ಶಿಕ್ಷಕರ ದಿನಾಚರಣೆ ವಿಶೇಷ; ಸರ್ಕಾರಿ ಶಾಲೆ ಅಭಿವೃದ್ಧಿಗೊಳಿಸಿದ ಶಿಕ್ಷಕ
ಚಿತ್ರದುರ್ಗ, ಸೆಪ್ಟೆಂಬರ್ 05; ಸ್ವಾತಂತ್ರ ಪೂರ್ವದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡ ಸರ್ಕಾರಿ ಶಾಲೆಯೊಂದು ಶಿಥಿಲಗೊಂಡಿತ್ತು. ಆ ಶಾಲಾ ಕೊಠಡಿಯನ್ನು ಶಿಕ್ಷಕರರೊಬ್ಬರು ದತ್ತು ಪಡೆಯುವ ಮೂಲಕ ಇಡೀ ಶಾಲೆಯನ್ನೇ ಮನಸೂರೆಗೊಳ್ಳುವಂತೆ ಪರಿವರ್ತನೆ ಮಾಡಿ, ಇತರೆ ಶಾಲೆಗಳ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.
ಶಿಕ್ಷಕರ ದಿನಾಚರಣೆ ಪ್ರಯುಕ್ತ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಂಬಲಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಇಂಗ್ಲಿಷ್ ಶಿಕ್ಷಕ ಸಿ. ಎನ್. ನಾಗಭೂಷಣ್ ಕೆಲಸದ ಬಗ್ಗೆ ವಿಶೇಷ ವರದಿ ಇಲ್ಲಿದೆ. ಶಿಕ್ಷಕನ ಕಾರ್ಯಕ್ಕೆ ಶಾಸಕರು, ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವ ಉದ್ದೇಶ, ಭೌತಿಕ ಸುಧಾರಣೆ ಅನಿವಾರ್ಯದ ದೃಷ್ಟಿಯಿಂದ ತಾನು ಬೋಧಿಸುವ ಕೊಠಡಿಯನ್ನು ದತ್ತು ಪಡೆದುಕೊಂಡು ಸುಮಾರು 3 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಹೊಸ ವಿನ್ಯಾಸ ನೀಡುವ ಮೂಲಕ ಇಡೀ ಶಾಲೆಯನ್ನೇ ಸಂಪೂರ್ಣವಾಗಿ ಪರಿವರ್ತಿಸಿದ್ದಾರೆ ಶಿಕ್ಷಕ ಸಿ. ಎನ್. ನಾಗಭೂಷಣ್.
ಅಂಬಲಗೆರೆ ಗ್ರಾಮದಲ್ಲಿ 1937ರಲ್ಲಿ ಆರಂಭಗೊಂಡಿರುವ ಸರ್ಕಾರಿ ಪ್ರಾಥಮಿಕ ಶಾಲೆ ಶಿಥಿಲಗೊಂಡಿತ್ತು. 2016ರಲ್ಲಿ ಅಂಬಲಗೆರೆ ಶಾಲೆಗೆ ಕನ್ನಡ ಶಿಕ್ಷಕರಾಗಿ ಬಂದ ಸಿ. ಎನ್. ನಾಗಭೂಷಣ್ ಆರು ತಿಂಗಳಲ್ಲಿ ಇಡೀ ಶಾಲೆಯ ಚಿತ್ರಣವನ್ನೇ ಬದಲಾಯಿಸಿ ನೋಡ ಬನ್ನಿ ನಮ್ಮೂರ ಶಾಲೆಯ ಅಂದವ ಎಂಬುವಂತೆ ಪರಿವರ್ತನೆ ಮಾಡಿದ್ದಾರೆ. ಮೂಲತಃ ಕನ್ನಡ ಶಿಕ್ಷಕರಾಗಿ ನೇಮಕಗೊಂಡರುವ ನಾಗಭೂಷಣ್ ಶಾಲೆಯಲ್ಲಿ ಆಂಗ್ಲ ಶಿಕ್ಷಕರಿಲ್ಲದೆ ಇರುವುದರಿಂದ ಆಂಗ್ಲ ಭಾಷೆ ಬೋಧನೆ ಮಾಡುತ್ತಿದ್ದಾರೆ.

ಶಾಲಾ ಕೊಠಡಿ ಅಭಿವೃದ್ಧಿಗೊಳಿಸಿದ ಶಿಕ್ಷಕ
ಶಾಲೆಯ ಶಿಥಿಲ ವ್ಯವಸ್ಥೆಯನ್ನು ಕಂಡ ಶಿಕ್ಷಕ ನಾಗಭೂಷಣೆ ಒಂದು ಶಾಲಾ ಕೊಠಡಿಯನ್ನು ದತ್ತು ಪಡೆದುಕೊಂಡು 3 ಲಕ್ಷ ಖರ್ಚು ಮಾಡಿ ಸುಸಜ್ಜಿತವಾದ ಡೆಸ್ಕುಗಳು, ಕಂಪ್ಯೂಟರ್, ಎಲ್ಇಡಿ ಟಿವಿ, ಗೋಡೆಯ ಮೇಲೆ ಕಲಿಕೆಯ ಚರ್ಟ್, ಪ್ರಾಣಿ ಪಕ್ಷಿಗಳ ಚಿತ್ರಗಳು, ರಾಷ್ಟ್ರ ನಾಯಕರ ಚಿತ್ರಗಳನ್ನು ಹಾಕಿ ಕೊಠಡಿಯನ್ನು ಅಭಿವೃದ್ಧಿ ಮಾಡಿದರು.
ಶಾಲೆಯಲ್ಲಿ 1-4 ತರಗತಿ ಒಂದು ಕಡೆ ಹಾಗೂ 5-7ನೇ ತರಗತಿ ಮತ್ತೊಂದು ಕಡೆ ನಡೆಯುತ್ತವೆ. ಒಂದು ಕೊಠಡಿಯನ್ನು ಅಂದಗೊಳಿಸಿ ಉಳಿದ ಒಂದು ಕೊಠಡಿಗೆ ಹೊರಭಾಗಕ್ಕೆ ಬಣ್ಣ ಬಳಿಸಿದ್ದರು. ಪಕ್ಕದ ಕೊಠಡಿಗಳು ನೋಡುಗರಿಗೆ ಕುರೂಪವಾಗಿ ಕಾಣಬಾರದು ಹಾಗೂ ಶಾಲೆಯ ಚಿತ್ರಣ ಅಪೂರ್ಣವಾಗಿರಬಾರದು ಎಂದು ಮತ್ತೊಂದು ಹೆಜ್ಜೆ ಮುಂದಿಟ್ಟರು.
ಊರಿನವರು, ಶಾಲಾ ಸಮಿತಿ ಅಧ್ಯಕ್ಷ, ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಹಾಗೂ ಯುವಕರ ಸಹಾಯದಿಂದ ಸುಮಾರು 1 ಲಕ್ಷ ರೂಪಾಯಿ ಹಣ ಸಂಗ್ರಹಿಸಿ ಕೊಟ್ಟಿದ್ದಾರೆ. ಇದರ ಜೊತೆಗೆ ಶಿಕ್ಷಕರ ಸಹಾಯದಿಂದ 2 ಲಕ್ಷ ರೂಪಾಯಿ ಹಣ ಸಂಗ್ರಹವಾಗಿದೆ. ಪೂರ್ಣ ಶಾಲೆಯನ್ನೇ ಮರು ನಿರ್ಮಾಣ ಮಾಡಿದರು.

ಬಣ್ಣ ಹಚ್ಚಿ ಮೆರುಗು ನೀಡಲಾಗಿದೆ
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಹಲವಾರು ಯುವಕರು ಊರಿನಲ್ಲಿ ಇದ್ದರು. ಗ್ರಾಮದ ಶಾಲೆಯ ಅಭಿವೃದ್ಧಿ ಶಿಕ್ಷಕನ ಕಾರ್ಯಕ್ಕೆ ಮನಸೋತ ಯುವಕರು ಸಹ ಕೈ ಜೋಡಿಸಿದ್ದಾರೆ. ಶಾಲೆಯ ಮೇಲ್ಚಾವಣಿಗೆ ಹೊದಿಸಿದ ಹೆಂಚುಗಳನ್ನು ತೆಗೆದು ಅವುಗಳನ್ನು ಅಂಬಲಗೆರೆ ಕೆರೆಯ ಸಮೀಪಕ್ಕೆ ಕೊಂಡೊಯ್ದು ನೀರಿನಲ್ಲಿ ತೊಳೆದು ತಂದು ಅವುಗಳಿಗೆ ಬಣ್ಣ ಹಚ್ಚಿ ಮೆರುಗು ನೀಡಲಾಗಿದೆ. ಇನ್ನು ಹೊರಗಿನ ಗೋಡೆಗೆ ಸುಣ್ಣ ಬಣ್ಣ ಬಳಿದು, ಗೋಡೆಯ ಮೇಲೆ ಚಿತ್ರಗಳನ್ನು ಬಿಡಿಸಲಾಗಿದೆ. ಒಳಗಡೆಯ ಶಾಲಾ ಗೋಡೆಯ ಮೇಲೆ ರೈಲಿನ ಚಿತ್ರ ಬಿಡಿಸಿ 'ನಮ್ಮೂರ ಎಕ್ಸ್ ಪ್ರೆಸ್' ಎಂದು ನಾಮಕರಣ ಮಾಡಿದ್ದಾರೆ.

ಬಹುಮುಖ ಪ್ರತಿಭೆ ಶಿಕ್ಷಕ ನಾಗಭೂಷಣ್
ಶಿಕ್ಷಕ ನಾಗಭೂಷಣ್ ಬಹುಮುಖ ಪ್ರತಿಭೆಯ ಶಿಕ್ಷಕರಾಗಿದ್ದಾರೆ. ಪಾಠಕ್ಕೂ ಸೈ, ಆಟಕ್ಕೂ ಸೈ, ಡಾನ್ಸಿಗೂ ಸೈ, ಎನಿಸಿಕೊಂಡಿದ್ದಾರೆ. ಕಥೆ, ಕವನ ಹೀಗೆ ಎಲ್ಲಾ ರಂಗದಲ್ಲೂ ತೊಡಗಿಸಿಕೊಂಡಿದ್ದಾರೆ ಜೊತೆಗೆ ರಾಜ್ಯಮಟ್ಟದ ಕ್ರೀಡಾಪಟು ಎಂಬ ಹೆಸರು ಪಡೆದಿದ್ದಾರೆ. ಮಕ್ಕಳ ಪಾಲಿನ ಆರಾಧಕ ಎಂದರೆ ತಪ್ಪಾಗಲಾರದು. ಇವರಿಗೆ ಬರುವ ಸಂಬಳದಲ್ಲಿ ಬಹುತೇಕ ಪಾಲನ್ನು ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಮೀಸಲಿಟ್ಟಿದ್ದಾರೆ. ಏಕೆಂದರೆ ಕಲಿಸದೆ ಎಣಿಸುವ ಸಂಬಳ ನನ್ನದಲ್ಲ ಎನ್ನುವ ಧ್ಯೇಯವನ್ನು ರೂಢಿಸಿಕೊಂಡಿದ್ದಾರೆ.
ಶಾಲೆಯ ಮಕ್ಕಳಿಗೆ ಈ ಶಿಕ್ಷಕ ಎಂದರೇ ಪ್ರಂಚಪ್ರಾಣ. ವಿದ್ಯಾರ್ಥಿಗಳು ಶಾಲೆಗೆ ಶಿಕ್ಷಕ ಬರುವ ದಾರಿಯನ್ನೇ ಕಾಯುತ್ತ ನಿಲ್ಲುತ್ತಾರೆ. ಗ್ರಾಮೀಣ ಪ್ರದೇಶದ ಮುಗ್ದ ಮಕ್ಕಳೊಂದಿಗೆ ಸದಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ವಿದ್ಯಾರ್ಥಿಗಳು ಯಾವ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಕಮ್ಮಿ ಇಲ್ಲದಂತೆ ಇಂಗ್ಲಿಶ್ ಭಾಷೆ ಮಾತನಾಡುತ್ತಾರೆ.
Recommended Video

ಶಾಲೆಗೆ ಭೇಟಿ ನೀಡಿದ ಶಾಸಕಿ
ಅಂಬಲಗೆರೆ ಸರ್ಕಾರಿ ಶಾಲೆಗೆ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಭೇಟಿ ನೀಡಿ ಶಿಕ್ಷಕನನ್ನು ಸನ್ಮಾನಿಸಿ, ಇವರ ಬದಲಾವಣೆಯ ಶ್ರಮಕ್ಕೆ ಮನ ಸೋತಿದ್ದಾರೆ. ಹಿಂದೆ ಇದ್ದ ತಹಶೀಲ್ದಾರ್ ಜಿ. ಎಚ್. ಸತ್ಯನಾರಾಯಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿ. ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಸೇರಿದಂತೆ ಮತ್ತಿತರರು ಶಾಲೆಗೆ ಭೇಟಿ ನೀಡಿ ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ನೀಡುವ ಉತ್ತಮ ಶಿಕ್ಷಕ ಪ್ರಶಸ್ತಿಗೆ ನಾಗಭೂಷಣ್ ಆಯ್ಕೆ ಮಾಡಿಕೊಳ್ಳದಿರುವುದು ಬೇಸರದ ಸಂಗತಿಯಾಗಿದೆ.












Click it and Unblock the Notifications