ಅ.4ರಿಂದ 6ರ ವರೆಗೆ ಶರಣ ಸಂಸ್ಕೃತಿ ಉತ್ಸವ; ಚಿತ್ರದುರ್ಗ ಮುರುಘಾ ಮಠದಲ್ಲಿ ಹಬ್ಬದ ವಾತಾವರಣ
ಚಿತ್ರದುರ್ಗ, ಅಕ್ಟೋಬರ್ 03: ಚಿತ್ರದುರ್ಗದ ಮುರುಘಾ ಮಠದಲ್ಲಿ ಅಕ್ಟೋಬರ್ 4ರಿಂದ 6ರ ವರೆಗೆ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ.
ಜಿಲ್ಲೆಯಲ್ಲಿ ಇದನ್ನು ಮಿನಿ ದಸರಾ ಹಬ್ಬ ಎಂದೇ ಭಾವಿಸಿದ್ದು, ಶರಣ ಸಂಸ್ಕೃತಿ ಉತ್ಸವದಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುತ್ತಿದ್ದರು. ಚಿತ್ರದುರ್ಗ ಮುರುಘಾ ಮಠದ ಪರಂಪರೆಯಲ್ಲಿ ಹಲವು ವರ್ಷಗಳಿಂದ ಮಾಡಿಕೊಂಡ ಬರಲಾಗುತ್ತಿದೆ.
ದಸರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷ 9 ದಿನಗಳ ಕಾಲ ಉತ್ಸವ ನಡೆಸಲಾಗುತ್ತಿತ್ತು. ಶೂನ್ಯ ಪೀಠದ ಅಧ್ಯಕ್ಷರಾದ ಅಲ್ಲಮಪ್ರಭು, ಹಾಗೂ ಬಸವೇಶ್ವರರ ತತ್ವ ಸಿದ್ದಾಂತದ ಆಧಾರದ ಮೇಲೆ ಮುರುಘಾ ಮಠದಲ್ಲಿ ಪ್ರತಿ ವರ್ಷ ಕಾರ್ಯಕ್ರಮಗಳು ಜರುಗುತ್ತಿದ್ದವು. ಈ ಬಾರಿ ಸಂದಿಗ್ಧ ಸ್ಥಿತಿ ಬಂದಿರುವ ಕಾರಣ 9 ದಿನಗಳ ಕಾರ್ಯಕ್ರಮವನ್ನು 3 ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.

ಶರಣ ಸಂಸ್ಕೃತಿ ಕಾರ್ಯಕ್ರಮದ ವಿವರ
ಅಕ್ಟೋಬರ್ 4 ಮಂಗಳವಾರ ಬಸವತತ್ವ ಧ್ವಜಾರೋಹಣ, ಉತ್ಸವ ಉದ್ಘಾಟನೆ ನಡೆಯಲಿದೆ. ಅಕ್ಟೋಬರ್ 5 ಬುಧವಾರದಂದು ಸಾಮೂಹಿಕ ಕಲ್ಯಾಣ ಮಹೋತ್ಸವ ಜರುಗಲಿದೆ. ಅಕ್ಟೋಬರ್ 6ರಂದು ಮುರುಘಾ ಶಾಂತವೀರಶ್ರೀ ಭಾವಚಿತ್ರದೊಂದಿಗೆ ಪೀಠಾರೋಹಣ ಮುರುಘಾಮಠದಲ್ಲಿ ಕಾರ್ಯಕ್ರಮ ನಡೆಯಲಿದೆ.
ಮುರುಘಾ ಮಠದ ಪ್ರಭಾರ ಪೀಠಾಧ್ಯಕ್ಷರಾದ ಮಹಾಂತ ರುದ್ರೇಶ್ವರ ಶ್ರೀಗಳ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಉಳಿದಂತೆ ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಗುರುಮಠಕಲ್ನ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ತಿಪಟೂರು ಶ್ರೀ ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮಿಗಳು ಭಾಗವಹಿಸಲಿದ್ದಾರೆ. ಪ್ರಾಚೀನ ಮುರುಘಾ ಪೀಠಾಧೀಶರ ಸಾಹಿತ್ಯ ವಿಷಯ ಕುರಿತು ಸಾಹಿತಿ ಡಾ. ಬಿ.ನಂಜುಂಡಸ್ವಾಮಿ ಪ್ರಸ್ತಾಪಿಸಲಿದ್ದಾರೆ. ಅಂತಾರಾಷ್ಟ್ರೀಯ ಗಾಯಕ ಮೃತ್ಯುಂಜಯ ಶೆಟ್ಟರ್ ಅವರಿಂದ ವಚನ ಸಂಗೀತ ಇರುತ್ತದೆ. ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತರುದ್ರೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಶ್ರೀಮಠದ ಶಾಖಾಮಠಗಳ ಪೂಜ್ಯರು ಹಾಗೂ ವಿವಿಧ ಸಮಾಜದ ಮಠಾಧೀಶರುಗಳು ಭಾಗವಹಿಸಲಿದ್ದಾರೆ.
ಮೈಸೂರು ದಸರಾದಂತೆ ಶರಣ ಸಂಸ್ಕೃತಿ ಉತ್ಸವ
ಮೈಸೂರಿನಲ್ಲಿ ನಾಡಹಬ್ಬ ದಸರಾ ಹೇಗೋ ಅದೇ ರೀತಿ ಮಧ್ಯ ಕರ್ನಾಟಕದಲ್ಲಿ ಮೊದಲಿನಿಂದಲೂ ಶರಣ ಸಂಸ್ಕೃತಿ ಉತ್ಸವ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ. ಮಿನಿ ದಸರಾ ಹಬ್ಬ ಎಂದೇ ಜನರು ಭಾವಿಸಿ ಶರಣ ಸಂಸ್ಕೃತಿ ಉತ್ಸವದಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

ಇನ್ನು ಇದೇ ವೇಳೆ ಶರಣ ಸಂಸ್ಕೃತಿ ಉತ್ಸವದ ಗೌರವ ಅಧ್ಯಕ್ಷರಾದ ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, "ದಸರಾ ಸಂದರ್ಭದಲ್ಲಿ ಪ್ರತಿವರ್ಷ ಮುರುಘಾಮಠ ಆಯೋಜಿಸುತ್ತಿದ್ದ ಶರಣ ಸಂಸ್ಕೃತಿ ಉತ್ಸವ ಒಂಬತ್ತು ದಿನ ನಡೆಯುತ್ತಿದ್ದ ಉತ್ಸವವನ್ನು ಈ ವರ್ಷ 3ದಿನಕ್ಕೆ ಸೀಮಿತ ಮಾಡಲಾಗಿದೆ. ಕೋಟೆಯೊಳಗಿನ ಮಠದಲ್ಲಿ ರಾಜವಂಶಸ್ಥರಿಂದ ಭಕ್ತಿ ಸಮರ್ಪಣೆ ಮಾಡಲಾಗುವುದು ಎಂದಿದ್ದರು. ಅಕ್ಟೋಬರ್ 5ರಂದು ಮುರುಘಾ ಶಾಂತವೀರ ಶ್ರೀ ಭಾವಚಿತ್ರದೊಂದಿಗೆ ಪೀಠಾರೋಹಣ ಮುರುಘಾ ಮಠದಲ್ಲಿ ನಡೆಯಲಿದೆ. ಮುರುಘಾ ಮಠದ ಪ್ರಭಾರ ಪೀಠಾಧ್ಯಕ್ಷರಾದ ಮಹಾಂತ ರುದ್ರೇಶ್ವರ ಶ್ರೀಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು. ಜೊತೆಗೆ ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ," ಎಂದು ನುಡಿದರು.












Click it and Unblock the Notifications