನೆ ಗೋಡೆ ಕುಸಿದು ಓರ್ವ ಮಹಿಳೆ ಬಲಿಯಾಗಿರುವ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ. ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ತ್ರಿವೇಣಿ (24) ವರ್ಷ ಮೃತ ಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.
ವಿಷಯ ತಿಳಿದ ತಕ್ಷಣ ಪಿಎಸ್ಐ ಪರುಶುರಾಮ. ಎನ್. ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಗೋಡೆ ಕುಸಿದು ಬಿದ್ದು ದಂಪತಿ ಸಾವನ್ನಪ್ಪಿದ್ದಾರೆ. ದಂಪತಿ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದರು. ಪಕ್ಕದಲ್ಲೇ ಇದ್ದ ಅಂಗನವಾಡಿ ಗೋಡೆ ಕುಸಿದು ದಂಪತಿ ಮೃತರಾಗಿದ್ದಾರೆ. ಕಂಪ್ಲೇಶಪ್ಪ(45), ಪತ್ನಿ ತಿಪ್ಪಮ್ಮ(38) ಮೃತ ದುರ್ದೈವಿಗಳಾಗಿದ್ದಾರೆ. ಪುತ್ರ ಅರುಣ್ ಕುಮಾರ್ಗೆ ಗಾಯಯಾವಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವರುಣನ ಅಬ್ಬರ
ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವರುಣನ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಗ್ರಾಮೀಣ ಪ್ರದೇಶದ ಕೆಲವು ಭಾಗಗಳಲ್ಲಿ ಶೇಂಗಾ ಬೆಳೆ ಹಾನಿಯಾಗಿದೆ.
ಒಂದೇ ಮೂವರ ಸಾವು
ಹಿರಿಯೂರು ತಾಲ್ಲೂಕಿನ ಕಾರೋಬಯ್ಯನಹಟ್ಟಲ್ಲಿ ಮನೆ ಗೋಡೆ ಕುಸಿದು ಒಂದೇ ಕುಟುಂಬದವರಾದ ಚನ್ನಕೇಶವ (26), ಪತ್ನಿ ಸೌಮ್ಯ (20), ತಂದೆ ಕ್ಯಾಸಣ್ಣ (55) ಹೀಗೆ ಮೂರು ಜನ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಗೋಡೆ ಕುಸಿದ ಪ್ರಕರಣದ ದುರಂತ ಸಂಭವಿಸಿದೆ.

ಶಾಲೆಗೆ ಎರಡು ದಿನ ರಜೆ
ಚಿತ್ರದುರ್ಗ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಶಾಲೆಗಳಿಗೆ ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ರಜೆ ಘೋಷಿಸಿ ಜಿಲ್ಲಾಧಿಕಾರಿ ಕವಿತಾ. ಎಸ್. ಮಣ್ಣಿಕೇರಿ ಆದೇಶ ಹೊರಡಿಸಿದ್ದಾರೆ.
ವೆಂಗಳಾಪುರ ಸರ್ಕಾರಿ ಶಾಲೆ ಮೇಲ್ಛಾವಣಿ, ಗೋಡೆ ಕುಸಿತ
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ವೆಂಗಳಾಪುರ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ, ಗೋಡೆ ಕುಸಿತವಾಗಿದೆ. ಮಕ್ಕಳು ಶಾಲೆಗೆ ಬಾರದಿದ್ದರಿಂದ ಅನಾಹುತ ತಪ್ಪಿದೆ. ಕೆಲದಿನದಿಂದ ಆತಂಕದಲ್ಲೇ ಶಾಲಾ ಅಂಗಳದಲ್ಲಿ ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿತ್ತು. ಕಳೆದ ರಾತ್ರಿಯಿಂದ ಜಿಲ್ಲೆಯ ವಿವಿಧೆಡೆ ನಿರಂತರ ಮಳೆ ಹಿನ್ನೆಲೆ ವೆಂಗಳಾಪುರ ಗ್ರಾಮದ ಪೋಷಕರು, ವಿದ್ಯಾರ್ಥಿಗಳಲ್ಲಿ ಆತಂಕ ಇತ್ತು. ಹೀಗಾಗಿ 2 ದಿನಗಳ ಕಾಲ ಜಿಲ್ಲಾಡಳಿತ ಶಾಲೆಗೆ ರಜೆ ಘೋಷಿಸಿದೆ.
ಬರಿದಾಗಿದ್ದ ಕೊಳವೆ ಬಾವಿಗಳಲ್ಲಿ ಉಕ್ಕುತ್ತಿರುವ ನೀರು
ಚಿತ್ರದುರ್ಗ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ಬರಿದಾಗಿದ್ದ ಐಮಂಗಲ ಪೊಲೀಸ್ ತರಬೇತಿ ಕೇಂದ್ರದಲ್ಲಿನ ಕೊಳವೆಬಾವಿ ನೀರು ಉಕ್ಕುತ್ತಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದಲ್ಲಿ ಬತ್ತಿದ್ದ ಕೊಳವೆ ಬಾವಿಯಿಂದ ನೀರು ಹರಿದು ಅಚ್ಚರಿ ಸಂಗತಿ ಎದುರಾಗಿದೆ. ಕೆಲ ವರ್ಷಗಳಿಂದ ಬರಿದಾಗಿದ್ದ ಕೊಳವೆಬಾವಿಯಲ್ಲಿ ನೀರು ಕಾಣಿಸಿಕೊಂಡಿದೆ.
ಚಿತ್ರದುರ್ಗದಲ್ಲಿ ಮಳೆ ವಿವರ
ಚಿತ್ರದುರ್ಗ ಜಿಲ್ಲೆಯಲ್ಲಿ ನವೆಂಬರ್ 18ರಂದು ಬಿದ್ದ ಮಳೆಯ ವಿವರದನ್ವಯ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗದಲ್ಲಿ 11.2 ಮಿ.ಮೀ. ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ 2.2 ಹಾಗೂ ತಾಳ್ಯ 2 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರು 8.8, ಬಬ್ಬೂರು 5, ಈಶ್ವರಗೆರೆ 3.2 ಹಾಗೂ ಸೂಗೂರಿನಲ್ಲಿ 3.4 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆಯಲ್ಲಿ 1.4 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆ 3, ನಾಯಕನಹಟ್ಟಿ 2.4 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಬಾಗೂರಿನಲ್ಲಿ 3 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 1 ಮಿ.ಮೀ ಮಳೆಯಾಗಿದೆ.
34 ಮನೆ ಹಾನಿ: ಜಿಲ್ಲೆಯಲ್ಲಿ ನವೆಂಬರ್ 18ರಂದು ಸುರಿದ ಮಳೆಗೆ ಜಿಲ್ಲೆಯಾದ್ಯಂತ 34 ಮನೆಗಳು ಹಾನಿಯಾಗಿವೆ. ತಾಲ್ಲೂಕುವಾರು ಮಳೆ ಹಾನಿ ವಿವರ ಇಂತಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 9 ಮನೆ ಹಾನಿ, ಚಳ್ಳಕೆರೆ ತಾಲ್ಲೂಕು-1 ಮನೆ ಹಾನಿ, ಹಿರಿಯೂರು ತಾಲ್ಲೂಕು-11 ಮನೆ ಹಾನಿ, ಹೊಳಲ್ಕೆರೆ ತಾಲ್ಲೂಕು-1 ಮನೆ ಹಾನಿ, ಹೊಸದುರ್ಗ ತಾಲ್ಲೂಕು-10 ಮನೆ ಹಾನಿ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 2 ಮನೆ ಹಾನಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 34 ಮನೆಗಳು ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.












Click it and Unblock the Notifications